Latest Videos

ಕಾಂಗ್ರೆಸ್‌ಗೆ ತುರ್ತು ಪರಿಸ್ಥಿತಿ ಸಂಕಷ್ಟ, ಮೋದಿ ಬಳಿಕ ರಾಷ್ಟ್ರಪತಿ, ಸ್ಪೀಕರ್ ಸೇರಿ ಹಲವರ ಖಂಡನೆ!

By Chethan KumarFirst Published Jun 28, 2024, 7:58 AM IST
Highlights

ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಇದೀಗ ತುರ್ತು ಪರಿಸ್ಥಿತಿ ನುಂಗಲಾರದ ತುತ್ತಾಗಿದೆ. ಮೋದಿ, ಸ್ಪೀಕರ್ ಬಳಿಕ ಇದೀಗ ರಾಷ್ಟ್ರಪತಿ ಮುರ್ಮು ಕೂಡ ತುರ್ತು ಸ್ಥಿತಿ ಖಂಡಿಸಿದ್ದಾರೆ. 
 

ನವದೆಹಲಿ(ಜೂ.28)  ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ಖಂಡಿಸಿದ ಬಳಿಕ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಅದನ್ನು ಖಂಡಿಸಿದ್ದಾರೆ. ‘ತುರ್ತು ಪರಿಸ್ಥಿತಿ ಹೇರಿಕೆಯು ಸಂವಿಧಾನದ ಮೇಲಿನ ನೇರ ದಾಳಿಯಾಗಿದ್ದು, ಅತಿದೊಡ್ಡ ಕರಾಳ ಅಧ್ಯಾಯವಾಗಿದೆ. ಆದರೆ ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ವಿಜಯಶಾಲಿಯಾಗಿದೆ’ ಎಂದು ಪ್ರಹಾರ ನಡೆಸಿದ್ದಾರೆ.

18ನೇ ಲೋಕಸಭೆಯ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನವನ್ನು ರಚಿಸುವಾಗ, ಭಾರತವು ವಿಫಲವಾಗಬೇಕೆಂದು ಬಯಸುವ ಶಕ್ತಿಗಳು ಜಗತ್ತಿನಲ್ಲಿದ್ದವು. ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನದ ಮೇಲೆ ಹಲವಾರು ದಾಳಿಗಳು ನಡೆದಿವೆ. 1975ರ ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಿಕೆ ಆಗಿದ್ದು ಸಂವಿಧಾನದ ಮೇಲಿನ ನೇರ ದಾಳಿಯ ಅತಿದೊಡ್ಡ ಮತ್ತು ಕರಾಳ ಅಧ್ಯಾಯವಾಗಿದೆ. ಅದರ ಹೇರಿಕೆ ಬಳಿಕ ಇಡೀ ದೇಶವು ಆಕ್ರೋಶಗೊಂಡಿತು. ಆದರೆ ಇಂಥ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ವಿಜಯಶಾಲಿಯಾಗಿದೆ. ಏಕೆಂದರೆ ಭಾರತದ ಗಣತಂತ್ರ ಸಂಪ್ರದಾಯ ಅಷ್ಟು ಗಟ್ಟಿಯಾಗಿದೆ’ ಎಂದರು.

‘ಸರ್ಕಾರವು ಕೂಡ ಭಾರತದ ಸಂವಿಧಾನವನ್ನು ಕೇವಲ ‘ಆಡಳಿತದ ಮಾಧ್ಯಮ’ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಸಂವಿಧಾನವು ಸಾರ್ವಜನಿಕ ಪ್ರಜ್ಞೆಯ ಭಾಗವಾಗಬೇಕು ಎಂದು ಶ್ರಮಿಸುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲು ಪ್ರಾರಂಭಿಸಿದೆ’ ಎಂದು ಹೇಳಿದರು.

‘ಈಗ ಸಂವಿಧಾನವು ಭಾರತದ ಆ ಭಾಗವಾದ ನಮ್ಮ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದಿದೆ. ಇದಕ್ಕೂ ಮುನ್ನ ಅಲ್ಲಿ 370 ನೇ ವಿಧಿಯಿಂದಾಗಿ ಪರಿಸ್ಥಿತಿಗಳು ವಿಭಿನ್ನವಾಗಿದ್ದವು’ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದವರಿಗೆ ಸಂವಿಧಾನದ ಮೇಲೆ ಪ್ರೀತಿ ತೋರಿಸುವ ಹಕ್ಕಿಲ್ಲ. ತುರ್ತು ಪರಿಸ್ಥಿತಿ ಹೇರಿದ ಮನಸ್ಥಿತಿಯು ಆ ಪಕ್ಷದಲ್ಲಿಇಂದಿಗೂ ಜೀವಂತವಾಗಿದೆ. ಅವರು ಸಂವಿಧಾನದ ಮೇಲೆ ತಿರಸ್ಕಾರ ಮರೆ ಮಾಚಲು ಪ್ರಯತ್ನಿಸುತ್ತಾರೆ. ಆದರೆ ಭಾರತದ ಜನರು ಈ ಹಿಂದಿನ ಅವರ ವರ್ತನೆಗಳನ್ನು ನೋಡಿದ್ದಾರೆ. ಹೀಗಾಗಿಯೇ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.

click me!