
ನವದೆಹಲಿ(ಮೇ.23): ತೌಕ್ಟೆ ಚಂಡಮಾರುತದ ಬೆನ್ನಲ್ಲೇ ಮೇ 26ರಂದು ‘ಯಾಸ್’ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ. ಹೀಗಿರುವಾಗ ಈ ರಾಜ್ಯಗಳಲ್ಲಿ ಚಂಡಮಾರುತ ಎದುರಿಸಲು ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಸಭೆ ನಡೆಸಲಿದ್ದಾರೆ.
ಯಾಸ್’ ಚಂಡಮಾರುತ ಹಿನ್ನೆಲೆ: 12 ರೈಲುಗಳು ರದ್ದು
ಭಾನುವಾಋ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ದೂರ ಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರ ಸಚಿವರೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಯಾಸ್’ಗೆ ‘ತೀವ್ರ ಸ್ವರೂಪಿ ಚಂಡಮಾರುತ’ ರೂಪ
ಯಾಸ್ ಹೆಸರಿನ ಚಂಡಮಾರುತವು ‘ತೀವ್ರ ಸ್ವರೂಪದ ಚಂಡಮಾರುತ’ವಾಗಿ ರೂಪಾಂತರಗೊಂಡು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಗೆ ಮೇ 26ರಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಹೇಳಿದೆ.
ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಾತಾವರಣ ಈಗ ನಿರ್ಮಾಣವಾಗಿದೆ. ಇದು ಚಂಡಮಾರುತದ ಆರಂಭಿಕ ಸಂಕೇತ. ಇದು ಭಾನುವಾರ ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ. ಮೇ 24ಕ್ಕೆ ಚಂಡಮಾರುತವಾಗಿ ಮಾರ್ಪಟ್ಟು, ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪದ ಚಂಡಮಾರುತವಾಗಿ ಬಿರುಸುಗೊಳ್ಳಲಿದೆ ಹಾಗೂ 26ರಂದು ಬಂಗಾಳ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ. ಮೇ 24ರಂದು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿರುವ ಗಾಳಿ ಮೇ 26ರ ವೇಳೆಗೆ 90-100 ಕಿ.ಮೀ ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭೀಕರವಾಗಿ ಅಪ್ಪಳಿಸೋ ಸೈಕ್ಲೋನ್ ಯಾಸ್ ಹೆಸರಿನ ಅರ್ಥ ಮಾತ್ರ ಸುಂದರ..!
ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ 30 ಜಿಲ್ಲೆಗಳ ಪೈಕಿ 14ರಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಮತ್ತೊಂದೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಎನ್ಡಿಆರ್ಎಫ್ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತನ್ನ ತುಕಡಿಗಳನ್ನು ನಿಯೋಜಿಸುವ ಕೆಲಸ ಆರಂಭಿಸಿದೆ.
ಇದೇ ವೇಳೆ ಈ ನಡುವೆ ಚಂಡಮಾರುತದ ಪ್ರಭಾವಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಆರೋಗ್ಯ ಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಮತ್ತು ಅಗತ್ಯ ಔಷಧಿಗಳ ಸಂಗ್ರಹ ಮಾಡುವಂತೆ ಆಂಧ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕಳೆದ ವಾರ ತೌಕ್ಟೆಚಂಡಮಾರುತ ಕೇರಳ, ಕರ್ನಾಟಕ, ಗೋವಾ ಹಾಗೂ ಗುಜರಾತ್ ಕರಾವಳಿಗಳನ್ನು ತೀವ್ರವಾಗಿ ಬಾಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ