
ಭಗವಾನ್ ಶಿವ ಹಾಗೂ ಪಾರ್ವತಿ ಮದುವೆಯಾದ ಸ್ಥಳವೆಂದೇ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಉತ್ತರಾಖಂಡ್ನ ತ್ರಿಯುಗಿನಾರಾಯಣನ ದೇಗುಲದಲ್ಲಿ ಜೋಡಿಯೊಂದು ತೀವ್ರ ಹಿಮಪಾತದ ನಡುವೆಯೇ ಮದುವೆಯಾಗಿದ್ದು, ಮದುವೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ತೀವ್ರವಾದ ಹಿಮಪಾತದಿಂದಾಗಿ ಈ ದೇಗುಲವಿರುವ ಪ್ರದೇಶದಲ್ಲಿ ಮನೋರಮಣೀಯ ದೃಶ್ಯ ಸೃಷ್ಟಿಯಾಗಿದ್ದು, ಪ್ರಕೃತಿಯ ಈ ಸಹಜ ಸೌಂದರ್ಯದ ನಡುವೆಯೇ ಉತ್ತರ ಪ್ರದೇಸದ ಮೀರತ್ನ ಜೋಡಿಯೊಂದು ಇಲ್ಲಿ ಹಸೆಮಣೆ ಏರಿದ್ದಾರೆ. ಮಳೆಯಂತೆ ಬೀಳುತ್ತಿರುವ ಹಿಮದ ನಡುವೆ ಜೋಡಿಯೊಂದು ಮದುವೆಯಾಗಿ, ನಂತರ ಹಿಮ ಹಾಸಿರುವ ದಾರಿಯಲ್ಲಿ ನಡೆದು ಹೋಗುತ್ತಿರುವ ದೃಶ್ಯವಿದೆ.
mahendrasemwal ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಮದುವೆಯ ಅಲಂಕಾರದ ಜೊತೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿರುವ ವಧು ಹಾಗೂ ಅವರ ತಮ್ಮ ಬಟ್ಟೆಯ ಮೇಲೆ ಜಾಕೆಟ್ ಧರಿಸಿದ್ದು, ಬೀಳುತ್ತಿರುವ ಮಂಜಿನ ನಡುವೆಯೇ ನಡೆದು ಹೋಗುತ್ತಿದ್ದಾರೆ. ಹೀಗೆ ಇವರು ನಡೆದು ಹೋಗುತ್ತಿದ್ದರೆ ಮಂಜು ಮಳೆಯಂತೆ ಅಲ್ಲಿ ಬೀಳುತ್ತಲೇ ಇದೆ. ವಧುವಿನ ಉದ್ದನೇಯ ಲೆಹೆಂಗಾವನ್ನು ಮಹಿಳೆಯೊಬ್ಬರು ಆಕೆಗೆ ನಡೆದಾಡುವುದಕ್ಕೆ ಸಹಾಯವಾಗಲಿ ಎಂದು ಎತ್ತಿ ಹಿಡಿದಿದ್ದು, ಅವರ ಜೊತೆಗೆ ನಡೆದುಬಹೋಗುತ್ತಿದ್ದಾರೆ.
ಇದನ್ನೂ ಓದಿ: ಶಿವ ದೇವಾಲಯದ ಕಳಶದ ಮೇಲೆ ಅರ್ಧಚಂದ್ರ: ಕಾಶಿ ವಿಶ್ವನಾಥ ದೇಗುಲದಲ್ಲಿ ಸೆರೆಯಾದ ಅಪರೂಪದ ದೃಶ್ಯ
ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಮರಗಟ್ಟಿಸುವಂತಹ ಚಳಿಯ ಮಧ್ಯೆಯೂ ಈ ಜೋಡಿ ತುಂಬಾ ಸೊಗಸಾಗಿ ಕಾಣುತ್ತಿದ್ದಾರೆ. ವೀಡಿಯೋ ನೋಡಿದ ಅನೇಕರು ನವ ಜೋಡಿಗೆ ಶುಭ ಹಾರೈಸಿದ್ದು, ಇವರಿಗೆ ದೇವರೇ ಆಶೀರ್ವದಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಖುಷಿಯನ್ನು ನೋಡಿ ಭಗವಂತನೂ ಖುಷಿಯಾದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೂ ಅಲ್ಲಿಯೇ ಮದುವೆಯಾಗುವ ಆಸೆ ಆದರೆ ಹುಡುಗ ಸಿಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ವಧು ಕಾಲುಗಳಿಗೆ ಆ ಚಳಿಯ ನಡುವೆಯೂ ಕೇವಲ ಚಪ್ಪಲಿ ಮಾತ್ರ ಧರಿಸಿರುವುದನ್ನು ಗಮನಿಸಿ ಅಚ್ಚರಿ ಪಟ್ಟಿದ್ದಾರೆ. ಅಂತಹ ಚಳಿಯಲ್ಲಿ ಈ ರೀತಿ ಚಪ್ಪಲಿ ಕಾಲಿಗೆ ಯಾವ ರಕ್ಷಣೆಯನ್ನು ಮಾಡುವುದಿಲ್ಲ, ಇಂತಹ ರಿಸ್ಕ್ ಯಾಕೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇವರ ಆರೋಗ್ಯದ ಕತೆ ಏನು ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಜೀವನಪೂರ್ತಿ ನೆನಪಿರುವಂತೆ ಮದುವೆ ಆಗಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: IAS ಅಧಿಕಾರಿಗೆ ಹೇಗೆ ಸೆಲ್ಯೂಟ್ ಹೊಡಿಬೇಕು ಅನೋದೇ ಗೊತ್ತಿಲ್ವಾ: ಗಣರಾಜ್ಯೋತ್ಸವದ ವೇಳೆ ಮತ್ತೆ ಟ್ರೋಲ್ ಆದ ಟೀನಾ ದಾಬಿ
ಉತ್ತರಾಖಂಡ್ನ ಪ್ರಯಾಗ್ರಾಜ್ ಜಿಲ್ಲೆಯಲ್ಲಿರುವ ತ್ರಿಯುಗಿನಾರಾಯಣ ದೇಗುಲವು ಆಳವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಿಂದೂ ಪುರಾಣಗಳಲ್ಲಿರುವ ನಂಬಿಕೆಗಳ ಪ್ರಕಾರ, ಇಲ್ಲಿ ಹಿಂದೂ ದೇವರಾದ ಶಿವ ಹಾಗೂ ಪಾರ್ವತಿ ದೇವಿ ಮದುವೆಯಾದರು ಮಹಾವಿಷ್ಣುವಿನ ಸಮ್ಮುಖದಲ್ಲಿ ಈ ಮದುವೆ ನಡೆಯಿತು ಎಂಬ ನಂಬಿಕೆ ಇದೆ. ಇದೇ ನಂಬಿಕೆಯ ಕಾರಣಕ್ಕೆ ಹಲವು ಜೋಡಿಗಳು ತಮ್ಮ ವಿವಾಹ ಬದುಕನ್ನು ಆರಂಭಿಸಲು ಇಲ್ಲಿ ಮದುವೆಯಾಗುತ್ತಾರೆ. ಇಲ್ಲಿ ಮದುವೆಯಾದರೆ ದೇವರ ಆಶೀರ್ವಾದವಿರುವುದು ಹಾಗೂ ಜೀವನಪೂರ್ತಿ ಖುಷಿಯಾಗಿ ಜೊತೆಯಾಗಿ ಇರಬಹುದು ಎಂಬ ನಂಬಿಕೆಯಲ್ಲಿ ಈ ಮದುವೆ ನಡೆಯುತ್ತದೆ.
ಅಖಂಡ ಧುನಿ ಎಂದು ಕರೆಯಲ್ಪಡುವ ಶಾಶ್ವತ ಜ್ವಾಲೆಯು ಈ ದೇವಾಲಯದಲ್ಲಿ ಸದಾ ಉರಿಯುತ್ತಿರುತ್ತದೆ. ಇದನ್ನು ಶಿವ ಪಾರ್ವತಿಯ ದೈವಿಕ ವಿವಾಹದ ಸಮಯದಲ್ಲಿ ಬೆಳಗಿಸಲಾಯಿತು ಅಂದು ಹೊತ್ತಿಸಿದ ಬೆಂಕಿಯೂ ಇಂದಿಗೂ ಉರಿಯುತ್ತಿದೆ ಎಂಬ ನಂಬಿಕೆ ಇದ್ದು,ಇದು ದೇವಾಲಯದ ಆಧ್ಯಾತ್ಮಿಕ ಪ್ರಭಾವಲಯವನ್ನು ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ