ನೂಪುರ್ ಶರ್ಮಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ಕೋರ್ಟ್‌!

By Santosh NaikFirst Published Aug 10, 2022, 4:18 PM IST
Highlights

ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮ ನೀಡಿದ್ದ ಹೇಳಿಕೆಗೆ ದೇಶಾದ್ಯಂತ ವಿರೋಧ ಸವ್ಯಕ್ತವಾದ ಬೆನ್ನಲ್ಲಿಯೇ ಅವರ ವಿರುದ್ಧ ದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಈಗ ಈ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡಲು ಸುಪ್ರೀಂ ಕೋರ್ಟ್‌ ಕೂಡ ಒಪ್ಪಿಕೊಂಡಿದೆ.
 

ನವದೆಹಲಿ (ಆ.10): ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಗೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಆಕೆಯ ವಿರುದ್ಧ ದೇಶದೆಲ್ಲೆಡೆ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡಿ ಒಂದೇ ಎಫ್‌ಐಆರ್‌ ಆಗಿ ಮಾಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಆದರೆ, ಎಫ್‌ಐಆರ್‌ ರದ್ದು ಮಾಡುವ ಅವರ ಬೇಡಿಕೆಯನ್ನು ನಾವು ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ಹೈಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ಆದೇಶ ನೀಡಿದೆ.  ಆಕೆಯ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡಿ ದೆಹಲಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ತಮಗೆ ಜೀವ ಬೆದರಿಕೆ ಇದ್ದು, ವಿಚಾರಣೆಗಾಗಿ ವಿವಿಧ ಕೋರ್ಟ್‌ಗಳಿಗೆ ಅಲೆದಾಡಲು ಕಷ್ಟವಾಗಿದೆ. ಆ ಕಾರಣಕ್ಕಾಗಿ ನನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ನೂಪರ್‌ ಶರ್ಮ ಮನವಿ ಸಲ್ಲಿಸಿದ್ದರು. ಇನ್ನೊಂದು ಅರ್ಜಿಯಲ್ಲಿ ಈ ಎಲ್ಲಾ ಎಫ್‌ಐಆರ್‌ಗಳನ್ನು ರದ್ದು ಮಾಡಲು ಮನವಿ ಮಾಡಿದ್ದರು. ಮೊದಲ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾವಣೆ ಮಾಡಿಸಿ ವಿಚಾರಣೆ ಮಾಡುವುದಾಗಿ ಹೇಳಿದ್ದರೆ, 2ನೇ ಅರ್ಜಿಯ ಕುರಿತಾಗಿ ದೆಹಲಿ ಹೈಕೋರ್ಟ್‌ಗೆ ನೀವು ಹೋಗಬಹುದು ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ. 

ನೂಪುರ್‌ ಶರ್ಮ ಅವರು ಪ್ರವಾದಿ ಕುರಿತಾಗಿ ನೀಡಿದ ಹೇಳಿಕೆಯ ಬಗ್ಗೆ ದೇಶಾದ್ಯಂತ ಒಟ್ಟು 10 ಎಫ್‌ಐಆರ್‌ಗಳು ದಾಖಲಾಗಿವೆ. ಈ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡುವಂತೆ ನೂಪುರ್‌ ಶರ್ಮ ಕೋರ್ಟ್‌ಗೆ ಮನವಿ ಮಾಡಿದ್ದರು. ನೂಪುರ್‌ ಶರ್ಮ ಅವರು ಹೇಳಿರುವ ರೀತಿಯಲ್ಲಿ ಅಕೆಯ ಜೀವಕ್ಕೆ ಅಪಾಯ ಇರುವುದು ಖಂಡಿತ ಎಂದಿರುವ ಕೋರ್ಟ್‌, ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್‌ ಮಾಡಿ ದೆಹಲಿಯಲ್ಲಿ ವರ್ಗಾವಣೆ ಮಾಡಲು ಒಪ್ಪಿಕೊಂಡಿತು. ಇದರ ತನಿಖೆಯ ಹೊಣೆಯನ್ನು ದೆಹಲಿ ಪೊಲೀಸ್‌ ಮಾಡಲಿದೆ ಎಂದು ಹೇಳಿದೆ.

SC clubs & transfers all FIRs against Nupur Sharma over alleged hate statement on Prophet Mohammad, to Delhi

(File Pic) pic.twitter.com/F8bnEzdYBy

— ANI (@ANI)

ತನಿಖೆ ಮುಗಿಯುವವರೆಗೂ ಬಂಧನವಿಲ್ಲ: ಮಹಾರಾಷ್ಟ್ರದಲ್ಲಿ ದಾಖಲಾದ ಮೊದಲ ಎಫ್‌ಐಆರ್‌ ಹಾಗೂ ದೆಹಲಿಯಲ್ಲಿ ದಾಖಲಾದ ಇನ್ನೊಂದು ಎಫ್‌ಐಆರ್‌ಅನ್ನು ಪ್ರಮುಖವಾಗಿ ಪರಿಗಣಿಸಿ, ಇದಕ್ಕೆ ದೇಶದ ವಿವಿಧ ಕಡೆಯಲ್ಲಿ ದಾಖಲಾದ ಎಫ್‌ಐಆರ್‌ಗಳನ್ನು ಸಂಯೋಜನೆ ಮಾಡಬಹುದು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಇತರ ಪೋಲೀಸ್ ಪಡೆಗಳಿಂದ ಸಹಾಯ ಪಡೆಯಲು ದೆಹಲಿ ಪೊಲೀಸ್‌ನ ಐಎಫ್‌ಎಫ್‌ಒ ಮುಕ್ತವಾಗಿರುತ್ತದೆ. ತನಿಖೆ ಮುಗಿಯುವವರೆಗೆ, ನೂಪುರ್ ಶರ್ಮಾ ಅವರಿಗೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದೆ.

ನೂಪುರ್ ಶರ್ಮಾರ ಬಂಧಿಸುವಂತಿಲ್ಲ : ಸುಪ್ರೀಂ ಕೋರ್ಟ್‌

ದೆಹಲಿ ಪೊಲೀಸ್‌ನ ಜೊತೆಗೆ ಇತರ ರಾಜ್ಯಗಳ ಪೊಲೀಸರು ತನಿಖಾ ತಂಡದಲ್ಲಿರಬೇಕು ಎಂದು ಎದುರಾಳಿ ವಕೀಲ ಗುರುಮೂರ್ತಿ ಹೇಳಿದ್ದಕ್ಕೆ, ಈ ಕುರಿತಾಗಿ ನಿರ್ಧಾರ ಮಾಡುವ ಅಧಿಕಾರ ಆಯಾ ಏಜೆನ್ಸಿಗೆ ಇರುತ್ತದೆ. ಅವರಿಗೆ ಅಗತ್ಯವಿದ್ದಲ್ಲಿ ಬೇರೆ ರಾಜ್ಯದ ಪೊಲೀಸ್‌ ಪಡೆಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿದೆ. ಅದಲ್ಲದೆ, ಈ ತೀರ್ಪಿನ ನಂತರ ಈ ವಿಚಾರದಲ್ಲಿ ದೇಶದ ಯಾವುದೇ ಭಾಗದಲ್ಲಿ ದಾಖಲಾಗುವ ಎಫ್‌ಐಆರ್ ಅನ್ನು ದೆಹಲಿ ಪೊಲೀಸ್‌ಗೆ ವರ್ಗಾವಣೆಯಾಗಬೇಕು ಎಂದು ಸುಪ್ರೀಂ ಹೇಳಿದೆ.

ನೂಪುರ್‌ ಶರ್ಮ ತಲೆ ತಂದವರಿಗೆ ನನ್ನ ಮನೆಯನ್ನ ದಾನ ಮಾಡ್ತೇನೆ

ನೂಪುರ್‌ ಶರ್ಮ ಅರ ಪರವಾಗಿ ಮಾಜಿ ಎಎಸ್‌ಜಿ ಮಣಿಂದರ್‌ ಸಿಂಗ್ ವಿಚಾರಣೆಯಲ್ಲಿದ್ದರೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದರು. ಇನ್ನು ಮಹಾರಾಷ್ಟ್ರ ಸರ್ಕಾರದ ಪರವಾಗಿ ರಾಹುಲ್‌ ಚಿತ್ನಿಸ್‌ ಮತ್ತು ಸಚಿನ್‌ ಪಾಟೀಲ್‌ ವಿಚಾರಣೆಯಲ್ಲಿದ್ದರು. ನೂಪುರ್‌ ಶರ್ಮ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

click me!