
ಮೈ ತುಂಬಾ ಕೇಜಿಗಟ್ಟಲೇ ಚಿನ್ನದ ಆಭರಣ ಧರಿಸಿಕೊಂಡು ರಾಜಾರೊಷವಾಗಿ ಸಾರ್ವಜನಿಕವಾಗಿ ಓಡಾಡುತ್ತಾ ಚಿತೋರ್ಗಢದ ಚಿನ್ನದ ವ್ಯಕ್ತಿ ಅಥವಾ ಗೋಲ್ಡ್ ಮ್ಯಾನ್ ಎಂದೇ ಫೇಮಸ್ ಆಗಿದ್ದ ಕನ್ಹಯ್ಯಾಲಾಲ್ ಖಾಟಿಕ್ ಅವರಿಗೆ ಗ್ಯಾಂಗ್ಸ್ಟರ್ ರೋಹಿತ್ ಗೋದಾರ ಗ್ಯಾಂಗ್ನಿಂದ ಬೆದರಿಕೆ ಕರೆ ಬಂದಿದೆ. 5 ಕೋಟಿ ಕೊಡಿ ಇಲ್ಲ ಸಾರ್ವಜನಿಕವಾಗಿ ಚಿನ್ನ ಧರಿಸುವುದು ನಿಲ್ಲಿಸಿ ಎಂದು ರೋಹಿತ್ ಗೋದಾರ್ ಗ್ಯಾಂಗ್ಗೇ ಸೇರಿದವರು ಎನ್ನಲಾದ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿದೆ ಎಂದು ಹಣ್ಣಿನ ಉದ್ಯಮಿಯೂ ಆಗಿರುವ ಕನ್ಹಯಲಾಲ್ ಖಾಟಿಕ್ ಅವರು ಹೇಳಿದ್ದಾರೆ.
ರಾಜಸ್ಥಾನದ ಚಿತ್ತೋರ್ಗಢದ ಉದ್ಯಮಿಯಾಗಿರುವ ಕನ್ಹಯ್ಯಾಲಾಲ್ ಖಾಟಿಕ್ ಅವರು ಚಿತ್ತೋರ್ಗಢದ ಬಪ್ಪಿ ಲಹರಿ ಎಂದೇ ಜನಪ್ರಿಯರಾಗಿದ್ದಾರೆ. ಪೊಲೀಸರಿಗೆ ಅವರು ನೀಡಿದ ದೂರಿನ ಪ್ರಕಾರ, ಖಾಟಿಕ್ ಅವರಿಗೆ ಎರಡು ದಿನಗಳ ಹಿಂದೆ ಮೊದಲು ಮಿಸ್ಡ್ ಕಾಲ್ ಬಂದಿತು. ನಂತರ ಅದೇ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿತು. ಅವರು ಉತ್ತರಿಸದೇ ಇದಾಗ 5 ಕೋಟಿ ರೂ. ಸುಲಿಗೆ ಹಣ ನೀಡುವಂತೆ ಅವರ ಫೋನ್ಗೆ ಆರೋಪಿಗಳು ಆಡಿಯೋ ರೆಕಾರ್ಡಿಂಗ್ ಕಳುಹಿಸಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಹುಲಿಯ ದರ್ಬಾರ್: ಗಂಟೆಗಟ್ಟಲೆ ಸಂಚಾರ ಸ್ಥಗಿತ!
ಹೀಗೆ ಬೆದರಿಕೆ ಕರೆ ಮಾಡಿದ ವ್ಯಕ್ತಿ ತಾನು ಹೇಳುವುದನ್ನು ಪಾಲಿಸದಿದ್ದರೆ ತಾವು ಸಾರ್ವಜನಿಕವಾಗಿಚಿನ್ನ ಧರಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಹೇಳಿದ್ದಾನೆ. ವಿಷಯವನ್ನು ಯಾವುದೇ ಸದ್ದಿಲ್ಲದೇ ಇತ್ಯರ್ಥಪಡಿಸುವಂತೆಯೂ ಬೆದರಿಕೆ ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ ಎಂದು ಕನ್ಹಯ್ಯಾಲಾಲ್ ಖಾಟಿಕ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟಾದ ನಂತರ ಖಾತಿಕ್ಗೆ ಬೇಡಿಕೆಯನ್ನು ಪೂರೈಸುವಂತೆ ಮತ್ತೊಂದು ಫೋನ್ ಕರೆ ಬಂದಿದೆ. ನಂತರವೇ ಅವರು ನಗರ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ.
50 ವರ್ಷ ವಯಸ್ಸಿನ ಅವರು ಹಣ್ಣಿನ ವ್ಯಾಪಾರಕ್ಕೆ ಇಳಿಯುವ ಮೊದಲು ಕೈಗಾಡಿಯಲ್ಲಿ ತರಕಾರಿಗಳನ್ನು ಮಾರುತ್ತಿದ್ದರು. ಸೇಬುಗಳ ವ್ಯಾಪಾರ ಆರಂಭಿಸಿದ ನಂತರ ಅವರ ಅದೃಷ್ಟ ಸುಧಾರಿಸಿತು ಮತ್ತು ನಂತರದ ವರ್ಷಗಳಲ್ಲಿ ಅವರು ಚಿನ್ನದ ಆಭರಣಗಳ ಬಗ್ಗೆ ಮೋಹ ಬೆಳೆಸಿಕೊಂಡರು. ಪ್ರಸ್ತುತ ಅವರು ಸುಮಾರು 3.5 ಕೆಜಿ ಚಿನ್ನವನ್ನು ಧರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇದರಿಂದಾಗಿ ಚಿತ್ತೋರ್ಗಢದಲ್ಲಿ ಅವರಿಗೆ ಗೋಲ್ಡ್ಮ್ಯಾನ್ ಎಂಬ ಅಡ್ಡ ಹೆಸರು ಬಂದಿದೆ.
ಗ್ಯಾಂಗ್ಸ್ಟಾರ್ ರೋಹಿತ್ ಗೋದಾರ ಯಾರು?
ಬಿಕಾನೇರ್ನ ಲುನಕರನ್ ನಿವಾಸಿಯಾದ ರೋಹಿತ್ ಗೋದಾರ ಕೆನಡಾದಲ್ಲಿದ್ದಾನೆಂದು ನಂಬಲಾಗಿದೆ. ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ 32 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, ಗೋದಾರ ರಾಜಸ್ಥಾನದಲ್ಲಿ ಉದ್ಯಮಿಗಳ ವಿರುದ್ಧ ಸುಲಿಗೆ ದಂಧೆ ನಡೆಸುತ್ತಿದ್ದ. ಪಂಜಾಬ್ನಲ್ಲಿ ಸಂಚಲನ ಸೃಷ್ಟಿಸಿದ ರ್ಯಾಪರ್ ಸಿಧು ಮೂಸೆವಾಲಾ ಅವರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಗೋದಾರ ಕೂಡ ಒಬ್ಬನಾಗಿದ್ದಾನೆ. ಕಳೆದ ವರ್ಷ ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟಾಗ ಪಂಜಾಬಿ ರ್ಯಾಪರ್ ರ್ಯಾಪರ್ ಸಿಧು ಮೂಸೆವಾಲಾ ಅವರಿಗೆ 28 ವರ್ಷ ವಯಸ್ಸಾಗಿತ್ತು. ಸಿಕಾರ್ನಲ್ಲಿ ನಡೆದ ದರೋಡೆಕೋರ ರಾಜು ತೆಹತ್ ಹತ್ಯೆಯಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ.
2022 ರ ಜೂನ್ 13ರಂದು ಆರೋಪಿ ಗೋದಾರ ಪವನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ನವ ದೆಹಲಿಯಿಂದ ದುಬೈಗೆ ಪಲಾಯನ ಮಾಡಿದ್ದಾನೆ. ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಚೇರ್ ಮುರಿದು ಹಾಕಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು: ಕೋಪದಿಂದ ಹೊರಟು ಹೋದ ಬಿಗ್ಬಾಸ್ ಸ್ಪರ್ಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ