ಮಂದಿರ್ ವಹೀ ಬನಾಯೇಂಗೆ, 33 ವರ್ಷಗಳ ಬಿಜೆಪಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ!

By Suvarna NewsFirst Published Jan 22, 2024, 1:10 PM IST
Highlights

ಮಂದಿರ್ ವಹೀ ಬನಾಯೇಂಗೆ, ಕೌನ್ ರೋಖೇಗಾ? ಇದು 1991ರಲ್ಲಿ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಆಡಿದ ಪ್ರಖರ ಮಾತಗಳು. 1991ರಿಂದ ಬಿಜೆಪಿ ರಾಮ ಮಂದಿರ ಹೋರಾಟವನ್ನು ಆದ್ಯೆತೆಯನ್ನಾಗಿ ತೆಗೆದುಕೊಂಡಿತು. 1996ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಇದೀಗ ಬಿಜೆಪಿ ಈಡೇರಿಸಿದೆ. ಆಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದಲ್ಲಿ ಭಗವಾನ್ ಬಾಲರಾಮನ ಪ್ರಾಣಪ್ರತಿಷ್ಠಾಪನೆಯೊಂದಿಗೆ ಬಿಜೆಪಿ 33 ವರ್ಷಗಳ ಭರವಸೆಯನ್ನು ಈಡೇರಿಸಿದೆ.
 

ಆಯೋಧ್ಯೆ(ಜ.21) ಕೋಟ್ಯಾಂತರ ಹಿಂದೂಗಳ ಶ್ರದ್ಧಾ, ಭಕ್ತಿ ಹಾಗೂ ಆಸ್ಮಿತೆಯ ಕೇಂದ್ರವಾಗಿದ್ದ ಆಯೋಧ್ಯೆ ರಾಮ ಮಂದಿರದ ಪ್ರಾಣಪ್ರತಿಷ್ಠೆಯಾಗಿದೆ. ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಮಂದಿರ ಲೋಕಾರ್ಪಣೆಯಾಗಿದೆ. 1991ರಿಂದ ಬರೋಬ್ಬರಿ 33 ವರ್ಷಗಳ ಕಾಲ ಬಿಜೆಪಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿತ್ತು. ತನ್ನ ಪ್ರಣಾಳಿಕೆಯಲ್ಲಿ ಮಂದಿರ್ ವಹೀ ಬನಾಯೇಂಗೆ ಅನ್ನೋ ಭರವಸೆಯನ್ನು ನೀಡಿತ್ತು. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಬಿಜೆಪಿಯ ದಿಗ್ಗಜ ನಾಯಕರು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಹಾಗೂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಹೋರಾಟದ ಸ್ವರೂಪ ಬದಲಾಯಿತು. ಇದರ ಪರಿಣಾಮ ಬಿಜಿಪಿಯ 33 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಪ್ರಧಾನಿ ಮೋದಿ ಇಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸುವ ಮೂಲಕ ಭವ್ಯ ರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಭವ್ಯ ರಾಮ ಮಂದಿರದಲ್ಲಿ ಭಗವಾನ್ ರಾಮಲಲ್ಲಾ ವಿರಾಜಮಾನನಾಗಿದ್ದಾನೆ. 1528ರಿಂದ ಕೋಟ್ಯಾಂತರ ಹಿಂದೂಗಳು ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಪ್ರಾಣತೆತ್ತಿದ್ದಾರೆ. ಹಲವು ತಲೆಮಾರುಗಳು ಹೋರಾಟದ ಮೂಲಕವೇ ಪ್ರಾಣಬಿಟ್ಟಿದ್ದಾರೆ. ಆದರೆ ಭವ್ಯ ರಾಮ ಮಂದಿದಲಲ್ಲಿ ರಾಮಲಲ್ಲಾ ದರ್ಶನ ಪಡೆಯುವ ಸೌಭಾಗ್ಯ ಈ ತಲೆಮಾರಿಗೆ ದಕ್ಕಿದೆ. 33 ವರ್ಷಗಳ ಹಿಂದೆ ಬಿಜೆಪಿ ಆಯೋಧ್ಯೆ ರಾಮ ಮಂದಿರ ಅಲ್ಲೆ ಕಟ್ಟುತ್ತೇವೆ ಎಂದು ಘೋಷಿಸಿತ್ತು. ಇದೀಗ ಅದೇ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ.

Latest Videos

ಪ್ರಧಾನಿ ಮೋದಿಯಿಂದ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ, 500 ವರ್ಷದ ಹೋರಾಟ ಸಾರ್ಥಕ!

ರಾಮ ಮಂದಿರದ ಹೋರಾಟದಲ್ಲಿ ಬಿಜೆಪಿಗಿಂತ ರಾಮ ಭಕ್ತರ ಹೋರಾಟವೇ ಅತೀ ಮುಖ್ಯ. ಸರಿಸುಮಾರು 500 ವರ್ಷಗಳ ಹೋರಾಟದಲ್ಲಿ ಬಿಜೆಪಿ 33 ವರ್ಷಗಳಿಂದ ಈ ಹೋರಾಟದಲ್ಲಿ ತೊಡಗಿಸಿಕೊಂಡಿದೆ. ಆದರೆ ಬಿಜೆಪಿ ರಾಮ ಮಂದಿರ ಹೋರಾಟಕ್ಕೆ ಆಡಳಿತಾತ್ಮಕ ಶಕ್ತಿ ತುಂಬಿತು. ಕಾನೂನಾತ್ಮಕವಾಗಿ ಹಾಗೂ ಸಂಘಟನಾತ್ಮಕವಾಗಿ ಆಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿತು. 

1991ರಲ್ಲಿ ಎಲ್‌ಕೆ ಅಡ್ವಾಣಿ ರಥಯಾತ್ರೆ ಆರಂಭಿಸಿದ್ದರು. ದೇಶದ ಮೂಲೆ ಮೂಲೆಯಲ್ಲಿ ಆಯೋಧ್ಯೆ ರಾಮ ಮಂದಿರ ರಥಯಾತ್ರೆ ಸಂಚರಿಸಿತ್ತು. ಈ ರಥಯಾತ್ರೆ ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿತ್ತು. 1996ರ ಸಾರ್ವತ್ರಿಕ ಚುನಾವಣೆಗೂ ಪೂರ್ವ ಈ ಭರವಸೆಯನ್ನು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಿತು. ಬಿಜೆಪಿಯ ಈ ಹೋರಾಟ ದೇಶದ ಹಿಂದೂಗಳ ಹೃದಯ ಹಾಗೂ ಮನಸ್ಸಿನಲ್ಲಿ ಹುದುಗಿದ್ದ ಭಗವಾನ್ ಶ್ರೀರಾಮನ ಪ್ರಜ್ಞೆಯನ್ನು ಜಾಗೃತಗೊಳಿಸಿತ್ತು.

ಇದರ ಪರಿಣಾಮ 1996ರ ಲ್ಲಿ ಅಟಲ್ ಬಿಹಾರಿ ವಾಜಪೇಯಿ 13 ದಿನಗಳ ಪ್ರಧಾನಿಯಾದರೆ, 1998ರಲ್ಲಿ ವಾಜಪೇಯಿ 2ನೇ ಬಾರಿಗೆ ಪ್ರಧಾನಿಯಾದರು. ಈ ಬಾರಿ ಪೂರ್ಣಾವಧಿ ಪ್ರಧಾನಿಯಾಗಿ ಅದಿಕಾರದಲ್ಲಿದ್ದರು. 2004ರ ಚುನಾವಣೆಗೆ ಆಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಬಿಜೆಪಿ ಕಾನೂನು ಮಾರ್ಗಗಳನ್ನು ಹುಡುಕಿತ್ತು. ಹೋರಾಟ ತೀವ್ರಗೊಂಡಿತು. ಆದರೆ ಬಿಜೆಪಿಗೆ ಅಧಿಕಾರ ಸಿಗಲಿಲ್ಲ. 2009ರ ಚುನಾವಣೆ ವೇಳೆಗೆ ಸಾಂವಿಧಾನಿಕ ಮಾರ್ಗಗಳತ್ತ ಕಣ್ಣಾಡಿಸಿತು. ಈ ಬಾರಿ ಕೂಡ ಅಧಿಕಾರ ಸಿಗಲಿಲ್ಲ.ಆದರೆ ಬಿಜೆಪಿ ಹೋರಾಟ ಮಾತ್ರ ತೀವ್ರಗೊಳ್ಳುತ್ತಲೇ ಸಾಗಿತ್ತು.

ಪ್ರಾಣಪ್ರತಿಷ್ಠೆ ಬೆನ್ನಲ್ಲೇ ದರ್ಶನ ನೀಡಿದ ಪ್ರಭು ಶ್ರೀರಾಮ, ಎಲ್ಲೆಡೆ ಜೈಶ್ರೀರಾಮ್ ಘೋಷಣೆ !

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧಿಕಾರಕ್ಕೇರಿದ ಬೆನ್ನಲ್ಲೇ ರಾಮ ಮಂದಿರದ ಭರವಸೆಗಳು ಹೆಚ್ಚಾಯಿತು. ಸಾಂವಿಧಾನಿಕ, ಕಾನೂನಾತ್ಮಕ ದಾರಿಗಳ ಮೂಲಕ ಪ್ರಯತ್ನ ನಡೆಸಿತು. ಆದರೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದ ಕಾರಣ ಮಂದಿರ ನಿರ್ಮಾಣ ಸಾಧ್ಯವಾಗಲಿಲ್ಲ. ಇತ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಮ ಮಂದಿರ ಆದ್ಯತೆಯನ್ನಾಗಿ ತೆಗೆದುಕೊಂಡಿತ್ತು.ಸಂವಿಧಾನದ ಚೌಕಟ್ಟಿನೊಳಗೆ ಇರುವ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸಿ, ಅದಕ್ಕೊಂದು ನೀಲನಕ್ಷೆ ಸಿದ್ಧಪಡಿಸಿತು. 2019ರ ಸುಪ್ರೀಂ ಕೋರ್ಟ್ ತೀರ್ಪು ಬಿಜೆಪಿಯ ಪ್ರಯತ್ನಕ್ಕೆ ಪುಷ್ಠಿ ನೀಡಿತು. ಅಲ್ಲಿಂದಲೇ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡು ಇದೀಗ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೇರವೇರಿದೆ. ಬಿಜೆಪಿ 33 ವರ್ಷಗಳ ಹೋರಾಟವನ್ನು ಪ್ರಧಾನಿ ನರೇಂದ್ರ ಮೋಡಿ ಈಡೇರಿಸುವ ಮೂಲಕ ತನ್ನ ಬದ್ಧತೆಯನ್ನು ಎತ್ತಿ ಹಿಡಿಯಿತು.

click me!