ಒಡಿಶಾದಲ್ಲಿ ಸಚಿವರ ಹತ್ಯೆ ಬೆನ್ನಲ್ಲಿಯೇ ಕೇಂದ್ರ ಮೀಸಲು ಪೊಲೀಸ್ ಪಡೆ ದೊಡ್ಡ ನಿರ್ಧಾರ ಮಾಡಿದ್ದು, ದೇಶದ ಅತೀ ಗಣ್ಯರ ಭದ್ರತಾ ಪಡೆಗಳಿಗೆ ಮಾನಸಿಕ ತಜ್ಞರನ್ನು ನೇಮಕ ಮಾಡಲಿದೆ ಎಂದು ವರದಿಯಾಗಿದೆ.
ನವದೆಹಲಿ (ಫೆ.9): ಕೇಂದ್ರ ಸಚಿವ ಅಮಿತ್ ಶಾ, ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ 100 ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್) ಸಿಬ್ಬಂದಿಗಳ ಮಾನಸಿಕ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸಲು ಮಾನಸಿಕ ತಜ್ಞರನ್ನು ನೇಮಕ ಮಾಡಲು ಸಿಆರ್ಪಿಎಫ್ ಮುಂದಾಗಿದೆ. 6,000 ಸಿಆರ್ಪಿಎಫ್ ಸಿಬ್ಬಂದಿಗಳಿರುವ ಪಡೆಗೆ ಮಾನಸಿಕ ಆರೋಗ್ಯ ವಿಶ್ಲೇಷಿಸಲು ಮಾನಸಿಕ ತಜ್ಞರ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವ ನಬಾ ಕಿಶೋರ್ ಅವರನ್ನು ಸಹಾಯಕ ಪೊಲೀಸ್ ಅಧಿಕಾರಿಯೇ ಗುಂಡಿಕ್ಕಿ ಹತ್ಯೆಗೈದಿದ್ದ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಮಾನಸಿಕ ಆರೋಗ್ಯದ ಬಗ್ಗೆ ನಿಗಾವಹಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಚಿಕಿತ್ಸಾ ಮನೋಶಾಸ್ತ್ರದಲ್ಲಿ ಪದವಿ, ಪಿಎಚ್ಡಿ ಪದವಿ ಪಡೆದಿರಬೇಕು. ಮಾನಸಿಕ ತಜ್ಞರಾಗಿ 3 ವರ್ಷ ಕಾರ್ಯನಿರ್ವಹಿಸಿದ ಅನುಭವಿರುವ 40 ವರ್ಷದ ಕೆಳಗಿನ ಮಾನಸಿಕ ತಜ್ಞರಿಗೆ ಕರೆ ನೀಡಲಾಗಿದೆ. ಸಿಆರ್ಪಿಎಫ್ನಲ್ಲಿ ಮಾನಸಿಕ ತಜ್ಞರಾಗಿ ನೇಮಕಗೊಳ್ಳುವವರಿಗೆ 50,000-60,000 ಸಂಬಳವಿರಲಿದೆ ಎಂದು ಸಿಆರ್ಪಿಎಫ್ ತಿಳಿಸಿದೆ.
ದೇಶದ ಅತಿ ದೊಡ್ಡ ಅರೆಸೇನಾ ಪಡೆ ಇದೀಗ ತನ್ನ ವಿಐಪಿ ಭದ್ರತಾ ಘಟಕದ ಕಮಾಂಡೋಗಳ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಶ್ಲೇಷಿಸಲು ವೃತ್ತಿಪರ ಮನಶ್ಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಬ್ರಿಟಿಷರ ಆಡಳಿತದಲ್ಲಿ ಫೆ.1 ರಂದು ಕ್ರೌನ್ ರೆಪ್ರಸಂಟೇಟಿವ್ ಪೊಲೀಸ್ ಆಗಿ ಸ್ಥಾಪನೆಯಾಗಿದ್ದ ಸಿಆರ್ಪಿಎಫ್, ಮಾನಸಿಕ ತಜ್ಞರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಜಾಹೀರಾತನ್ನು ನೀಡಿದೆ. ದೆಹಲಿಯ ಸಮೀಪದ ಗ್ರೇಟರ್ ನೋಯ್ಡಾ ಸಮೀಪದ ಕಚೇರಿಯಲ್ಲಿ ಇವರಿಗೆ ನೇಮಿಸಲಾಗುತ್ತದೆ. ಇದು ಸಿಆರ್ಪಿಎಫ್ನ ವಿಐಪಿ ಭದ್ರತಾ ಘಟಕದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಪೊಲೀಸ್ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸಚಿವ ನಬಾದಾಸ್ ಸಾವು!
ಒಡಿಶಾ ಸಚಿವ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಜನವರಿ 29 ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಕ್ಲಿನಿಕಲ್ ಸೈಕಾಲಜಿಸ್ಟ್ ಅನ್ನು ನೇಮಿಸಿಕೊಳ್ಳಲು ಸಿಆರ್ಪಿಎಫ್ ಮುಂದಾಗಿದೆ. ವಿಐಪಿ ಭದ್ರತಾ ಕರ್ತವ್ಯಗಳಲ್ಲಿ ಇರುವ ಒತ್ತಡಗಳ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಇಲ್ಲಿ ಭದ್ರತಾ ಪಡೆಗಳು ಒಂದೇ ಒಂದು ಸಣ್ಣ ತಪ್ಪು ಕೂಡ ಮಾಡೋ ಹಾಕಿಲ್ಲ. ಬಹಳ ಒತ್ತಡ ಹಾಗೂ ಪೂರ್ಣ ಪ್ರಮಾಣದ ಕೌಶಲವನ್ನು ಬೇಡುವ ಕೆಲಸ ಇದಾಗಿದೆ. ಹಾಗಾಗಿ ವಿಐಪಿಎ ಭದ್ರತಾ ಪಡೆಗೆ ಸೇರುವ ಸಮಯದಲ್ಲಿ ಹಾಗೂ ಕರ್ತವ್ಯದ ಸಮಯದಲ್ಲಿ ಕಮಾಂಡೋಗಳ ಮಾನಸಿಕ ಮೌಲ್ಯಮಾಪನ ಅತ್ಯಗತ್ಯವಾಗಿದೆ. ಒಡಿಶಾದಲ್ಲಿ ಆದ ಘಟನೆಯ ಕಾರಣಕ್ಕಾಗಿ ಈ ನೇಮಕಾತಿ ಮಾಡುತ್ತಿಲ್ಲ. ಭದ್ರತಾ ಪಡೆಗಳಿಗೆ ಮಾನಸಿಕ ತಜ್ಞರನ್ನು ನೇಮಕ ಮಾಡುವ ಕುರಿತಾಗಿ ಈ ಹಿಂದೆಯೇ ನಿರ್ಧಾರ ಮಾಡಲಾಗಿತ್ತು ಎಂದಿದ್ದಾರೆ.
Odisha ಸಚಿವರ ಎದೆಗೆ ಪೊಲೀಸನಿಂದಲೇ ಗುಂಡಿನ ದಾಳಿ: ಸ್ಥಿತಿ ಗಂಭೀರ
ಮನಶ್ಶಾಸ್ತ್ರಜ್ಞರು ಮಾನವನ ಮನಸ್ಸು, ಭಾವನೆಗಳು ಮತ್ತು ನಡವಳಿಕೆಯನ್ನು ಅಧ್ಯಯನ ಮಾಡುತ್ತಾರೆ ಮತ್ತು ವಿಭಿನ್ನ ಸಂದರ್ಭಗಳು ಜನರನ್ನು ಹೇಗೆ ಪ್ರಭಾವಿಸುತ್ತವೆ. ಮಾನಸಿಕ ಅಸ್ವಸ್ಥತೆಗಳಿರುವ ರೋಗಿಗಳಿಗೆ ಚಿಕಿತ್ಸೆ, ಸಮಾಲೋಚನೆ ಅಥವಾ ಸಲಹೆ ಅಥವಾ ಮಾನಸಿಕ ಬೆಂಬಲದ ಅಗತ್ಯವಿರುವ ಸೂಕ್ತ ಚಿಕಿತ್ಸಾ ಕಾರ್ಯಕ್ರಮಗಳನ್ನು ಅವರು ರೂಪಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ ಹಾಗಾಗಿ ಇವರ ಅಗತ್ಯ ಭದ್ರತಾ ಪಡೆಗಳಿಗೆ ಇದೆ ಎಂದು ಹೇಳಲಾಗಿದೆ. ಒಡಿಶಾ ಸಚಿವರನ್ನು ಕೊಂದ ಸಿಬ್ಬಂದಿ, ಬೈಪೋಲಾರ್ ಡಿಸಾರ್ಡರ್ಗೆ ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಕೋಪದ ಸಮಸ್ಯೆಗಳನ್ನು ಹೊಂದಿದ್ದರು ಎಂದು ಆರೋಪಿಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಬೈಪೋಲಾರ್ ಡಿಸಾರ್ಡರ್ ಒಂದು ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಇದು ವಿಪರೀತ ಕೋಪ ಮತ್ತು ವಿಪರೀತ ಖಿನ್ನತೆಯವರೆಗಿನ ವಿಪರೀತ ಮನಸ್ಥಿತಿಯನ್ನು ಉಂಟುಮಾಡುತ್ತದೆ.