
ನವದೆಹಲಿ (ಫೆ. 23) : ನಿಷೇಧಿತ ‘ಸಿಖ್ಸ್ ಫಾರ್ ಜಸ್ಟೀಸ್’(Sikhs For Justice) ಖಲಿಸ್ತಾನಿ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ‘ಪಂಜಾಬ್ ಪೊಲಿಟಿಕ್ಸ್ ಟೀವಿ’ಯ (Punjab Politics TV banned) ಆ್ಯಪ್ಗಳು, ವೆಬ್ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ನಿರ್ಬಂಧಿಸಿದೆ. ಆನ್ಲೈನ್ ವೇದಿಕೆಗಳನ್ನು ಚುನಾವಣಾ ಸಮಯದಲ್ಲಿ ಶಾಂತಿ ಕದಡಲು ಬಳಸಲಾಗುತ್ತಿತ್ತು ಎಂದು ಸಚಿವಾಲಯ ಹೇಳಿದೆ.
ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯನ್ನು ಅಕ್ರಮ ಚಟುವಟಿಕೆ ನಿಷೇಧ ಕಾಯ್ದೆಯಡಿ ನಿಷೇಧಿಸಲಾಗಿದೆ. ಚುನಾವಣಾ ಸಮಯದಲ್ಲಿ ಶಾಂತಿ ಹಾಳು ಮಾಡಲು ಪ್ರಯತ್ನಸಿದ ಕಾರಣ, ಐಟಿ ನಿಯಗಳಲ್ಲಿನ ತುರ್ತು ಅಧಿಕಾರದ ಮೂಲಕ ಪಂಜಾಬ್ ಪೊಲಿಟಿಕಲ್ ಟೀವಿಯ ಆ್ಯಪ್, ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾಗಿರುವ ವೇದಿಕೆಗಳಲ್ಲಿನ ವಿಷಯಗಳು ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತಿದ್ದವು. ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಪ್ರತ್ಯೇಕತಾ ವಾದಕ್ಕೆ ಪುಷ್ಟಿನೀಡುವಂತಿದ್ದವು ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ರಾಮ್ ರಹೀಮ್ಗೆ Z+ ಭದ್ರತೆ , ಖಲಿಸ್ತಾನಿಗಳಿಂದ ಬೆದರಿಕೆ ಇದೆ ಎಂದ ಪೊಲೀಸರು
ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ "ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಆನ್ಲೈನ್ ಮಾಧ್ಯಮವನ್ನು ಬಳಸಲು ಚಾನೆಲ್ ಪ್ರಯತ್ನಿಸುತ್ತಿದೆ" ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತ್ಯೇಕತಾವಾದ ಪ್ರಚೋದನೆ: ವಿದೇಶಿ ಮೂಲದ ಚಾನೆಲ್ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳತ್ತಿರುವ ವಿಷಯವು "ಕೋಮು ಸೌಹಾರ್ದತೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಸಚಿವಾಲಯ ಹೇಳಿದೆ. ಈ ವಿಷಯವು "ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. "ಚುನಾವಣೆಗಳ ಸಮಯದಲ್ಲಿ ಲಾಭ ಪಡೆಯಲು ಹೊಸ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಬಿಡುಗಡೆ ಮಾಡಲಾಗಿದೆ" ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: Punjab Election ಸೋನು ಸೂದ್ ಮತಗಟ್ಟೆ ಪ್ರವೇಶ ನಿರಾಕರಿಸಿದ ಪಂಜಾಬ್ ಪೊಲೀಸ್, ಕಾರು ಸೀಝ್!
ನಿಷೇಧಿತ ಸಂಘಟನೆ: ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ಕಾನೂನುಬಾಹಿರವೆಂದು ಘೋಷಿಸಲಾಗಿದೆ. SFJ ಸಂಸ್ಥಾಪಕ-ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಪ್ರತ್ಯೇಕತಾವಾದವನ್ನು ಉತ್ತೇಜಿಸುವುದಕ್ಕಾಗಿ UAPA ಅಡಿಯಲ್ಲಿ "ವೈಯಕ್ತಿಕ ಭಯೋತ್ಪಾದಕ" (individual terrorist) ಎಂದು ಘೋಷಿಸಲಾಗಿದೆ.
"ಭಾರತ ಸರ್ಕಾರವು ಜಾಗರೂಕವಾಗಿದೆ ಮತ್ತು ಭಾರತದಲ್ಲಿನ ಒಟ್ಟಾರೆ ಮಾಹಿತಿ ಪರಿಸರವನ್ನು ಸುರಕ್ಷಿತವಾಗಿರಿಸಲು ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ಕ್ರಮಗಳನ್ನು ತಡೆಯಲು ಬದ್ಧವಾಗಿದೆ" ಎಂದು ಮಾಹಿತಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆರೋಪಗಳನ್ನು ಮಾಡಿದ ನಂತರ ಪ್ರತ್ಯೇಕತಾವಾದಿ ಅಂಶಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಬಹುದೆಂಬ ಭಯವು ಮುನ್ನೆಲೆಗೆ ಬಂದಿದೆ. ಆಪ್ ರಾಷ್ಟ್ರೀಯ ಸಂಚಾಲಕರು ಪಂಜಾಬ್ನ ಮುಖ್ಯಮಂತ್ರಿಯಾಗಲು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ರಾಜಿ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ವಿಶ್ವಾಸ್ ಆರೋಪಿಸಿದ್ದರು. ಅದರೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಆಧಾರರಹಿತ ಎಂದು ಹೇಳಿದ್ದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ವಿವಾದಿತ ಧರ್ಮಗುರು ರಾಮ್ ರಹೀಮ್ಗೆ ‘ಝಡ್ ಪ್ಲಸ್’ ಭದ್ರತೆ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ 21 ದಿನ ಫರ್ಲೋ ಮೇಲೆ ಬಿಡುಗಡೆಯಾಗಿರುವ ಸ್ವಘೋಷಿತ ದೇವ ಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಫೆ.7ರಂದು ಹರಾರಯಣ ಜೈಲಿನಿಂದ ಫರ್ಲೋ ಮೇಲೆ ಬಿಡುಗಡೆಯಾಗಿರುವ ಗರ್ಮೀತ್ಗೆ ಭಾರತ ಮತ್ತು ವಿದೇಶಿ ಖಲಿಸ್ತಾನ ಪರ ಹೋರಾಟಗಾರರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಗುರ್ಮೀತ್ 2017ರಿಂದ ಹರಾರಯಣ ಕಾರಾಗೃಹದಲ್ಲಿದ್ದಾರೆ. ಝಡ್ ಪ್ಲಸ್ ಭದ್ರತೆಯಲ್ಲಿ 10ಕ್ಕೂ ಹೆಚ್ಚಿನ ಕಮಾಂಡೋಗಳು ಸೇರಿ ಒಟ್ಟು 55 ಸಿಬ್ಬಂದಿ 24 ತಾಸೂ ಭದ್ರತೆ ನೀಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ