ಮತ್ತೆ ಏರಿಕೆಯಾಗುತ್ತಿದೆ ಕೊರೋನಾ ಸೋಂಕು : ಎಚ್ಚರ ಮೈ ಮರೆಯದಿರಿ

By Kannadaprabha NewsFirst Published Oct 30, 2021, 6:58 AM IST
Highlights
  • ದೇಶಾದ್ಯಂತ 14,348 ಮಂದಿಯಲ್ಲಿ ಹೊಸದಾಗಿ ಕೋವಿಡ್‌ ದೃಢ
  • ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 1.61 ಲಕ್ಷಕ್ಕೆ ಜಿಗಿದೆ. ಇನ್ನು ನಿನ್ನೆ ಒಂದೇ ದಿನ 805 ಮಂದಿ ಕೋವಿಡ್‌ಗೆ ಬಲಿ

ನವದೆಹಲಿ (ಅ.30): ಶುಕ್ರವಾರ ಬೆಳಗ್ಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ (India) 14,348 ಮಂದಿಯಲ್ಲಿ ಹೊಸದಾಗಿ ಕೋವಿಡ್‌ (Covid) ದೃಢಪಟ್ಟಿದೆ. 

ಇದರೊಂದಿಗೆ ಸಕ್ರಿಯ ಸೋಂಕಿತರ  ಸಂಖ್ಯೆ 1.61 ಲಕ್ಷಕ್ಕೆ ಜಿಗಿದೆ. ಇನ್ನು ನಿನ್ನೆ ಒಂದೇ ದಿನ 805 ಮಂದಿ ಕೋವಿಡ್‌ಗೆ ಬಲಿಯಾಗಿದ್ದು (Covid Death), ತನ್ಮೂಲಕ ವ್ಯಾಧಿಗೆ ಈವರೆಗೆ ಒಟ್ಟು 4.57 ಲಕ್ಷ ಮಂದಿ ಬಲಿಯಾದಂತಾಗಿದೆ. ಇನ್ನು ಕೇರಳದಲ್ಲಿ (Kerala) 56 ಹಳೇ ಸಾವಿನ ಪ್ರಕರಣಗಳು, 542 ಸಾವಿಗೆ ಸೂಕ್ತ ಕಾರಣ ಪತ್ತೆಯಾಗದ್ದು ಹಾಗೂ 110 ಕೋವಿಡ್‌ಗೆ ಸಾವನ್ನಪ್ಪಿರುವುದನ್ನು ಸಾವಿನ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ ಕೇರಳದಲ್ಲಿ ಸಾವಿನ ಸಂಖ್ಯೆ 708 ಆಗಿದೆ.

ರಾಜ್ಯದಲ್ಲಿ AY 4.2 ವೈರಾಣು ಪತ್ತೆ: ರೂಪಾಂತರಿ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು..!

ದೇಶದಲ್ಲಿ ಸಕ್ರಿಯ ಸೋಂಕಿನ ಸಂಖ್ಯೆ (Active covid Cases) ಶೇ 0.47ರಷ್ಟಿದ್ದು, 2020ರ ಮಾರ್ಚ್‌ನಿಂದ (March) ಈವರೆಗಿನ ಕನಿಷ್ಠ ಕೇಸ್‌ ಆಗಿದೆ. ಅಲ್ಲದೆ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.98.19ರಷ್ಟಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಶೇ.1.34ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ಗೆ ಮಾತ್ರೆ ಸಿದ್ಧ

 

 ಕೋವಿಡ್‌ (Coronavirus) ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಗುಳಿಗೆ (Tablet)  ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್‌ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ ಉತ್ಪಾದಿಸಲು ಅನುಮತಿ ಕೋರಿ ಹೈದ್ರಾಬಾದ್‌ (Hyderabad) ಮೂಲದ ಆಪ್ಟಿಮಸ್‌ ಫಾರ್ಮಾ, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಈ ಗುಳಿಗೆ ಬಳಸಲು ಅಮೆರಿಕ(USA) ಸರ್ಕಾರ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ.

‘ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರು.ದರ ಇರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಬಗ್ಗೆ ಯಾಕೆ ಅನುಮಾನ?

ಒಬ್ಬ ಕೋವಿಡ್‌ ರೋಗಿಯು ಚಿಕಿತ್ಸೆಗಾಗಿ ಇಂಥ 40 ಗುಳಿಗೆಗಳನ್ನು ನುಂಗಬೇಕಾಗುತ್ತದೆ. ಅದಕ್ಕೆ ಒಟ್ಟು ಅಂದಾಜು 1196 ರು. ವೆಚ್ಚ ತಗುಲಬಹುದು ಎಂದು ತಿಳಿಸಿದ್ದಾರೆ.

ಸೌಮ್ಯ ಪ್ರಮಾಣದ ಸೋಂಕು ಇರುವ ರೋಗಿಗಳ ಮೇಲೆ ಗುಳಿಗೆ ಪ್ರಯೋಗಿಸಲು ಆಪ್ಟಿಮಸ್‌ ಫಾರ್ಮಾ ಕಳೆದ ಮೇನಲ್ಲಿ ಭಾರತೀಯ ಔಷಧ ಮಹಾ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ, ಮೊಲ್ನುಪಿರಾವಿರ್‌ ಅಂತಿಮ ಹಂತದ ಪರೀಕ್ಷೆ ಮುಕ್ತಾಯವಾಗಿದ್ದು ಗುಳಿಗೆ ಸೇವಿಸಿದ 5ನೇ ದಿನದಲ್ಲಿ ಶೇ.78ರಷ್ಟುರೋಗಿಗಳ ವರದಿ ಕೋವಿಡ್‌ ನೆಗೆಟಿವ್‌ ಬಂದಿದೆ.

ಲಸಿಕೆ ಸಾಧನೆ; ಭಾರತ  ನೂರು ಕೋಟಿ ಜನರಿಗೆ ಲಸಿಕೆ ನೀಡಿದ್ದು ಜಗತ್ತು ಮೆಚ್ಚುವಂತಹ ಸಾಧನೆ ಮಾಡಿದೆ. ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ಸು ಕಂಡಿದ್ದು ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ.  ಎರಡು ವರ್ಷದಿಂದ ಕಾಡುತ್ತಿದ್ದ ಮಹಾಮಾರಿ ತಹಬದಿಗೆ ಬಂದಿದೆ.

ವಿದೇಶದಿಂದ ಬರುವರಿಗೆ ಹೊಸ ನಿರ್ಬಂಧ

 

ವಿಶ್ವದ ವಿವಿಧ ದೇಶಗಳಲ್ಲಿ ಕೊರೋನಾ (coronavirus) ಮೂರನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಂಕು ಅಪಾಯ ಹೊಂದಿರುವ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ (International Travellers) ಹಲವು ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ (Karnataka Govt) ಆದೇಶ ಹೊರಡಿಸಿದೆ.

ಅಪಾಯ ಸಾಧ್ಯತೆ ಇರುವ ಬ್ರಿಟನ್‌ (Britain), ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಹಾಗೂ ಬಾಂಗ್ಲಾದೇಶ, ಚೀನಾ (China), ಮ್ಯಾರಿಷಸ್‌, ನ್ಯೂಜಿಲೆಂಡ್‌, ಜಿಂಬಾಂಬ್ವೆ ಹಾಗೂ ಬೊಸ್ಟಾವನಾ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಗಳಿಗೆ ಆಗಮಿಸುವವರು ಎರಡೂ ಡೋಸ್‌ ಲಸಿಕೆ ಪಡೆದಿದ್ದರೂ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಬೇಕು.

ಪರೀಕ್ಷೆಗೆ(test) ಒಳಪಟ್ಟಬಳಿಕ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು. ಎಂಟನೇ ದಿನ ಮತ್ತೆ ಸೋಂಕು ಪರೀಕ್ಷೆಗೆ (test) ಒಳಪಡಬೇಕು. ಬಳಿಕ ಏಳು ದಿನಗಳ ಕಾಲ ಸ್ವಯಂ ನಿಗಾ ವಹಿಸಿ ಬಳಿಕವಷ್ಟೇ ಮುಕ್ತವಾಗಿ ಓಡಾಡಬಹುದು ಎಂದು ಷರತ್ತು ವಿಧಿಸಿದೆ.

click me!