ಅಪ್ಪನ ತೀಟೆಗೆ ಹೊರಟೋಯ್ತು ಪುಟ್ಟ ಮಗನ ಪ್ರಾಣ: ತಂದೆಯ ಲೀವಿಂಗ್ ಪಾರ್ಟನರ್‌ನಿಂದ ಮಗನ ಕೊಲೆ

By Anusha KbFirst Published Aug 16, 2023, 2:29 PM IST
Highlights

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ನಡೆದಿದೆ. ಲೀವಿಂಗ್‌ ಪಾರ್ಟನರ್‌ನ 11 ವರ್ಷದ ಅಪ್ರಾಪ್ತ ಪುತ್ರನನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು  24 ವರ್ಷದ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ನಡೆದಿದೆ. ಲೀವಿಂಗ್‌ ಪಾರ್ಟನರ್‌ನ 11 ವರ್ಷದ ಅಪ್ರಾಪ್ತ ಪುತ್ರನನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು  24 ವರ್ಷದ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.  ಪೂಜಾ ಕುಮಾರಿ ಬಂಧಿತ ಮಹಿಳೆ. ತನ್ನ ಪತ್ನಿಯಿಂದ ಲೀವಿಂಗ್ ಪಾರ್ಟನರ್ ವಿಚ್ಛೇದನ ಪಡೆಯಲು ಮನಸ್ಸು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆ ಆತನ 11 ವರ್ಷದ ಮಗನನ್ನು ಕೊಂದು ಬಾಲಕನ ಶವವನ್ನು ಬೆಡ್‌ ಬಾಕ್ಸ್‌ನಲ್ಲಿ ಹಾಕಿಟ್ಟಿದ್ದಾಳೆ.  ತನ್ನ ಮದುವೆಯಾದ ಜೀತೇಂದ್ರ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಇರುವುದಕ್ಕೆ ಮಗನಿರುವುದೇ ಕಾರಣ ಎಂದುಭಾವಿಸಿ  ಪೂಜಾ ಆತನ ಮಗನನ್ನೇ ಮುಗಿಸಿ ಬಿಟ್ಟಿದ್ದಾಳೆ. 

ಬಾಲಕ ಮಲಗಿ ನಿದ್ದೆ ಮಾಡುತ್ತಿದ್ದ ವೇಳೆ ಈ ಪಾಪಿ ಮಹಿಳೆ ಆಕೆಯ ಕತ್ತು ಬಿಗಿದು ಹತ್ಯೆ ಮಾಡಿದ್ದಾಳೆ. ನಂತರ ಆತನ ಮೃತದೇಹವನ್ನು ಹಾಸಿಗೆ ಕೆಳಗಿರುವ ಬೆಡ್‌ ಬಾಕ್ಸ್‌ನಲ್ಲಿ (Bed Box) ಹಾಕಿ ಮುಚ್ಚಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಇಂದೆರ್‌ಪುರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅಡಿ ಪ್ರಕರಣ ದಾಖಲಾಗಿದೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ 8.30ಕ್ಕೆ ಬಿಎಲ್‌ಕೆ ಆಸ್ಪತ್ರೆಯಿಂದ ಪೊಲೀಸರಿಗೆ ಕರೆ ಬಂದಿದ್ದು, ಬಾಲಕನೋರ್ವ ಆಸ್ಪತ್ರೆಗೆ ಕರೆತರುವ ವೇಳೆಯೇ ಮೃತಪಟ್ಟಿದ್ದು, ಆತನ ಕುತ್ತಿಗೆಯ ಬಳಿ ಗಾಯದ ಗುರುತಿದೆ ಎಂದು ಮಾಹಿತಿ ನೀಡಿದ್ದಾರೆ.  ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. 

Latest Videos

ಈ ವೇಳೆ ಮಗುವಿದ್ದ ಮನೆಗೆ ಪೂಜಾ ಕುಮಾರಿ ಹೋಗಿರುವ ದೃಶ್ಯ ಸೆರೆ ಆಗಿತ್ತು. ಮಲಗಿದ್ದ ಬಾಲಕನನ್ನು ಹತ್ಯೆ ಮಾಡಿದ ಆಕೆ ಶವವನ್ನು ಹಾಸಿಗೆ ಕೆಳಗಿನ ಬೆಡ್ ಬಾಕ್ಸ್‌ನಲ್ಲಿ ಇರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 300 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದ ನಂತರ ಆಕೆಯನ್ನು ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಕಮೀಷನರ್ ರವೀಂದ್ರ ಸಿಂಗ್ ಯಾದವ್ ಹೇಳಿದ್ದಾರೆ. 

ಇನ್ನು ಈ ಬಾಲಕನ ಕೊಲೆಗೈದ ಪೂಜಾ ಬಾಲಕನ ತಂದೆ ಜಿತೇಂದ್ರನನ್ನು (Jitendra) 2019ರ ಆಕ್ಟೋಬರ್ 17 ರಂದು ಆರ್ಯ ಸಮಾಜದಲ್ಲಿ (Arya samaja) ಮದುವೆಯಾಗಿದ್ದಳು.  ಪೂಜಾಳ ಮದುವೆಯ ವೇಳೆ ಜೀತೆಂದ್ರನಿನ್ನೂ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರಲಿಲ್ಲ,  ಆರ್ಯ ಸಮಾಜದಲ್ಲಿ ಮದುವೆಯ ವೇಳೆ ಆತ ಪತ್ನಿಯಿಂದ ವಿಚ್ಛೇದನದ ನಂತರ ಕೋರ್ಟ್‌ ಮ್ಯಾರೇಜ್ ಆಗುವುದಾಗಿ ಪೂಜಾಳಿಗೆ ಭರವಸೆ ನೀಡಿದ್ದ. ನಂತರ ಪೂಜಾ ಹಾಗೂ ಜಿತೇಂದ್ರ ಇಬ್ಬರೂ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಆದರೆ ಇವರಿಬ್ಬರ ನಡುವೆ ಮೊದಲ ಪತ್ನಿಗೆ ವಿಚ್ಛೇದನ (Divorce) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿತ್ತು ಗಲಾಟೆಯ ವೇಳೆ ತಾನು ಮೊದಲ ಪತ್ನಿಗೆ ವಿಚ್ಛೇದನ ನೀಡುವುದಿಲ್ಲ ಎಂದು ಜಿತೇಂದ್ರ ಹೇಳಿದ್ದ. ಬರೀ ಇಷ್ಟೇ ಅಲ್ಲ, ಪೂಜಾಳ ಮನೆಯಿಂದ ಹೊರಟು ಹೋಗಿ ಮೊದಲ ಪತ್ನಿಯ ಜೊತೆಯೇ ವಾಸಿಸಲು ಶುರು ಮಾಡಿದ್ದ. ಇದು ಪೂಜಾಳನ್ನು ಮತ್ತಷ್ಟು ಕೆರಳುವಂತೆ ಮಾಡಿತ್ತು. 

ಕಳೆದ ಡಿಸೆಂಬರ್‌ನಲ್ಲಿ ಜಿತೇಂದ್ರ ಪೂಜಾಳ ಸಹವಾಸ ತೊರೆದಿದ್ದ, ಇದು ಪೂಜಾಳನ್ನು ಮತ್ತಷ್ಟು ಸಿಟ್ಟುಗೊಳ್ಳುವಂತೆ ಮಾಡಿತ್ತು. ಮಗನ ಕಾರಣಕ್ಕೆ ಜೀತೇಂದ್ರ ತನ್ನ ಬಿಟ್ಟು ಹೋದ ಎಂದು ಭಾವಿಸಿದ್ದ ಪೂಜಾ ತನ್ನ ಸ್ನೇಹಿತರನ್ನು ಭೇಟಿಯಾಗಿ ಜೀತೇಂದ್ರನ ಮನೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅದರಂತೆ ಸ್ನೇಹಿತರ ಜೊತೆ ಇಂದೆರ್‌ಪುರಿಯ ಜೆಜೆ ಕಾಲೋನಿಯಲ್ಲಿರುವ ಜಿತೇಂದರ್ ಮನೆಗೆ ತೆರಳಿದ್ದು, ಈ ವೇಳೆ ಜೀತೇಂದ್ರನ ಪುತ್ರ ದಿವ್ಯಾಂಶ್ ಅಲಿಯಾಸ್ ಬಿಟ್ಟೂ ನಿದ್ದೆಗೆ ಜಾರಿದ್ದ. ಇದೇ ಸುವರ್ಣಾವಕಾಶವನ್ನು ಬಳಸಿಕೊಂಡ ಪೂಜಾ ಕುಮಾರಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆತನ ಬೆಡ್‌ ಬಾಕ್ಸ್‌ನಲ್ಲಿದ್ದ ಬಟ್ಟಯನ್ನು ಹೊರಗೆ ತೆಗೆದು ಅಲ್ಲಿ ಬಾಲಕನ ಮೃತದೇಹವನ್ನು ತುಂಬಿಸಿ ಬಾಗಿಲು ಲಾಕ್ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ. ಒಟ್ಟಿನಲ್ಲಿ ಅಪ್ಪನ ಅಕ್ರಮ ಸಂಬಂಧಕ್ಕೆ ಪುತ್ರ ಪ್ರಾಣ ಬಿಡುವಂತಾಗಿದೆ. 

click me!