
ಶ್ರೀನಗರ: ಜಮ್ಮು-ಕಾಶ್ಮೀರದ ಹಜರತ್ಬಾಲ್ ದರ್ಗಾದಲ್ಲಿರುವ ಅಶೋಕ ಲಾಂಛನ ಧ್ವಂಸಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾರ್ಥನಾ ಕೊಠಡಿಯ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಫಲಕದಲ್ಲಿನ ರಾಷ್ಟ್ರೀಯ ಲಾಂಛನ ವಿರೂಪಗೊಳಿಸಲಾಗಿದೆ. ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ನಂತರ ಈ ಘಟನೆ ನಡೆದಿದ್ದು, ಇದು ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಫಲಕದಲ್ಲಿನ ರಾಷ್ಟ್ರೀಯ ಲಾಂಛನ ವಿರೂಪಗೊಳಿಸಿರುವ ವಿಧ್ವಂಸಕರನ್ನು ಬಂಧಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ದರ್ಗಾ ಹಜರತ್ಬಾಲ್ ಜಮ್ಮು ಮತ್ತು ಕಾಶ್ಮೀರದ ಪುಣ್ಯಕ್ಷೇತ್ರದಲ್ಲಿ ಒಂದಾಗಿದೆ. ಈ ದರ್ಗಾ ಪ್ರವಾದಿ ಮೊಹಮ್ಮದ್ ಅವರ ಅವಶೇಷಗಳನ್ನು ಹೊಂದಿರುವ ಸ್ಥಳವಾಗಿದೆ. ಈದ್ ಮಿಲಾದ್ ಹಿನ್ನೆಲೆ ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಧಾರ್ಮಿಕ ಮುಖಂಡರು ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಗಾಗಿ ದರ್ಗಾ ಹಜರತ್ಬಾಲ್ ನಲ್ಲಿ ಸೇರಿದ್ದರು. ಶುಕ್ರವಾರದ ನಮಾಜ್ ಬಳಿಕ ನೆರೆದಿದ್ದ ಜನರು ವಕ್ಫ್ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ನಂತರ ಈ ಘಟನೆ ನಡೆದಿದೆ.
ಕೆಲ ವಾರಗಳ ಹಿಂದೆಯಷ್ಟೇ ಹಜರತ್ಬಾಲ್ ದರ್ಗಾದ ನವೀಕರಣ ಕಾರ್ಯವನ್ನು ಮಾಡಲಾಗಿತ್ತು. ಬಿಜೆಪಿ ನಾಯಕಿ ಮತ್ತು ಜೆ & ಕೆ ವಕ್ಫ್ ಮಂಡಳಿಯ ಅಧ್ಯಕ್ಷೆ ದರಾಕ್ಷನ್ ಅಂದ್ರಾಬಿ (Darakhshan Andrabi) ಅವರು ನವೀಕರಣವನ್ನು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ ದರಾಕ್ಷನ್ ಅಂದ್ರಾಬಿ, ದರ್ಗಾ ನವೀಕರಣಕ್ಕಾಗಿ ಯಾವುದೇ ಹಣದ ಸಹಾಯ ಪಡೆದುಕೊಳ್ಳಲಾಗಿಲ್ಲ. ಮಂಡಳಿಯೇ ಎಲ್ಲಾ ಹಣಕಾಸಿನ ವೆಚ್ಚಗಳನ್ನು ನಿರ್ವಹಿಸಿದೆ ಎಂದು ಹೇಳಿದ್ದರು. ಇದೇ ಮೊದಲ ಬಾರಿಗೆ ಉದ್ಘಾಟನೆಯ ನೆನಪಿಗಾಗಿ ದರ್ಗಾ ಮುಂಭಾಗ ಶಿಲಾಫಲಕವನ್ನು ಅಳವಡಿಸಲಾಗಿತ್ತು.
ಇದೀಗ ಈ ಶಿಲಾಫಲಕದಲ್ಲಿರುವ ರಾಷ್ಟ್ರೀಯ ಲಾಂಭನವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಲಾಗಿದೆ. ಹಜರತ್ಬಾಲ್ ದೇಗುಲದಲ್ಲಿರುವ ಅಶೋಕ ಲಾಂಛನವನ್ನು ನಾಶ ಮಾಡಿರೋದನ್ನು "ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಕಲ್ಲಿನ ಮೂಲಕ ಲಾಂಛನ ವಿರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರೀಯ ಲಾಂಛನ ಚಿತ್ರ ನಾಶ ಮಾಡಿದವರನ್ನು ಬಂಧಿಸಬೇಕು ಎಂದು ದರಾಕ್ಷನ್ ಅಂದ್ರಾಬಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಬೋರ್ಡ್ ಉದ್ಘಾಟನಾ ಫಲಕದಲ್ಲಿ ರಾಷ್ಟ್ರೀಯ ಲಾಂಛನಕ್ಕೆ ವಿರೋಧ, ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ ಮುಸ್ಲಿಮರು!
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ದರಾಕ್ಷನ್ ಅಂದ್ರಾಬಿ, ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಕಾರ್ಯಕರ್ತರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ವಕ್ಫ್ ಮಂಡಳಿಯಿಂದ ನನ್ನನ್ನು ತೆಗೆದುಹಾಕುವ ಪ್ರಯತ್ನ ಇದಾಗಿದೆ. ಆದ್ರೆ ಅವರಿಂದ ಸಾಧ್ಯವಾಗಿಲ್ಲ. ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತೆ ಕಲ್ಲು ತೂರಾಟದಂತಹ ಹಳೆ ಚಾಳಿಗೆ ಮರಳುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ದರ್ಗಾ ಮುಂಭಾಗದ ಫಲಕದಲ್ಲಿನ ರಾಷ್ಟ್ರೀಯ ಲಾಂಛನ ವಿರೂಪಗೊಳಿಸಿದವರು ಜೇಬಿನಲ್ಲಿ ಕರೆನ್ಸಿ ಇರಿಸಿಕೊಳ್ಳಲ್ಲವೇ? ಹಣದ ಮೇಲಿನ ಅಶೋಕ ಲಾಂಛನವನ್ನು ಹೀಗೆಯೇ ನಾಶಗೊಳಿಸುತ್ತೀರಾ? ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಅವರು ರಾಷ್ಟ್ರೀಯ ಲಾಂಛನಕ್ಕೆ ನಿಷ್ಠೆ ವಹಿಸುವುದಾಗಿ ಪ್ರತಿಜ್ಞೆ ಮಾಡಿಲ್ಲವೇ ಎಂದು ದರಾಕ್ಷನ್ ಅಂದ್ರಾಬಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ-ಟ್ರಂಪ್ ದೋಸ್ತಿಗೆ ಹೊಸ ತಿರುವು: ದೊಡ್ಡಣ್ಣನ ಹೇಳಿಕೆಗೆ ಫ್ರೆಂಡ್ ರಿಯಾಕ್ಷನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ