
ಕೇರಳದ ಕೊಟ್ಟಾಯಂನಲ್ಲಿರುವ ಕುಟುಂಬವೊಂದು ತಮ್ಮ ಕುಟುಂಬದ ಎಲ್ಲಾ ಐದು ಸದಸ್ಯರ ದಯಾ ಮರಣಕ್ಕೆ ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.
ಅಪರೂಪದ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಮುಂದುವರಿಸುವ ಪ್ರಯತ್ನ ವಿಫಲವಾಗಿದೆ. ಇದರಿಂದಾಗಿ ತಮ್ಮ ಬೇರಾವುದೇ ಕೆಲಸ ಮಾಡಲಾಗುತ್ತಿಲ್ಲ, ದುಡಿಮೆಯೂ ಇಲ್ಲ, ಭರವಸೆಯೂ ಇಲ್ಲ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ಈ ಜಿಲ್ಲೆಯ ಕೊಝುವನಾಲ್ನ ಸ್ಮಿತಾ ಆಂಟೋನಿ ಮತ್ತು ಮನು ಜೋಸೆಫ್ ದಂಪತಿ, ಸಾಲ್ಟ್-ವೇಸ್ಟಿಂಗ್ ಕಂಜೆನಿಟಲ್ ಅಡ್ರಿನಲ್ ಹೈಪರ್ಪ್ಲಾಸಿಯಾ (SWCAH) ಎಂಬ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮೂವರು ಮಕ್ಕಳಲ್ಲಿ ಇಬ್ಬರಿಗೆ ಚಿಕಿತ್ಸೆಯನ್ನು ಮುಂದುವರಿಸಲು ಯಾವುದೇ ಮಾರ್ಗವನ್ನು ಕಂಡುಕೊಳ್ಳದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾಗಿ ಪಿಟಿಐ ತಿಳಿಸಿದೆ.
ಸಾಲ್ಟ್-ವೇಸ್ಟಿಂಗ್ ಕಂಜೆನಿಟಲ್ ಅಡ್ರಿನಲ್ ಹೈಪರ್ಪ್ಲಾಸಿಯಾ ಕಾಯಿಲೆಯು ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುವ ಮೂತ್ರಜನಕಾಂಗದ ಗ್ರಂಥಿಗಳ ಮೇಲೆ ಪರಿಣಾಮ ಬೀರುವ ಆನುವಂಶಿಕ ಅಸ್ವಸ್ಥತೆಯಾಗಿದೆ.
ತಾನು ಮತ್ತು ತನ್ನ ಪತಿ ವೃತ್ತಿಯಲ್ಲಿ ನರ್ಸ್ಗಳಾಗಿದ್ದರೂ, ಮಕ್ಕಳಿಗೆ ಪೂರ್ಣ ಸಮಯದ ಆರೈಕೆಯ ಅಗತ್ಯವಿರುವುದರಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಮಿತಾ ಹೇಳಿದ್ದಾರೆ.
ಕೊಟ್ಟಾಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಿತಾ, 'ಮಕ್ಕಳ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಈಗಾಗಲೇ ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಒತ್ತೆ ಇಡಲಾಗಿದೆ. ನಮ್ಮ ದೈನಂದಿನ ವೆಚ್ಚಗಳಿಗೆ, ಕಿರಿಯ ಮಕ್ಕಳ ಚಿಕಿತ್ಸೆಗೆ ಮತ್ತು ಹಿರಿಯ ಮಗುವಿನ ಶಿಕ್ಷಣಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ. ಆದಾಯವಿಲ್ಲದ ಕಾರಣ ಜೀವನವನ್ನು ಮುಂದುವರಿಸಲು ಸಾಧ್ಯವಿಲ್ಲ'ಎಂದಿದ್ದಾರೆ.
ಕೆಲಸ ಮತ್ತು ಚಿಕಿತ್ಸೆಗೆ ನೆರವು ನೀಡುವಂತೆ ಸ್ಥಳೀಯ ಪಂಚಾಯತ್ಗೆ ಮನವಿ ಮಾಡಿದರೂ ಯಾವುದೇ ಬೆಂಬಲ ನೀಡಿಲ್ಲ ಎಂದು ಸ್ಮಿತಾ ಆರೋಪಿಸಿದ್ದಾರೆ. ಚಾಯತ್ ಸಮಿತಿಯು ಕೆಲವು ಸಮಯದ ಹಿಂದೆ ತನಗೆ ಕೆಲಸ ನೀಡಲು ಒಗ್ಗಟ್ಟಿನಿಂದ ನಿರ್ಧರಿಸಿದರೆ, ಅದರ ಕಾರ್ಯದರ್ಶಿ ನಿರ್ಧಾರದ ಬಗ್ಗೆ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲು ವಿಫಲರಾಗಿದ್ದಾರೆ. ಹಲವು ಬಾರಿ ದೂರು ನೀಡಿದರೂ ಇದುವರೆಗೆ ಏನೂ ಆಗಿಲ್ಲ ಎಂದು ದೂರಿದ್ದಾರೆ.
ಮಾನವ ಹಕ್ಕುಗಳ ಸಮಿತಿ ಮಧ್ಯಪ್ರವೇಶಿಸಿದ ನಂತರ ಕಾರ್ಯದರ್ಶಿ ಕಡತವನ್ನು ಸರ್ಕಾರಕ್ಕೆ ಕಳುಹಿಸಿದ್ದರೂ ಭರವಸೆ ನೀಡಿದ ಕೆಲಸದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ವಿವರಿಸಿದರು.
'ಆದ್ದರಿಂದ, ನಮ್ಮ ಕುಟುಂಬಕ್ಕೆ ಈಗ ದಯಾ ಹತ್ಯೆಗೆ ವಿನಂತಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಕುಟುಂಬವು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದೆ. ಈಗ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದೇವೆ'ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ