ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ? ರಾಜ್ಯಪಾಲರ ದೆಹಲಿ ಭೇಟಿ ಮಧ್ಯೆ ಜೋರಾದ ಮಾತು!

By Suvarna NewsFirst Published Jun 17, 2021, 5:42 PM IST
Highlights

* ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಲಹ

* ಟಿಎಂಸಿ ಹಾಗೂ ಬಿಜೆಪಿ ನಡುವಿನ ಪೈಪೋಟಿ ತಾರಕಕ್ಕೆ

* ಬಂಗಾಳ ಹಿಂಸಾಚಾರ ವರದಿಯೊಂದಿಗೆ ದೆಹಲಿ ತಲುಪಿದ ರಾಜ್ಯಪಾಲ

* ಇತ್ತ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಬಿಜೆಪಿ ಕಾರ್ಯದರ್ಶಿ ಮಾತು

ಕೋಲ್ಕತ್ತಾ(ಏ,17): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿ ಬಿಜೆಪಿ ಸೋಲನುಭವಿಸಿದೆ. ಹೀಗಿದ್ದರೂ ಇಲ್ಲಿ ರಾಜಕೀಯ ಹೈಡ್ರಾಮಾ ಮಾತ್ರ ಮುಗಿದಿಲ್ಲ. ಚುನಾವಣಾ ಹಿಂಸಾಚಾರದ ವಿಚಾರವಾಗಿ ಬಿಜೆಪಿ, ಟಿಎಂಸಿ ಸರ್ಕಾರವನ್ನು ಗುರಿಯಾಗಿಸಿದೆ. ಇದೇ ವಿಚಾರವಾಗಿ ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಖಡ್‌ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೊತೆ ಸುಮಾರು ಎರಡು ತಾಸು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಬಂಗಾಳ ಹಿಂಸಾಚಾರ ವರದಿಯನ್ನು ಹಸ್ತಾಂತರಿಸಲಿದ್ದಾರೆ.

ದೀದೀ ತಂತ್ರಕ್ಕೆ ಬಿಜೆಪಿ ತತ್ತರ: 24 ಶಾಸಕರು ಮತ್ತೆ ಟಿಎಂಸಿಗೆ?

ರಾಷ್ಟ್ರಪತಿ ಆಡಳಿತದ ಬಗ್ಗೆ ಕೈಲಾಶ್ ವಿಜಯವರ್ಗೀಯ ಮಾತು

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಮಾತನಾಡುತ್ತಾ, ಬಂಗಾಳದಲ್ಲಿ ಸದ್ಯಕ್ಕಿರುವ ಕಾನೂನು ವ್ಯವಸ್ಥೆ ನೋಡಿದ್ರೆ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದೇ ಉತ್ತಮ ಎಂಬುವುದು ನನ್ನ ಅಭಿಪ್ರಾಯ. ಒಂದೂವರೆ ತಿಂಗಳ ಹಿಂದೆ ಚುನಾವಣೆಯಲ್ಲಿ 213 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿರುವ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವುದು ಸೂಕ್ತವೆಂದು ತೋರುತ್ತಿಲ್ಲ ಆದರೆ ಪರಿಸ್ಥಿತಿ ಇದಕ್ಕೆ ಪ್ರೇರೇಪಿಸುವಂತಿದೆ ಎಂದಿದ್ದಾರೆ. ಅಲ್ಲದೇ ಚುನಾವಣಾ ಫಲಿತಾಂಶ ಬಂದಂದಿನಿಂದ ಈವರೆಗೆ ಒಟ್ಟು 45 ಮಂದಿ ಕಾರ್ಯಕರ್ತರ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತರನ್ನು ಥಳಿಸಲಾಗುತ್ತಿದೆ. ಅಲ್ಲಿ ಹಿಂಸಾಚಾರವಷ್ಟೇ ಕಾಣುಯತ್ತಿದೆ. ಅನೇಕ ಮಹಿಳೆಯರ ಅತ್ಯಾಚಾರವಾಗುತ್ತಿದೆ, ಆದರೆ ಪೊಲೀಸ್ ಕೇಸ್ ದಾಖಲಾಗಿಲ್ಲ. ಹೀಗಿರುವಾಗ ರಾಷ್ಟ್ರಪತಿ ಆಳ್ವಿಕೆ ಹೇರುವುದೇ ಸೂಕ್ತ ಎಂದಿದ್ದಾರೆ.

ಬಂಗಾಳ ಬಿಜೆಪಿಯಲ್ಲಿ ತಳಮಳ; TMC ಭವನದಲ್ಲಿ ಮುಕುಲ್ ರಾಯ್- ಮಮತಾ ಭೇಟಿ!

ಬಂಗಾಳ ಹಿಂಸಾಚಾರದ ವರದಿ ಜೊತೆ ದೆಹಲಿಯಲ್ಲಿ ಗವರ್ನರ್

ಇನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲೇ ಆರಂಭವಾಗಿದ್ದ ರಾಜಕೀಯ ಸಂಘರ್ಷ, ಚುನಾವಣಾ ಫಲಿತಾಂಶ ಬಂದು ಸರ್ಕಾರ ಅಧಿಕಾರಕ್ಕೆ ಬಂದರೂ ನಿಂತಿಲ್ಲ. ಹೀಗಿರುವಾಗ ಬಂಗಾಳದ ರಾಜ್ಯಪಾಲ ಧನ್‌ಖಡ್‌ ರಾಷ್ಟ್ರಪತಿ, ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ದೆಹಲಿಗೆ ತಲುಪಿದ್ದಾರೆ. ಈ ವೇಳೆ ಬಂಗಾಳ ಹಿಂಸಾಚಾರ ಸಂಬಂಧಿತ ವರದಿಯನ್ನೂ ಒಪ್ಪಿಸಲಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ರಾಜ್ಯಪಾಲರು ಮರಳಿ ಬರುವಷ್ಟರಲ್ಲಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎನ್ನಲಾಘಿದೆ. 

click me!