ತಲೆ ಬೋಳಿಸಿ, ಕೈಕೋಳ ಹಾಕಿ ಟಿಎಂಸಿ ಗೂಂಡಾಗಳ ಅರೆಬೆತ್ತಲೆ ಪರೇಡ್‌ ಮಾಡಿಸಿದ ಬಂಗಾಳ ಪೊಲೀಸ್‌

Published : May 27, 2026, 04:23 PM IST
West Bengal TMC

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ, ಟಿಎಂಸಿ ಹಿನ್ನೆಲೆಯುಳ್ಳ ಪ್ರಭಾವಿ ರೌಡಿಗಳನ್ನು ಪೊಲೀಸರು ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಈ ಕಠಿಣ ಕ್ರಮವನ್ನು ಟಿಎಂಸಿ 'ಮಾನವ ಹಕ್ಕುಗಳ ಉಲ್ಲಂಘನೆ' ಎಂದು ತೀವ್ರವಾಗಿ ಖಂಡಿಸಿದೆ.

ಕೋಲ್ಕತ್ತಾ/ಹೌರಾ (ಮೇ.27): 'ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ' ಎಂಬ ನಾಣ್ಣುಡಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಪ್ರಸ್ತುತ ಅನ್ವಯಿಸಿದಂತಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿನ್ನೆಲೆಯುಳ್ಳ, ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿರುವ ಕನಿಷ್ಠ ಮೂವರು ಸ್ಥಳೀಯ ಪ್ರಭಾವಿ ರೌಡಿಗಳನ್ನು ಪೊಲೀಸರು ಕೇವಲ ಒಳ ಉಡುಪುಗಳಲ್ಲಿ ಕೈಕೋಳ ತೊಡಿಸಿ ಹೌರಾದ ರಸ್ತೆಗಳಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಆಡಳಿತಾರೂಢ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಟಿಎಂಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕಿಡಿಕಾರಿದೆ.

ತಲೆ ಬೋಳಿಸಿಕೊಂಡು, ಒಳ ಉಡುಪಿನಲ್ಲಿ ಹೆಜ್ಜೆ ಹಾಕಿದ ಡಾನ್ ಆಕಾಶ್ ಸಿಂಗ್!

ಉತ್ತರ ಹೌರಾದಲ್ಲಿ ಭಾರಿ ದಿಗಿಲು ಮೂಡಿಸಿದ್ದ, ಕನಿಷ್ಠ 20ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ‘ಡಾನ್’ ಆಕಾಶ್ ಸಿಂಗ್‌ನನ್ನು ಗೋಲಾಬಾರಿ ಮತ್ತು ಮಾಲಿಪಾಂಚ್‌ಘರಾ ಠಾಣೆಯ ಪೊಲೀಸರು ಸಾರ್ವಜನಿಕವಾಗಿ ಪರೇಡ್ ನಡೆಸಿದ್ದಾರೆ. ಮೇ 14 ರಂದು ಬಂಧಿತನಾಗಿದ್ದ ಈತನ ವಿರುದ್ಧ 2021 ರಲ್ಲಿ ಪೊಲೀಸರ ಮೇಲೆಯೇ ಬಾಂಬ್ ಎಸೆದು, ಗುಂಡಿನ ದಾಳಿ ನಡೆಸಿದ ಗಂಭೀರ ಪ್ರಕರಣ ದಾಖಲಾಗಿದೆ.

ಪೊಲೀಸರು ಈತನನ್ನು "ಅಪರಾಧ ಸ್ಥಳದ ಮರುಸೃಷ್ಟಿ" ನೆಪದಲ್ಲಿ ರಸ್ತೆಗೆ ಕರೆತಂದಿದ್ದರು. ಈ ವೇಳೆ ಆಕಾಶ್ ಸಿಂಗ್ ಕೇವಲ ಬನಿಯನ್ ಮತ್ತು ಬಾಕ್ಸರ್ ಶಾರ್ಟ್ಸ್ ಧರಿಸಿದ್ದ, ಜೊತೆಗೆ ಆತನ ತಲೆ ಹಾಗೂ ಗಡ್ಡವನ್ನು ಸಂಪೂರ್ಣವಾಗಿ ಬೋಳಿಸಲಾಗಿತ್ತು. ತೀವ್ರ ಬೇಸಿಗೆಯ ಶಾಖದ ಕಾರಣ ತಾನೇ ತಲೆ ಬೋಳಿಸಲು ವಿನಂತಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈತನ ಸಾರ್ವಜನಿಕ ಪರೇಡ್‌ನ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿಯು ತನ್ನ ಅಧಿಕೃತ ‘X’ ಖಾತೆಯಲ್ಲಿ ಹಂಚಿಕೊಂಡು, ಇದು ಹೊಸ ಸರ್ಕಾರದ ‘ಝೀರೋ ಟಾಲರೆನ್ಸ್’ ನೀತಿ ಎಂದು ಬಣ್ಣಿಸಿದೆ.

ಐಷಾರಾಮಿ ಬಂಗಲೆ, ಟೆರೇಸ್ ಮೇಲೆ ಜೂಜಿನ ಅಡ್ಡೆ ಹೊಂದಿದ್ದ ಟಿಎಂಸಿ ವಾರ್ಡ್ ಅಧ್ಯಕ್ಷನ ಪರೇಡ್!

ಇನ್ನೊಂದು ಕಾರ್ಯಾಚರಣೆಯಲ್ಲಿ, ಹೌರಾದ ವಾರ್ಡ್ ಸಂಖ್ಯೆ 36 ರ ಟಿಎಂಸಿ ಅಧ್ಯಕ್ಷ ಶಾಮಿಮ್ ಅಹ್ಮದ್ ಅಲಿಯಾಸ್ "ಬಾಬೆ" ಅಥವಾ "ಗಬ್ಬರ್" ಎಂಬಾತನನ್ನು ಶಿಬ್‌ಪುರ್ ಪೊಲೀಸರು ಮತ್ತು ಕೇಂದ್ರ ಅರೆಸೇನಾ ಪಡೆಗಳು ಜಿಟಿ ರಸ್ತೆಯಲ್ಲಿ ಕೇವಲ ಬಿಳಿ ಬನಿಯನ್ ಮತ್ತು ಕೈಕೋಳ ಹಾಕಿಸಿ ಪರೇಡ್ ನಡೆಸಿವೆ. ಈತ ಟಿಎಂಸಿ ಶಾಸಕ ಹಾಗೂ ಮಾಜಿ ಸಚಿವ ಅರೂಪ್ ರಾಯ್ ಅವರ ಆಪ್ತ ಎನ್ನಲಾಗಿದೆ.

ಮೇ 7 ರಂದು ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮೆರವಣಿಗೆಯ ಮೇಲೆ ಬಾಂಬ್ ಮತ್ತು ಗನ್ ದಾಳಿ ನಡೆಸಿದ ಪ್ರಮುಖ ಆರೋಪಿ ಈತನಾಗಿದ್ದು, ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಈತನನ್ನು ಚೆಂಬೂರ್‌ನಲ್ಲಿ ಬಂಧಿಸಿದ್ದರು. ಈತನ ಐಷಾರಾಮಿ 5 ಅಂತಸ್ತಿನ ನಿವಾಸದ ಮೇಲೆ ದಾಳಿ ನಡೆಸಿದಾಗ ರಹಸ್ಯ ಮೆಟ್ಟಿಲುಗಳು, ಟೆರೇಸ್ ಮೇಲಿನ ಜೂಜಿನ ಅಡ್ಡೆ ಹಾಗೂ ಮಹಡಿಯ ಮೇಲೆಯೇ ಸಾಕಲಾಗಿದ್ದ ಬರೋಬ್ಬರಿ 140 ಆಡುಗಳು ಪತ್ತೆಯಾಗಿವೆ.

ಸೊಂಟಕ್ಕೆ ಹಗ್ಗ ಕಟ್ಟಿ ಮಾಜಿ ಹೋಮ್ ಗಾರ್ಡ್ ಶಾಹೀನ್ ಮೊಲ್ಲಾ ಮೆರವಣಿಗೆ!

ಹೌರಾ ಜಿಲ್ಲೆಯ ಟಿಎಂಸಿ ರಾಜಕೀಯ ಪ್ರಭಾವ ಬಳಸಿ ಸ್ಥಳೀಯ ಅಂಗಡಿಕಾರರಿಂದ ಹಫ್ತಾ ವಸೂಲಿ (Extortion) ಮಾಡುತ್ತಿದ್ದ ಆರೋಪದ ಮೇಲೆ ಮಾಜಿ ತಾತ್ಕಾಲಿಕ ಟ್ರಾಫಿಕ್ ಹೋಮ್ ಗಾರ್ಡ್ ಸಾಹಿನ್ ಮೊಲ್ಲಾ ಅಲಿಯಾಸ್ "ಸನ್ನಿ" ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದ ಬೆನ್ನಲ್ಲೇ, ಕೇಂದ್ರ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪೊಲೀಸರು ಆತನ ಸೊಂಟಕ್ಕೆ ದಪ್ಪನೆಯ ಹಗ್ಗ ಕಟ್ಟಿ, ಬಿಳಿ ಶಾರ್ಟ್ಸ್ ಮತ್ತು ಬನಿಯನ್‌ನಲ್ಲಿ ಬೆಲ್ತೋಲಾದಿಂದ ರಸ್ತೆಯಲ್ಲಿ ನಡೆಸಿಕೊಂಡು ಹೋಗಿದ್ದಾರೆ. ಈ ವೇಳೆ ಆತ ತಾನು ನಿರಪರಾಧಿ ಎಂದು ಸಾರ್ವಜನಿಕರ ಮುಂದೆ ಕಿರುಚಾಡುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ.

"ಇದು ಸರ್ಕಾರದ ಸರ್ಕಸ್ ಕಂಪನಿಯಂತಿದೆ": ಟಿಎಂಸಿ ಆಕ್ರೋಶ

ಪೊಲೀಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ‘X’ ನಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ. "ಪೊಲೀಸ್‌ ಇರುವುದು ಸರ್ಕಸ್ ನಡೆಸುವುದು ಅಥವಾ ಸಾರ್ವಜನಿಕರಿಗೆ ಮನರಂಜನೆಯ ಪ್ರದರ್ಶನ ನೀಡುವುದಲ್ಲ. ಪೊಲೀಸರಿಗೆ ಮಿತಿಮೀರಿದ ಅಧಿಕಾರ ನೀಡಿದಾಗ ಸಂಸ್ಥೆಗಳೊಳಗಿನ ಕ್ರೂರತನ ಜಾಗೃತಗೊಳ್ಳುತ್ತದೆ. ನಾನು ಯಾವುದೇ ಅಪರಾಧಿಯನ್ನು ಸಮರ್ಥಿಸುವುದಿಲ್ಲ. ಆದರೆ ಎಂತಹ ಕಠಿಣ ಕ್ರಿಮಿನಲ್ ಆದರೂ ಈ ರೀತಿ ಒಳ ಉಡುಪಿನಲ್ಲಿ, ಹಗ್ಗ ಕಟ್ಟಿ ಮಾರುಕಟ್ಟೆಯಲ್ಲಿ ಪರೇಡ್ ಮಾಡುವುದು ಸಂವಿಧಾನ ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಸರ್ಕಾರ ಸಂವಿಧಾನದಂತೆ ನಡೆಯದೆ ಸರ್ಕಸ್ ಕಂಪನಿಯಂತೆ ಆಡಿದರೆ ಬಂಗಾಳದ ಜನತೆ ಭವಿಷ್ಯದಲ್ಲಿ ಭಾರಿ ತೊಂದರೆ ಅನುಭವಿಸುತ್ತಾರೆ" ಎಂದು ಕಿಡಿಕಾರಿದ್ದಾರೆ.

ರಾಜ್ಯಾದ್ಯಂತ ಮುಂದುವರಿದ ಬಿಜೆಪಿ ಸರ್ಕಾರದ ತೀವ್ರ ನಿಗಾ

2021 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಂತರ ನಡೆದ ಹಿಂಸಾಚಾರ, ಹಫ್ತಾ ವಸೂಲಿ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಟಿಎಂಸಿ ನಾಯಕರ ವಿರುದ್ಧ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆ ಹಮ್ಮಿಕೊಂಡಿದೆ.

ಇದರ ಅಡಿಯಲ್ಲಿ ಈಗಾಗಲೇ ಇ.ಡಿ ಅಧಿಕಾರಿಗಳಿಂದ ಮಾಜಿ ಸಚಿವ ಸುಜಿತ್ ಬೋಸ್ ಬಂಧನವಾಗಿದ್ದರೆ, ದುರ್ಗಾಪುರದಲ್ಲಿ ಟಿಎಂಸಿ ಕಾರ್ಮಿಕ ಸಂಘದ ನಾಯಕ ಶೇಖ್ ವಾಸುಲ್, ಕೊಲ್ಕತ್ತಾದಲ್ಲಿ ಕೌನ್ಸಿಲರ್ ಸುದೀಪ್ ಪೋಲಿ (ಈತನನ್ನು ಸಾರ್ವಜನಿಕರು ಕಳ್ಳ ಕಳ್ಳ ಎಂದು ಮುತ್ತಿಗೆ ಹಾಕಿದ್ದರು), ಕೃಷ್ಣನಗರದಲ್ಲಿ ಪಂಚಾಯತ್ ಮುಖಂಡ ಸರಜಿತ್ ಬಿಸ್ವಾಸ್ ಮತ್ತು ಹೂಗ್ಲಿಯಲ್ಲಿ ಕಮರಪುಕರ್ ಪಂಚಾಯತ್ ಪ್ರಧಾನ್ ರಾಜ್‌ದೀಪ್ ಡೇ ಸೇರಿದಂತೆ ಹಲವು ಟಿಎಂಸಿ ಪ್ರಮುಖರನ್ನು ವಿವಿಧ ದೊಡ್ಡ ಮಟ್ಟದ ಸುಲಿಗೆ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಸರಣಿಯಾಗಿ ಬಂಧಿಸಲಾಗಿದೆ. ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸಲು ಬಂಗಾಳ ಪೊಲೀಸರು ಈ ದೃಶ್ಯ ಮಾಧ್ಯಮದ ತಂತ್ರಕ್ಕೆ ಮೊರೆಹೋಗಿದ್ದಾರೆ ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Crime Shocking: ಲೈಂಗಿಕ ಕಿರುಕುಳ ಆರೋಪದಲ್ಲಿ FIR; 'ಧುರಂಧರ್' ಟೀಮ್ ಸದಸ್ಯನ ಪರಿಸ್ಥಿತಿ ಏನಾಗಿದೆ ಈಗ?
ಬಕ್ರೀದ್​ಗೆಂದು ಅವ್ರು ಕುರಿ ತಂದ್ರೆ, ಇವ್ರು ಹಂದಿ ತಂದ್ರು! ಹಂದಿ ಹಿಡಿದು ಓಡಿದ ಪೊಲೀಸ್ರು: ವಿಡಿಯೋ ವೈರಲ್​