
ನವದೆಹಲಿ: ರೋಲರ್ ಕೋಸ್ಟರ್ ರೈಡ್ ವೇಳೆ ರಕ್ಷಣಾ ರಾಡ್ ಕಟ್ ಆಗಿ ಮೇಲಿನಿಂದ ಕೆಳಗೆ ಬಿದ್ದು ಮದುವೆ ನಿಗದಿಯಾಗಿದ್ದ ಯುವತಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿದ್ದ ಮನೋರಂಜನಾ ಪಾರ್ಕೊಂದರಲ್ಲಿ ನಡೆದಿದೆ. ಮೃತ ಯುವತಿಯನ್ನು 25ರ ಹರೆಯದ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಗುರುವಾರ ಪ್ರಿಯಾಂಕಾ ತಮ್ಮ ಮದುವೆ ನಿಗದಿಯಾಗಿದ್ದ ಹುಡುಗನೊಂದಿಗೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್ಗೆ ಭೇಟಿ ನೀಡಿದ್ದರು. ಈ ವೇಳೆ ಈ ಜೋಡಿ ರೋಲರ್ ಕೋಸ್ಟರ್ ರೈಡ್ ಹೋಗಿದ್ದು, ರೈಡ್ ನಡುವೆಯೇ ರಕ್ಷಣಾ ರಾಡ್ ಕಟ್ ಆಗಿ ಪ್ರಿಯಾಂಕಾ ಕೆಳಗೆ ಬಿದ್ದಿದ್ದಾರೆ.
ಪ್ರಿಯಾಂಕಾ ಕೆಲವೇ ತಿಂಗಳಲ್ಲಿ ಹಸೆಮಣೆ ಏರಬೇಕಿತ್ತು. ತಮ್ಮನ್ನು ವಿವಾಹವಾಗಬೇಕಿದ್ದ ಹುಡುಗ ನಿಖಿಲ್ ಜೊತೆ ಅವರು ವಾಟರ್ & ಅಮ್ಯೂಸ್ಮೆಂಟ್ ಪಾರ್ಕ್ಗೆ ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಸ್ವಿಂಗ್ ಆಗುವ ರೋಲರ್ ಕೋಸ್ಟರ್ ರೈಡ್ ನಡಯುತ್ತಿದ್ದ ವೇಳೆಯೇ ರಾಡ್ ಸಡಿಲಗೊಂಡು ಪ್ರಿಯಾಂಕಾ ಕೆಳಗೆ ಬಿದ್ದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ನಿಖಿಲ್ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 2023ರ ಜನವರಿಯಲ್ಲಿ ಪ್ರಿಯಾಂಕಾಗೆ ನಿಶ್ಚಿತಾರ್ಥವಾಗಿದ್ದು, 2026ರಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗೆ ಮೊದಲು ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಪ್ರಿಯಾಂಕಾ ಭಾವಿಸಿದ್ದರು. ಹೀಗಾಗಿ ನೋಯ್ಡಾದ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಮಾರಾಟ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಮದುವೆಗೆ ಮೊದಲು ಆರ್ಥಿಕವಾಗಿ ನೆರವಾಗುವುದಾಗಿ ಕುಟುಂಬಕ್ಕೆ ತಿಳಿಸಿದ್ದರು. ಹೀಗಾಗಿ ವಿಳಂಬವಾಗಿ ಮದುವೆ ಆಗುವುದಕ್ಕೆ ಅವರ ಕುಟುಂಬ ಒಪ್ಪಿಗೆ ಸೂಚಿಸಿತ್ತು.
ಇತ್ತ ನಿಖಿಲ್ ಹಾಗೂ ಪ್ರಿಯಾಂಕಾ ಇಬ್ಬರು ಪರಸ್ಪರ ಬಒಬ್ಬರಿಗೊಬ್ಬರು ಆರ್ಥಿಕವಾಗಿ ಬೆಂಬಲವಾಗಿದ್ದರು. ಇವರು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೋರಂಜನಾ ಪಾರ್ಕ್ ತಲುಪಿದ್ದಾರೆ. ಆರಂಭದಲ್ಲಿ ನೀರಿನ ಆಟಗಳನ್ನು ಆಡಿದ ಅವರು ನಂತರ ಸಂಜೆ ವೇಳೆಗೆ ಮನೋರಂಜನಾ ವಿಭಾಗಕ್ಕೆ ಹೋಗಿದ್ದಾರೆ. ಸರಿಸುಮಾರು ಸಂಜೆ 6:15 ಕ್ಕೆ, ಅವರು ರೋಲರ್ ಕೋಸ್ಟರ್ ರೈಡ್ ಏರಿದ್ದಾರೆ. ಈ ವೇಳೆ ಸ್ವಿಂಗ್ ಎತ್ತರಕ್ಕೆ ತಲುಪುತ್ತಿದ್ದಂತೆ ಸ್ಟ್ಯಾಂಡ್ ಮುರಿದು ಪ್ರಿಯಾಂಕಾ ಕೆಳಗೆ ಬಿದ್ದಳು. ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಳು ಎಂದು ನಿಖಿಲ್ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಪ್ರಿಯಾಂಕಾ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 289 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ) ಮತ್ತು ಸೆಕ್ಷನ್ 106 (ನಿರ್ಲಕ್ಷ್ಯದಿಂದ ಕೊಲೆಗೆ ಸಮನವಲ್ಲದ ಅಪರಾಧಿಕ ನರಹತ್ಯೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಾರದಲ್ಲಿ ವಾಯುಸೇನೆಯಲ್ಲಿ 2 ದುರಂತ: ಪ್ಯಾರಾಚೂಟ್ ತೆರೆದುಕೊಳ್ಳದೇ ಏರ್ಪೋರ್ಸ್ ಇನ್ಸ್ಟ್ರಕ್ಟರ್ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ