
ಅಹಮದಾಬಾದ್ (ಏಪ್ರಿಲ್ 26, 2023): ಮಾನನಷ್ಟ ಪ್ರಕರಣದಲ್ಲಿ ತಮಗೆ ವಿಧಿಸಿರುವ 2 ವರ್ಷ ಜೈಲು ಶಿಕ್ಷೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ಕೋರ್ಟ್ ತಿರಸ್ಕರಿಸಿದ ಕಾರಣ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಗುಜರಾತ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ‘ಸೂರತ್ ವಿಚಾರಣಾ ನ್ಯಾಯಾಲಯವು ತನ್ನನ್ನು ಕಠೋರವಾಗಿ ನಡೆಸಿಕೊಂಡಿದೆ. ಇದರಿಂದ ನನ್ನ ಸಂಸದ ಸ್ಥಾನದ ಮೇಲೆ ಅಗಾಧ ಪರಿಣಾಮ ಬೀರಿದೆ’ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
2018ರಲ್ಲಿ ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ‘ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಆಗಿರುತ್ತಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದರ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಪ್ರಕರಣದಡಿ, ರಾಹುಲ್ ಗಾಂಧಿಗೆ ಕೋರ್ಟು 2 ವರ್ಷ ಜೈಲು ಶಿಕ್ಷೆ ವಿಧಿಸಿ, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ಸೂರತ್ ಕೋರ್ಟು ರಾಹುಲ್ ಗಾಂಧಿ ಮೇಲ್ಮನವಿ ತಿರಸ್ಕರಿಸಿತ್ತು. ಹೀಗಾಗಿ ಸಂಸದ ಸ್ಥಾನ ಮರಳಿಸಿಗಬಹುದೆಂಬ ರಾಹುಲ್ ಗಾಂಧಿಗೆ ನಿರಾಸೆಯಾಗಿತ್ತು.
ಇದನ್ನು ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್ ತಡೆ
ಜೈಲು ಶಿಕ್ಷೆಗೆ ಗುರಿಯಾದ ಹಿನ್ನೆಲೆ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡರಲ್ಲದೇ ಸಂಸದರಾಗಿದ್ದ ಕಾರಣಕ್ಕೆ ತಮಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ತೆರವು ಮಾಡಿದ್ದರು.
ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೂರತ್ ನ್ಯಾಯಾಲಯ ಕಳೆದ ಗುರುವಾರ ನಡೆಸಿತ್ತು. ಅಲ್ಲದೇ ಇದೇ ವೇಳೆ ರಾಹುಲ್ ಗಾಂಧಿ ಶಿಕ್ಷೆ ತಡೆಗೆ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸಹ ವಿಚಾರಣೆ ನಡೆಸಿದೆ. ಒಂದು ವೇಳೆ ಆಕ್ಷೇಪಣಾ ಅರ್ಜಿ ವಿಚಾರಣೆ ಬಳಿಕ ರಾಹುಲ್ ಶಿಕ್ಷೆಗೆ ತಡೆ ಕೋರ್ಟ್ ತಡೆ ನೀಡಿದ್ದರೆ ರಾಹುಲ್ ಗಂಧಿ ಲೋಕಸಭಾ ಸದಸ್ಯತ್ವದ ಅನರ್ಹತೆಯಿಂದ ತಕ್ಷಣಕ್ಕೆ ಪಾರಾಗುತ್ತಿದ್ದರು ಹೀಗಾಗಿ ಕೋರ್ಟ್ ನಡೆ ಕುತೂಹಲಕ್ಕೆ ಕಾರಣವಾಗಿತ್ತು.
ಇನ್ನೊಂದೆಡೆ, ಮೋದಿ ಸರ್ನೇಮ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಗೂ ಸಂಸತ್ ಸದಸ್ಯತ್ವ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಇದೇ ಆರೋಪದಡಿ ಬಿಹಾರದಲ್ಲಿ ಹೂಡಲಾಗಿರುವ ಇನ್ನೊಂದು ಮಾನನಷ್ಟ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಮೋದಿ ಹೂಡಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜಾರಿ ನ್ಯಾಯಾಲಯ ನಡೆಸುವುದಕ್ಕೆ ಪಟನಾ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್ ಕೋರ್ಟ್
ಇಂತಹುದೇ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯದಿಂದ ತಾನು ಶಿಕ್ಷೆಗೆ ಒಳಗಾಗಿರುವುದರಿಂದ ಮತ್ತೆ ಇದೇ ತಪ್ಪಿಗಾಗಿ ಇನ್ನೊಂದು ವಿಚಾರಣೆ ನಡೆಸಬಾರದು ಎಂದು ರಾಹುಲ್ ಗಾಂಧಿ ಹೈಕೋರ್ಟ್ಗೆ ಹೋಗಿದ್ದರು. ಅದನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್, ಮೇ 15ರವರೆಗೆ ಕೆಳ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ