ಗಡಿ ಸಮಸ್ಯೆ ಸಭೆ: ಭಾರತ, ಚೀನಾ ಬಿಗಿಪಟ್ಟು!

By Kannadaprabha NewsFirst Published Jun 7, 2020, 7:26 AM IST
Highlights

ಗಡಿ: ಭಾರತ, ಚೀನಾ ಬಿಗಿಪಟ್ಟು| ಏಪ್ರಿಲ್‌ನಲ್ಲಿದ್ದ ಸ್ಥಿತಿ ಜಾರಿಗೆ ತನ್ನಿ, ಯೋಧರನ್ನು ವಾಪಸ್‌ ಕರೆಸಿಕೊಳ್ಳಿ| ಚೀನಾ ಎದುರು ಭಾರತ ವಾದ| ರಸ್ತೆ ಕಾಮಗಾರಿಗೆ ಚೀನಾ ಕ್ಯಾತೆ| ಉಭಯ ದೇಶಗಳ ನಡುವೆ ಸೇನಾಧಿಕಾರಿಗಳ ಮಾತುಕತೆ ಸಂಪನ್ನ

ನವದೆಹಲಿ/ಬೀಜಿಂಗ್(ಜೂ.07)‌: ಕಳೆದೊಂದು ತಿಂಗಳಿನಿಂದ ಪೂರ್ವ ಲಡಾಖ್‌ ಭಾಗದಲ್ಲಿ ಉದ್ಭವಿಸಿರುವ ಗಡಿ ಸಂಘರ್ಷವನ್ನು ಕೊನೆಗಾಣಿಸಲು ಭಾರತ ಹಾಗೂ ಚೀನಾ ನಡುವೆ ಸೇನಾಧಿಕಾರಿಗಳ ಮಟ್ಟದ ಮಾತುಕತೆ ಶನಿವಾರ ನಡೆಯಿತು. ಮಾತುಕತೆಯ ವಿವರಗಳನ್ನು ಎರಡೂ ದೇಶಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಎರಡೂ ದೇಶಗಳು ತಮ್ಮ ನಿಲುವಿನ ವಿಚಾರವಾಗಿ ಬಿಗಿಪಟ್ಟು ಹಿಡಿದಿವೆ ಎಂದು ಮೂಲಗಳು ತಿಳಿಸಿವೆ.

ಮೂರು ತಾಸು ನಡೆದ ಈ ಸಭೆ ವೇಳೆ, ಏಪ್ರಿಲ್‌ಗೆ ಮುನ್ನ ಲಡಾಖ್‌ ಗಡಿಯ ಪ್ಯಾಂಗೋಂಗ್‌ ಸರೋವರ ಪ್ರದೇಶದಲ್ಲಿ ಯಾವ ಸ್ಥಿತಿ ಇತ್ತೋ, ಅದನ್ನೇ ಪುನಾಸ್ಥಾಪಿಸಬೇಕು. ಜತೆಗೆ ಗಲ್ವಾನ್‌ ಕಣಿವೆಯಲ್ಲಿ ಚೀನಾ ತನ್ನ ಸೇನಾ ಬಲವನ್ನು ಕಡಿತಗೊಳಿಸಬೇಕು. ಹೆಚ್ಚುವರಿ ಯೋಧರನ್ನು ಅವರ ಮೂಲ ನೆಲೆಗಳಿಗೆ ವಾಪಸ್‌ ಕಳಿಸಬೇಕು ಎಂದು ಭಾರತ ಪ್ರಮುಖವಾಗಿ ಪ್ರಸ್ತಾಪಿಸಿತು ಎನ್ನಲಾಗಿದೆ.

ಗಡಿ ತಿಕ್ಕಾಟ: ಭಾರತ, ಚೀನಾ ಮಾತುಕತೆ!

ಇದಕ್ಕೆ ಪ್ರತ್ಯುತ್ತರ ನೀಡಿದ ಚೀನಾ, ಲಡಾಖ್‌ ಗಡಿಯಲ್ಲಿ ರಸ್ತೆ ನಿರ್ಮಾಣವನ್ನು ಭಾರತ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿತು ಎಂದು ಹೇಳಲಾಗಿದೆ. ಆದರೆ ಈ ರಸ್ತೆ ಕಾಮಗಾರಿ ಭಾರತದ ಭೂಭಾಗದೊಳಗೆ ನಡೆಯುತ್ತಿದೆ. ಇದನ್ನು ಚೀನಾ ಆಕ್ಷೇಪಿಸುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಭಾರತ ಪ್ರತಿಪಾದಿಸಿತು ಎಂದು ವರದಿಗಳು ತಿಳಿಸಿವೆ.

ಲೆಫ್ಟಿನೆಂಟ್‌ ಜನರಲ್‌ ಹರೀಂದರ್‌ ಸಿಂಗ್‌ ಅವರು ಭಾರತವನ್ನು ಪ್ರತಿನಿಧಿಸಿದರೆ, ಮೇಜರ್‌ ಜನರಲ್‌ ಲಿಯು ಲಿನ್‌ ಅವರು ಚೀನಾ ಮುಂದಾಳತ್ವ ವಹಿಸಿದ್ದರು. ಚುಶೂಲ್‌ನ ವಾಸ್ತವಿಕ ಗಡಿ ರೇಖೆಯಲ್ಲಿರುವ ಚೀನಾದ ಭಾಗಕ್ಕೆ ಸೇರಿದ ಮಾಲ್ಡೋದಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಮಾತುಕತೆ ನಿಗದಿಯಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ 3 ತಾಸು ವಿಳಂಬವಾಯಿತು. ಭಾರತೀಯ ನಿಯೋಗವನ್ನು ಚೀನಾದ ಹಿರಿಯ ಅಧಿಕಾರಿಗಳು ಆದರದಿಂದ ಬರಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಮಾತುಕತೆಯ ಕುರಿತಂತೆ ಸೇನೆಯಾಗಲೀ, ವಿದೇಶಾಂಗ ಸಚಿವಾಲಯವಾಗಲೀ ಅಧಿಕೃತ ಮಾಹಿತಿ ನೀಡಿಲ್ಲ. ಮಾತುಕತೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಧಿಕಾರಿಗಳು ಮಾತುಕತೆಯ ವಿವರಗಳನ್ನು ತಮ್ಮ ಹಿರಿಯ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತ-ಚೀನಾ ಗಡಿ ಬಿಕ್ಕಟ್ಟು;ಇಲ್ಲಿದೆ ಡ್ರ್ಯಾಗನ್ ದೇಶದ ಕೋಪಕ್ಕೆ ಅಸಲಿ ಕಾರಣ !

ಪ್ಯಾಂಗೋಂಗ್‌ ಸರೋವರಕ್ಕೆ ಸಮೀಪದ ಬಳಿ ಭಾರತ ತನಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಾಣ ಆರಂಭಿಸಿತ್ತು. ಈ ರಸ್ತೆಯಿಂದ ಗಡಿ ಪಹರೆಗೆ ಅನುಕೂಲವಾಗುತ್ತಿತ್ತು. ಆದರೆ ಇದಕ್ಕೆ ಅಡ್ಡಿಪಡಿಸಿದ್ದ ಚೀನಾ, ಭಾರಿ ಸಂಖ್ಯೆಯ ಯೋಧರನ್ನು ಜಮಾವಣೆ ಮಾಡಿತ್ತು. ಭಾರತ- ಚೀನಾ ಯೋಧರು ಹೊಡೆದಾಡಿಕೊಂಡಿದ್ದರು. ಆನಂತರ ಎರಡೂ ದೇಶಗಳ ನಡುವೆ ಸಮರದ ಭೀತಿ ಸೃಷ್ಟಿಯಾಗಿತ್ತು.

click me!