ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ, ಭಾರತಕ್ಕೆ ಓಡಿಬಂದ ಶೇಖ್‌ ಹಸೀನಾ!

By Santosh NaikFirst Published Aug 5, 2024, 3:06 PM IST
Highlights

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಹೋದರಿ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ. ಸೇನಾ ಮುಖ್ಯಸ್ಥರು ವಿವಿಧ ರಾಜಕೀಯ ಪಕ್ಷಗಳು ಮತ್ತು ಮಧ್ಯಸ್ಥಗಾರರ ಜೊತೆ ಸರ್ಕಾರದ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
 

ಢಾಕಾ (ಆ.5): ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದೇಶದಲ್ಲಿ ಸರ್ಕಾರ ವಿರೋಧಿ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದು, ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಶೇಖ್‌ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವುದು ಅವರ ಒತ್ತಾಯವಾಗಿದೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ನಡುವೆ ಶೇಖ್‌ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೆಲಿಕಾಪ್ಟರ್‌ನಲ್ಲಿ ತಮ್ಮ ಸಹೋದರಿಯೊಂದಿಗೆ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದೆಡೆ, ಬಲವಂತವಾಗಿ ಅಧಿಕಾರ ಪಡೆದುಕೊಳ್ಳುವ ಯಾವುದೇ ಪ್ರಯತ್ನಗಳನ್ನು ತಡೆಯುವಂತೆ ಪ್ರಧಾನಿ ಪುತ್ರ ದೇಶದ ಭದ್ರತಾ ಪಡೆಗಳನ್ನು ಒತ್ತಾಯಿಸಿದ್ದಾರೆ. ಹಿಂಸಾತ್ಮಕ ಘರ್ಷಣೆಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪಿದ್ದಾರೆ. ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಡುವೆ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಿದ್ಧರಾಗಿದ್ದಾರೆ. ರಾಷ್ಟ್ರವ್ಯಾಪಿ ಕರ್ಫ್ಯೂ ವಿರೋಧಿಸಿ ನೂರಾರು ವಿದ್ಯಾರ್ಥಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಂತೆಯೇ ಈ ಘೋಷಣೆ ಹೊರಬಿದ್ದಿದೆ.

"ಜನರಲ್ ವೇಕರ್ ಅವರು ಮಧ್ಯಾಹ್ನ 2:00 ಗಂಟೆಗೆ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ" ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದಂತೆ, ಮಿಲಿಟರಿಯ ಅಧಿಕೃತ ವಕ್ತಾರರಾದ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್‌ನ ಅಧಿಕಾರಿ ರಶೆದುಲ್ ಆಲಂ ಹೇಳಿದ್ದಾರೆ. ಪ್ರತಿಭಟನಾಕಾರರು ತಮ್ಮ "ಲಾಂಗ್ ಮಾರ್ಚ್ ಟು ಢಾಕಾ"ವನ್ನು ಪ್ರಾರಂಭಿಸಿದಾಗಲೂ, ಸೇನಾ ಮುಖ್ಯಸ್ಥರು ಆಡಳಿತಾರೂಢ ಅವಾಮಿ ಲೀಗ್ ಮತ್ತು ವಿರೋಧ ಪಕ್ಷ BNP ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಸೇನಾ ಪ್ರಧಾನ ಕಚೇರಿಯಲ್ಲಿ ಇತರ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಬಾಂಗ್ಲಾದೇಶದ ದಿನಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.


ಬಾಂಗ್ಲಾದೇಶ ಬೆಳವಣಿಗೆ ಟಾಪ್‌ 10 ಪಾಯಿಂಟ್ಸ್‌
1. ಬಾಂಗ್ಲಾದೇಶದ ವಿವಿಧ ಪ್ರದೇಶಗಳಲ್ಲಿ ಪ್ರಧಾನಿ ಶೇಖ್ ಹಸೀನಾ ಮತ್ತು ಆಡಳಿತ ಪಕ್ಷದ ಬೆಂಬಲಿಗರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರ ನಡುವೆ ಭಾನುವಾರ ಬೆಳಿಗ್ಗೆ ಘರ್ಷಣೆಗಳು ನಡೆದವು. ಪ್ರತಿಭಟನೆಯ ಸಮಯದಲ್ಲಿ, ಹಿಂಸಾತ್ಮಕ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಹಾರಿಸುವುದರೊಂದಿಗೆ, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ಭುಗಿಲೆದ್ದವು.

Latest Videos

2. ಬಾಂಗ್ಲಾದೇಶ ಪೊಲೀಸರ ಪ್ರಕಾರ, ಘರ್ಷಣೆಯ ಸಮಯದಲ್ಲಿ ದೇಶಾದ್ಯಂತ ಒಟ್ಟು 14 ಪೊಲೀಸರು ಸಾವು ಕಂಡಿದ್ದಾರೆ. ಅವರಲ್ಲಿ, ಸಿರಾಜ್‌ಗಂಜ್‌ನ ಎನಾಯೆತ್‌ಪುರ್ ಪೊಲೀಸ್ ಠಾಣೆಯಲ್ಲಿ 13 ಜನರು ಮತ್ತು ಕೊಮಿಲ್ಲಾದ ಎಲಿಯಟ್‌ಗಂಜ್‌ನಲ್ಲಿ ಒಬ್ಬ ಸಾವು ಕಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದೇ ವೇಳೆ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

3. ಘರ್ಷಣೆಯ ತೀವ್ರವಾದ ಬೆನ್ನಲ್ಲಿಯೇ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತ ಮಾಡಲಾಗಿದೆ.  ಅನಿರ್ದಿಷ್ಟ ಅವಧಿಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಹೇರುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

4. ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ, ಬಾಂಗ್ಲಾದೇಶ ರೈಲ್ವೆ ಎಲ್ಲಾ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ದೇಶದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

5. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಬಾಂಗ್ಲಾದೇಶ ಆಡಳಿತವು ಇಂದಿನಿಂದ ಮೂರು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಿದೆ ಎಂದು ಸ್ಥಳೀಯ ಮಾಧ್ಯಮ ಔಟ್ಲೆಟ್ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

6. ಭಾನುವಾರ ನಡೆದ ಪ್ರತಿಭಟನೆಯಲ್ಲಿ ಅಪರಿಚಿತ ವ್ಯಕ್ತಿಗಳು ಮತ್ತು ಬಲಪಂಥೀಯ ಇಸ್ಲಾಮಿ ಶಶೋಂತಂತ್ರ ಆಂಡಲೋನ್ ಕಾರ್ಯಕರ್ತರು ಭಾಗವಹಿಸಿದ್ದರು, ಅವರು ಅನೇಕ ಪ್ರಮುಖ ಹೆದ್ದಾರಿಗಳಲ್ಲಿ ಮತ್ತು ರಾಜಧಾನಿಯೊಳಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

7. ಪ್ರತಿಭಟನಾಕಾರರನ್ನು "ಭಯೋತ್ಪಾದಕರು" ಎಂದು ಕರೆದ ಪ್ರಧಾನಿ ಶೇಖ್ ಹಸೀನಾ, ಪ್ರತಿಭಟನೆಯ ಹೆಸರಿನಲ್ಲಿ ದೇಶಾದ್ಯಂತ "ವಿಧ್ವಂಸಕ" ದಲ್ಲಿ ತೊಡಗಿರುವವರನ್ನು ಹತ್ತಿಕ್ಕಲು ಜನರಿಗೆ ತಿಳಿಸಿದ್ದಾರೆ.

8. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ಘರ್ಷಣೆಯನ್ನು ಟೀಕೆ ಮಾಡಿದ್ದು, ಬಾಂಗ್ಲಾದೇಶದಲ್ಲಿ "ಆಘಾತಕಾರಿ ಹಿಂಸಾಚಾರ" ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ. ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಜುಲೈ ಆರಂಭದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಭಾನುವಾರದ ಹಿಂಸಾಚಾರದವರೆಗೆ ಒಟ್ಟು 300ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೆ ಭಾರೀ ಸಂಘರ್ಷಕ್ಕೆ 98 ಜನ ಬಲಿ: ಭಾರತೀಯರಿಗೆ ಎಚ್ಚರಿಕೆ

9. ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಿದೆ. "ತೀವ್ರ ಎಚ್ಚರಿಕೆ" ಮತ್ತು ಅವರ ಚಲನವಲನವನ್ನು ನಿರ್ಬಂಧಿಸುವಂತೆ ಕೇಳಿದೆ. ಮುಂದಿನ ಸೂಚನೆ ಬರುವವರೆಗೂ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ತನ್ನ ನಾಗರಿಕರನ್ನು ಕೇಳಿಕೊಂಡಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ನಸುಳುವಿಕೆ ಹೇಗೆ? ವಿಡಿಯೋ ಮೂಲಕ ತೋರಿಸಿದ ಯೂಟ್ಯೂಬರ್!

10.ಬಾಂಗ್ಲಾದೇಶ ಸೇನೆ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಜನರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಸೇನೆ ಹೇಳಿದೆ. ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ಅಧಿಕಾರಿಗಳಿಗೆ "ಬಾಂಗ್ಲಾದೇಶದ ಸೇನೆಯು ಜನರ ನಂಬಿಕೆಯ ಸಂಕೇತವಾಗಿದೆ" ಮತ್ತು "ಇದು ಯಾವಾಗಲೂ ಜನರ ಪರವಾಗಿ ನಿಂತಿದೆ ಮತ್ತು ಜನರು ಮತ್ತು ದೇಶದ ಸಲುವಾಗಿ ಸೇವೆ ಸಲ್ಲಿಸೋದನ್ನು ಮುಂದುವರಿಸುತ್ತದೆ' ಎಂದು ಹೇಳಿದೆ.

click me!