ದೀಪಾವಳಿ ಹಿನ್ನೆಲೆ ದೆಹಲಿಯ ವಾಯು ಗುಣಮಟ್ಟ ಕುಸಿತ : IMD

By Suvarna NewsFirst Published Nov 3, 2021, 1:21 PM IST
Highlights

*ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ ಕುಸಿತ
*ಬುಧವಾರ "ಅತ್ಯಂತ ಕಳಪೆ" ವಾಯು ಗುಣಮಟ್ಟ : IMD
*ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ

ನವದೆಹಲಿ(ನ.3) : ದೀಪಾವಳಿ(Diwali) ಹಬ್ಬದ  ಸಡಗರ ಎಲ್ಲೆಡೆ ಶುರುವಾಗಿದೆ. ಕೊರೋನಾ(Corona) ಕಾರಣ ಕಳೆದ ವರ್ಷ ದೀಪಾವಳಿ ಹಬ್ಬಕ್ಕೇ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಕೊರೋನಾ ಹಾವಳಿ ತಗ್ಗಿದ ಕಾರಣ ಸಂಭ್ರಮಕ್ಕೆ ಕೊರತೆ ಇಲ್ಲ. ಈ ಮಧ್ಯೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (Air Quality Index) ಬುಧವಾರ "ಅತ್ಯಂತ ಕಳಪೆ" ಮಟ್ಟ ತಲುಪಿದೆ ಎಂದು ಕೇಂದ್ರದ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ( Air Quality and Weather Forecasting And Research) ಹೇಳಿದೆ.  ದೆಹಲಿ-ಎನ್‌ಸಿಆರ್‌ನಲ್ಲಿನ (Delhi-NCR) ಗಾಳಿಯ ಗುಣಮಟ್ಟವು ನವೆಂಬರ್ 2 ಮತ್ತು ನವೆಂಬರ್ 3 ರಂದು ''ಕಳಪೆ''ಯಿಂದ ''ಅತ್ಯಂತ ಕಳಪೆ'' ವರ್ಗಗಳ ಕೆಳಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ಹೇಳಿದೆ.

ನವೆಂಬರ್ 4, 2021 ರಂದು ಗಾಳಿಯ ಗುಣಮಟ್ಟವು ''ಅತ್ಯಂತ ಕಳಪೆ'' ವರ್ಗದ ಕೆಳಮಟ್ಟದಲ್ಲಿರುವ ಸಾಧ್ಯತೆಯಿದೆ ಎಂದು IMD ಹೇಳಿದೆ. ನವೆಂಬರ್ 5 ಮತ್ತು ನವೆಂಬರ್ 6 ರಂದು ಗಾಳಿಯ ಗುಣಮಟ್ಟವು ಹದಗೆಡುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಮಾಲಿಯನ್ಯದ ಮಟ್ಟವು PM2.5 ರ (Particulate Matter - ಮಾಲಿನ್ಯಕಾರಕ ಕಣಗಳು)  ಸಾಂದ್ರತೆಯ "ಕಳಪೆ"  ವಿಭಾಗದಲ್ಲಿ 252ರಷ್ಟು  ಮತ್ತು PM10 ರ  ಸಾಂದ್ರತೆಯ  "ಅತ್ಯಂತ ಕಳಪೆ" ವಿಭಾಗದಲ್ಲಿ 131 ರಷ್ಟಿರಲಿದೆ ಎಂದು ತಿಳಿಸಿದೆ. IMD ಪ್ರಕಾರ PM2.5 ವಾಯು ಗುಣಮಟ್ಟ ಕುಸಿತಕ್ಕೆ ಮುಖ್ಯ ಮಾಲಿನ್ಯಕಾರಕವಾಗಿದೆ.

ದೀಪಾವಳಿ ಸಂಭ್ರಮಕ್ಕೆ ಬ್ರೇಕ್, 7 ರಾಜ್ಯಗಳಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳಿಂದಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಈಗಾಗಲೇ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಹಲವು ರಾಜ್ಯಗಳು ಈಗಾಗಲೇ ಪಟಾಕಿಗೆ ನಿಷೇಧ ಹೇರಿ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಿವೆ.  ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೆಪ್ಟೆಂಬರ್ 29 ರಂದೆ ಪಟಾಕಿಗೆ ನಿಷೇಧ ಹೇರಿತ್ತು. ಜನವರಿ 1, 2022ರ ವರೆಗೆ ದೆಹಲಿಯಲ್ಲಿ ಪಟಾಕಿ ನಿಷೇಧ(Ban) ಇರಲಿದೆ. ಜತೆಗೆ ಪಂಜಾಬ್ (Punjab) ಸರ್ಕಾರ ಕೂಡ ಪಟಾಕಿಗೆ ನಿಷೇಧ ಹೇರಿದೆ. ಕೇವಲ 2 ಗಂಟೆ ಹಸಿರು ಪಟಾಕಿಗೆ ಹೊಡೆಯಲು ಅವಕಾಶ ನೀಡಲಾಗಿದೆ. ಆದರೆ ಹಸಿರು ಪಟಾಕಿ ಬಿಟ್ಟು ಇತರ ಪಟಾಕಿಗೆ ಅವಕಾಶವಿಲ್ಲ. ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗಿ ಪಟಾಕಿ ಹೊಡೆಯಲು ಪಂಜಾಬ್ ಸರ್ಕಾರ ಅವಕಾಶ ನೀಡಿದೆ. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಕ್ಕೆ ರಾತ್ರಿ 11.55 ರಿಂದ 12.30ರ ವರೆಗೆ 35 ನಿಮಿಷಗಳ ಕಾಲ ಪಟಾಕಿಗೆ ಅವಕಾಶ ನೀಡಲಾಗಿದೆ.  

ಕೊರೋನಾ ಗುಣಮುಖರ ಮೇಲೆ ಪಟಾಕಿ ಗಂಭೀರ ಪರಿಣಾಮ

ದೆಹಲಿ, ಪಂಜಾಬ್‌ ಸೇರಿದಂತೆ ಪಶ್ಚಿಮ ಬಂಗಾಳ (West Bengal), ರಾಜಸ್ತಾನ (Rajasthan), ಚತ್ತೀಸಘಡ (Chattisgarh), ಬಿಹಾರ (Bihar) ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಿ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಹಸಿರು ಪಟಾಕಿಗೆ (Green crackers) ಮಾತ್ರ ಅವಕಾಶ ನೀಡಲಾಗಿದೆ. ಇತರೆ ಪಟಾಕಿಗೆ ಅವಕಾಶವಿಲ್ಲ. ಈ ನಿರ್ಧಾರ ಪರ ವಿರೋಧಕ್ಕೆ ಕಾರಣಾಗಿದೆ. ಹಿಂದೂಗಳ ಹಬ್ಬಕ್ಕೆ ಮಾತ್ರ ಪಟಾಕಿ ನಿಷೇಧ ಯಾಕೆ ಅನ್ನೋ ವಾದವೂ ಹೆಚ್ಚಾಗಿದೆ. ಈ ಮೂಲಕ ಪಟಾಕಿ ನಿಷೇಧಿಸಿ ಹಲವು ರಾಜ್ಯಗಳು ಹೊರಡಿಸಿರುವ ಮಾರ್ಗಸೂಚಿಗಳು ವಿವದಾಕ್ಕೆ ಕಾರಣವಾಗಿವೆ.

click me!