ನವದೆಹಲಿ(ಏ. 22) ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 9:40 ರ ಸುಮಾರಿಗೆ ರೋಹಿಣಿ ನ್ಯಾಯಾಲಯದ ಗೇಟ್ ಸಂಖ್ಯೆ 8 ರ ಬಳಿ ಇಬ್ಬರು ವಕೀಲರಾದ ಸಂಜೀವ್ ಚೌಧರಿ (Sanjeev Chaudhary) ಮತ್ತು ರಿಷಿ ಚೋಪ್ರಾ (Rishi Chopra) ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆದಿದೆ. ಈ ಚಕಮಕಿ ಮಧ್ಯೆ ಎನ್ಎಪಿ ಕಾನ್ಸ್ಟೆಬಲ್ ಮಧ್ಯಪ್ರವೇಶಿಸಿದ್ದು, ಅವರು ನೆಲದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಮಯದಲ್ಲಿ ಗೇಟ್ನಲ್ಲಿ ನಿಯೋಜಿಸಲ್ಪಟ್ಟಿದ್ದ ನಾಗಾಲ್ಯಾಂಡ್ ಸಶಸ್ತ್ರ ಪಡೆ (Nagaland Armed Police) ಪೊಲೀಸ್ ಕಾನ್ಸ್ಟೆಬಲ್, ವಕೀಲರ ವಾಗ್ವಾದದ ಮಧ್ಯೆಪ್ರವೇಶಿಸಿ ನೆಲದ ಕಡೆಗೆ ಗುರಿಯಾಗಿರಿಸಿ ಗುಂಡು ಹಾರಿಸಿದರು ಎಂದು ರೋಹಿಣಿ ಜಿಲ್ಲೆಯ ಪೊಲೀಸ್ ಉಪ ಆಯುಕ್ತ ಪ್ರಣವ್ ತಯಾಲ್ (Pranav Tayal) ಹೇಳಿದ್ದಾರೆ. ಗುಂಡು ನೆಲಕ್ಕೆ ಅಪ್ಪಳಿಸಿದ್ದರಿಂದ ಕಾಂಕ್ರೀಟ್ ಛಿದ್ರಗೊಂಡು ಬೇರಾದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಹೊಸಪೇಟೆ ಕೋರ್ಟ್ ಆವರಣದಲ್ಲೇ ಲಾಯರ್ ಬರ್ಬರ ಹತ್ಯೆ, ಸತ್ತರೂ ಕೊಚ್ಚುತ್ತಲೇ ಇದ್ದ!
ಸುದ್ದಿ ಸಂಸ್ಥೆ ಐಎಎನ್ಎಸ್ಗೆ ಮಾತನಾಡಿದ ವಕೀಲರೊಬ್ಬರು, ರೋಹಿಣಿ ನ್ಯಾಯಾಲಯದ ಗೇಟ್ನ ಹೊರಗೆ ವಕೀಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ವಾದ ನಡೆದು ವಿಕೋಪಕ್ಕೆ ತಿರುಗಿತು. 2-3 ವಕೀಲರು ಅವರೊಂದಿಗೆ ಸೇರಿಕೊಂಡರು. ವಾದವು ಶೀಘ್ರದಲ್ಲೇ ಹಿಂಸಾತ್ಮಕ ತಿರುವು ಪಡೆದುಕೊಂಡಿತು ಮತ್ತು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದರು ಎಂದು ಹೇಳಿದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಪಂಜಾಬ್ನ ಲೂಧಿಯಾನ ನಗರದಲ್ಲಿರುವ ಲೂಧಿಯಾನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿತ್ತು. ಕಟ್ಟಡದ ಎರಡನೇ ಮಹಡಿಯಲ್ಲಿರುವ ಬಾತ್ ರೂಮಿನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಬಾತ್ ರೂಮಿನ ಗೋಡೆಗಳೂ ಧ್ವಂಸವಾಗಿದ್ದವು. ಜತೆಗೆ ಅಕ್ಕ ಪಕ್ಕದ ಕೊಠಡಿಗಳ ಕಿಟಕಿ ಗಾಜುಗಳೂ ಪುಡಿ ಪುಡಿಯಾಗಿದ್ದವು.
ಬೆಳಗಾವಿ; ಕೋರ್ಟ್ ಆವರಣದಲ್ಲೇ ಪತ್ನಿ ಕಾಲು ತುಂಡರಿಸಿದ ನಿವೃತ್ತ ಸೈನಿಕ
ಲೂಧಿಯಾನ ನ್ಯಾಯಾಲಯ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ರೆಕಾರ್ಡ್ ರೂಂನ ಪಕ್ಕದಲ್ಲೇ ಸ್ಫೋಟದ ಸದ್ದು ಕೇಳಿಸಿತ್ತು.
ಸ್ಫೋಟಕ್ಕೆ ಸಾಕ್ಷಿಯಾದ ನ್ಯಾಯಾಲಯ ಸಂಕೀರ್ಣ ಲುಧಿಯಾನ ನಗರದ ಕೇಂದ್ರ ಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದಲ್ಲೇ ಇತ್ತು. ಈ ಘಟನೆಗೂ ಮೊದಲು ದಿಲ್ಲಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಲೂಧಿಯಾನದ ನ್ಯಾಯಾಲಯ ಸಂಕೀರ್ಣದಲ್ಲೂ ಸ್ಫೋಟ ಸಂಭವಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ