'ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ...!'

By Suvarna NewsFirst Published Jun 29, 2020, 4:38 PM IST
Highlights

ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ| ಸಾಯುವ ಮುನ್ನ ಕೊರೋನಾ ರೋಗಿ ಮಾಡಿದ ವಿಡಿಯೋ ವೈರಲ್| ಆಸ್ಪತ್ರೆ ಆಸಳಿತ ಮಂಡಿ ಕೊಟ್ಟಿದೆ ಸ್ಪಷ್ಟನೆ

ಹೈದರಾಬಾದ್(ಜೂ.29): ಮಹಾಮಾರಿ ಕೊರೋನಾದಿಂದ ಕೊನೆಯುಸಿರೆಳೆಯುವುದಕ್ಕೂ ಮೊದಲು ಹೈದರಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ರೋಗಿಯೊಬ್ಬ ತನ್ನ ಅಂತಿಮ ಕ್ಷಣದ ಸೆಲ್ಪೀ ವಿಡಿಯೋ ಮಾಡಿ ಶುಕ್ರವಾರ ರಾತ್ರಿ ತನ್ನ ತಂದೆಗೆ ಕಳುಹಿಸಿದ್ದಾನೆ. ಈ ವಿಡಿಯೋದಲ್ಲಿ ಒಂದೆಡೆ ಆತನ ಅಂತಿಮ ಕ್ಷಣ ಗಾಬರಿ ಹುಟ್ಟಿಸುವಂತಿದ್ದರೆ, ಮತ್ತೊಂದೆಡೆ ಆಸ್ಪತ್ರೆಯ ನೈಜ ಪರಿಸ್ಥಿತಿಯನ್ನು ಅನಾವರಣಗೊಳಿಸಿದೆ.

ಈ ಸೆಲ್ಪೀ ವಿಡಿಯೋದಲ್ಲಿ ಯುವಕ ಆಸ್ಪತ್ರೆ ಬೆಡ್ ಮೇಲೆ ಉಸಿರಾಡಲಾಗದೇ ನರಳುತ್ತಿದ್ದು, ತನಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ವ್ಯವಸ್ಥೆಯನ್ನು ವೈದ್ಯರು ತೆಗೆದಿರಿಸಿದ್ದಾರೆಂದು ಹೇಳುತ್ತಿರುವುದು ಸ್ಪಷ್ಟವಾಗಿದೆ. ಶನಿವಾರದಿಂದ ಈ ವಿಡಿಯೋ ಭಾರೀ ವೈರಲ್ ಆಗಿದೆ.

‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌: 34 ಕೋಟಿ ರು. ಅನುದಾನ ಮಂಜೂರು!

ಇನ್ನು ಈ ವಿಡಿಯೋದಲ್ಲಿ ಕೊರೋನಾ ಪೀಡಿತ ಈ ಯುವಕ ತನಗೆ ಆಕ್ಸಿಜನ್ ಒದಗಿಸುವಂತೆ ಸಿಬ್ಬಂದಿಯಲ್ಲಿ ಮನವಿ ಮಾಡಿದ್ದೆ. ಆದರೆ ತನ್ನ ಮನವಿಯನ್ನು ಯಾರೂ ಕೇಳುತ್ತಿಲ್ಲ. ಕಳೆದ ಮೂರು ಗಂಟೆಯಿಂದ ನನಗೆ ಉಸಿರಾಡಲೂ ಆಗುತ್ತಿಲ್ಲ ಎಂದು ಆರೋಪಿಸಿದ್ದಾನೆ. 'ಅವರು ವೆಂಟಿಲೇಟರ್ ತೆಗೆದಿದ್ದಾರೆ. ನನ್ನ ಹೃದಯ ನಿಂತಂತೆ ಭಾಸವಾಗುತ್ತಿದೆ. ಕೇವಲ ಶ್ವಾಸಕೋಶ ಮಾತ್ರ ಕಾರ್ಯ ನಿರ್ವಹಿಸುವಂತೆ ಅನಿಸುತ್ತಿದೆ. ಆದರೆ ನನಗೀಗ ಉಸಿರಾಡಲೂ ಆಗುತ್ತಿಲ್ಲ ಅಪ್ಪ. ಬಾಯ್ ಅಪ್ಪ, ಎಲ್ಲರಿಗೂ ವಿದಾಯ. ಬಾಯ್ ಅಪ್ಪ' ಎಂದು ನರಳಾಡುತ್ತಾ ಹೇಳಿದ್ದಾನೆ.

ಮಗನ ಅಂತ್ಯಕ್ರಿಯೆ ನೆರವೇರಿಸಿದ ತಂದೆ

ಇನ್ನು ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ತಂದೆ ಶನಿವಾರ ಆತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ತನ್ನ ಮಗ ಸಾಯುವ ಕೆಲ ನಿಮಿಷಗಳ ಹಿಂದಷ್ಟೇ ತನಗೆ ವಿಡಿಯೋ ಕಳುಹಿಸಿದ್ದಾನೆ ಎಂದು ಅವರು ಅಳುತ್ತಾ ವಿವರಿಸಿದ್ದಾರೆ. 

ಕೂಲರ್‌ಗಾಗಿ ವೆಂಟಿಲೇಟರ್ ಆಫ್ ಮಾಡಿದ್ರು, ಕುಟುಂಬದ ತಪ್ಪಿಗೆ ಕೊರೋನಾ ಸೋಂಕಿತ ಸಾವು!

ಜೂನ್ 24ರಂದು ಯುವಕನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಇದಾದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಂದ ಮತ್ತೊಂದೆಡೆ ಸ್ಥಳಾಂತರಿಸಲಾಗಿತ್ತು. ಆದರೆ ಇದ್ಯಾವುದೂ ಪರಿಣಾಮ ಬೀರಿಲ್ಲ. ಆತನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ತಂದೆ ಕಂಬನಿ ಮಿಡಿದಿದ್ದಾರೆ.

ಆರೋಪ ತಳ್ಳಿ ಹಾಕಿದ ಆಸ್ಪತ್ರೆ ಮಂಡಳಿ

ಇನ್ನು ಯುವಕ ಈ ವಿಡಿಯೋದಲ್ಲಿ ಹೇಳಿದಂತೆ ನಾವು ವೆಂಟಿಲೇಟರ್ ತೆಗೆದಿರಿಸಿರಲಿಲ್ಲ ಎಂದು ಆಸ್ಪತ್ರೆ ಮಂಡಳಿ ತಿಳಿಸಿದೆ. ಆತನ ಸ್ಥಿತಿ ಬಹಳ ಗಮಭೀರವಾಗಿತ್ತು. ಇದೇ ಕಾರಣದಿಂದ ಆತನಿಗೆ ಆಮ್ಲಜನಕ ಪೂರೈಕೆಯಾಗುತ್ತಿರುವುದು ತಿಳಿಯುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಆತನನ್ನು ಉಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆಂದು ತಿಳಿಸಿದ್ದಾರೆ. 

click me!