ಒಂದೇ ವರ್ಷದಲ್ಲಿ ಚಿನ್ನದ ಚೋರಿ ರನ್ಯಾಳಿಂದ 1.27 ಕ್ವಿಂಟಲ್ ಚಿನ್ನ ಸ್ಮಗ್ಲಿಂಗ್!

Kannadaprabha News   | Kannada Prabha
Published : Feb 26, 2026, 06:42 AM IST
Ranya Rao gold smuggling case

ಸಾರಾಂಶ

ನಟಿ ರನ್ಯಾ ರಾವ್ ಮತ್ತು ಸಹಚರರ ವಿರುದ್ಧ ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ದೋಷಾರೋಪಪಟ್ಟಿ ಸಲ್ಲಿಸಿದೆ. ಆರೋಪಿಗಳು ಒಂದೇ ವರ್ಷದಲ್ಲಿ 102.55 ಕೋಟಿ ರೂ. ಮೌಲ್ಯದ 127 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿ, ಹವಾಲಾ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ.  

ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ(ಇ.ಡಿ.)ವು ತನಿಖೆ ನಡೆಸಿ ಪ್ರಮುಖ ಆರೋಪಿ, ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ ಹಾಗೂ ಸಹ ಆರೋಪಿಗಳಾದ ತರುಣ್‌ ಕೊಂಡೂರು ಮತ್ತು ಸಾಹಿಲ್‌ ಸಕಾರಿಯಾ ಜೈನ್‌ ವಿರುದ್ಧ ನಗರದ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.

ಪ್ರಮುಖ ಆರೋಪಿ ರನ್ಯಾ ರಾವ್‌ ಅವರು 2025ರ ಮಾ.3ರಂದು 12.56 ಕೋಟಿ ರು. ಮೌಲ್ಯದ 14 ಕೆ.ಜಿ. ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಣೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆಯ ದಾಳಿ ನಡೆಸಿ ಶೋಧಿಸಿದಾಗ 2.06 ಕೋಟಿ ರು. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರು. ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಡಿಆರ್‌ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು.

ಒಂದೇ ವರ್ಷದಲ್ಲಿ 127 ಕೆ.ಜಿ. ಚಿನ್ನ ಕಳ್ಳ ಸಾಗಣೆ:

ಆರೋಪಿಗಳು 2024ರ ಮಾರ್ಚ್‌ನಿಂದ 2025ರ ಮಾರ್ಚ್‌ ಅವಧಿಯವರೆಗೆ ಸುಮಾರು 102.55 ಕೋಟಿ ರು. ಮೌಲ್ಯದ 127 ಕೆ.ಜಿ. ಚಿನ್ನವನ್ನು ವಿದೇಶದಿಂದ ಭಾರತಕ್ಕೆ ಕಳ್ಳ ಸಾಗಣೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಬಹಿರಂಗವಾಗಿದೆ.

ಕಳ್ಳ ಸಾಗಣೆ ಮೂಲಕ ಭಾರತಕ್ಕೆ ತಂದ ಈ ಚಿನ್ನವನ್ನು ಪರಿಚಿತರು ಹಾಗೂ ಆಭರಣ ವ್ಯಾಪಾರಿಗಳ ಜಾಲದ ಮುಖಾಂತರ ದೇಶಿಯ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡಿದ್ದರು. ಇದರಿಂದ ಬಂದ ಆದಾಯವನ್ನು ನಗದು ರೂಪದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಹವಾಲಾ ಮಾರ್ಗಗಳಲ್ಲಿ ಪಡೆದುಕೊಂಡಿದ್ದರು. ಈ ಹಣವನ್ನು ಸಕ್ರಮಗೊಳಿಸುವ ಮತ್ತು ಕಾನೂನುಬದ್ಧ ವ್ಯವಹಾರ ವಹಿವಾಟು ಎಂದು ಬಿಂಬಿಸಲು ಹಲವು ಬ್ಯಾಂಕ್ ಖಾತೆಗಳು ಮತ್ತು ಸಂಸ್ಥೆಗಳನ್ನು ಬಳಸಿಕೊಂಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರನ್ಯಾ 34 ಕೋಟಿ ಸ್ಥಿರಾಸ್ತಿ ಜಪ್ತಿ:

ಈ ಪ್ರಕರಣ ಸಂಬಂಧ ಇ.ಡಿ. 2025ರ ಮೇ 21 ಮತ್ತು 22ರಂದು ರಾಜ್ಯದ 16 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿತ್ತು. ಈ ವೇಳೆ ಪತ್ತೆಯಾದ ಹಲವು ಅಪರಾಧದ ದಾಖಲೆಗಳು, ಡಿಜಿಟಲ್‌ ಸಾಧನಗಳು, ಭಾರತೀಯ ಕರೆನ್ಸಿ ಮತ್ತು ವಿದೇಶಿ ಕರೆನ್ಸಿಗಳನ್ನು ಜಪ್ತಿ ಮಾಡಿತ್ತು. ಈ ಸಂಬಂಧ ಹಲವು ವ್ಯಕ್ತಿಗಳ ಹೇಳಿಕೆ ದಾಖಲಿಸಿತ್ತು. ಇದೇ ಪ್ರಕರಣ ಸಂಬಂಧ ಪ್ರಮುಖ ಆರೋಪಿ ರನ್ಯಾ ರಾವ್‌ ಹೆಸರಿನಲ್ಲಿದ್ದ 34.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು.

ಆರೋಪಿಗಳು ಸಂಘಟಿತವಾಗಿ ವಿದೇಶದಲ್ಲಿ ಚಿನ್ನ ಸಂಗ್ರಹಣೆ, ಭಾರತಕ್ಕೆ ಅಕ್ರಮ ಆಮದು, ನಗದು ಆಧಾರಿತ ವಿಲೇವಾರಿ, ಹವಾಲಾ ಮತ್ತು ಬ್ಯಾಂಕಿಂಗ್‌ ಮಾರ್ಗಗಳ ಮುಖಾಂತರ ಅದಾಯದ ಅಕ್ರಮ ವರ್ಗಾವಣೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಬಯಲಾಗಿದೆ. ಇಂತಹ ಚಟುವಟಿಕೆಗಳು ವ್ಯಾಪಾರ ಮತ್ತು ಹಣಕಾಸು ವ್ಯವಸ್ಥೆಗಳನ್ನು ಹಾಳು ಮಾಡುತ್ತದೆ. ಗಡಿಯಾಚೆಗಿನ ವಹಿವಾಟುಗಳನ್ನು ನಿಯಂತ್ರಿಸಲು ಉದ್ದೇಶಿರುವ ಸಂಸ್ಥೆಗಳು ಸಾರ್ವಜನಿಕರ ನಂಬಿಕೆ ಕಳೆದುಕೊಳ್ಳುತ್ತವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನ್ಯಾಯಾಂಗದ ಭ್ರಷ್ಟಾಚಾರ’ ಪಠ್ಯಕ್ಕೆ ಕೊಕ್‌
ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಹೊರೆ! ಆದ್ರೂ ರಾಜ್ಯದ ಜನಕ್ಕೆ ಶಕ್ತಿ ತುಂಬುತ್ತಿದ್ದೇವೆ: ಡಿಕೆಶಿ