
ಢಾಕಾ (ಜ.03): ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ, ದೇಶದ ಇತಿಹಾಸ ತಿರುಚುವ ಹಲವು ಪ್ರಯತ್ನ ಮಾಡಿರುವ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಇದೀಗ ಮತ್ತೆ ಅಂಥದ್ದೇ ಕೆಲಸ ಮಾಡಿದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಘೋಷಣೆ ಮಾಡಿದ್ದು ಶೇಖ್ ಮುಜೀಬುರ್ ಎಂಬುದರ ಬದಲಾಗಿ ಘೋಷಣೆ ಮಾಡಿದ್ದು ಜಿಯಾವುರ್ ರೆಹಮಾನ್ ಎಂದು ಬದಲಾಯಿಸಿದೆ. ದೇಶದ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಈ ಕುರಿತು ಬದಲಾವಣೆ ಮಾಡಲಾಗಿದೆ.
1971ರ ಪಾಕ್ ವಿರುದ್ಧ ಯುದ್ಧದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಿಕ್ಕ ಬಳಿಕ, ಮುಜೀಬುರ್ ರೆಹಮಾನ್, ಬಾಂಗ್ಲಾದೇಶ ವಿಮೋಚನೆಗೊಂಡಿದೆ ಎಂದು ವೈರ್ಲೆಸ್ ಸಂದೇಶ ರವಾನಿಸಿದ್ದರು. ಆದರೆ ಸೇನೆಯಲ್ಲಿ ಕಮಾಂಡರ್ ಆಗಿದ್ದ ಜಿಯಾವುರ್ ರೆಹಮಾನ್ ಅದನ್ನು ಓದಿ ಹೇಳಿದ್ದರು. ಆದರೆ ಪಠ್ಯಗಳಲ್ಲಿ ವಾಸ್ತವ ತಿರುಚಲಾಗಿದೆ. ಈ ಕಾರಣಕ್ಕಾಗಿ ಸಾಕ್ಷ್ಯ ಆಧರಿಸಿ ವಿಮೋಚನೆ ಘೋಷಿಸಿದ್ದು ಜಿಯಾವುರ್ ಎಂದು ಬದಲಾವಣೆ ಮಾಡಲಾಗಿದೆ ಎಂದು ಪಠ್ಯಪುಸ್ತಕ ಪುನರ್ ರಚನಾ ಸಮಿತಿ ಹೇಳಿದೆ.
ಬಾಂಗ್ಲಾದಲ್ಲಿ ಕ್ರಿಶ್ಚಿಯನ್ನರ 19 ಮನೆಗಳಿಗೆ ಬೆಂಕಿ; ಮುಂದುವರಿದ ಅಲ್ಪಸಂಖ್ಯಾತರ ಮೇಲಿನ ದಾಳಿ
ಜೊತೆಗೆ ಬಾಂಗ್ಲಾದ ಪಿತಾಮಹಾ ಎನ್ನುವ ಹೆಸರಿನಿಂದಲೂ ಶೇಖ್ ಮುಜಿಬರ್ ರೆಹಮಾನ್ ಅವರ ಹೆಸರನ್ನು ಪರಿಷ್ಕರಣೆಯಲ್ಲಿ ತೆಗೆದು ಹಾಕಲಾಗಿದೆ. ಮುಜೀಬುರ್, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ. ಹೀಗಾಗಿ ಸೇಡಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವಾಮೀ ಲೀಗ್ ನಾಯಕರು ಆರೋಪಿಸಿದ್ದರು.ಮಧ್ಯಂತರ ಸರ್ಕಾರ ಬಂದ ಬಳಿಕ, ಹೊಸ ನೋಟುಗಳಲ್ಲಿ ಮುಜೀಬುರ್ ಫೊಟೋಕ್ಕೆ ಕೊಕ್ ನೀಡಲು, ಮುಜೀಬುರ್ ಹತ್ಯೆ ನಡೆದ ಆ.15ಕ್ಕೆ ನೀಡುತ್ತಿದ್ದ ರಾಷ್ಟ್ರೀಯ ರಜೆ ರದ್ದು ಮಾಡಲಾಗಿತ್ತು. ದೇಶವ್ಯಾಪಿ ಇದ್ದ ಅವರ ಪ್ರತಿಮೆಗಳನ್ನು ಉರುಳಿಸಲಾಗಿತ್ತು.
ಹಸೀನಾ ಗಡೀಪಾರು ಮಾಡಿ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಗಡೀಪಾರಿಗೆ ಬಾಂಗ್ಲಾದೇಶ ಸರ್ಕಾರದ ಕೋರಿಕೆ ಬಂದಿದೆ. ಆದರೆ ಸಮಯದಲ್ಲಿ, ಈ ವಿಷಯದ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ’ ಭಾರತದ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ. ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರನ್ನು ಗಡೀಪಾರು ಮಾಡುವಂತೆ ಕೋರಿ ಭಾರತಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮಂಗಳವಾರ ಹೇಳಿದೆ. ಹಸೀನಾ ಪಲಾಯನ ನಂತರ ಅಧಿಕೃತವಾಗಿ ಭಾರತಕ್ಕೆ ಬಾಂಗ್ಲಾದೇಶವು ಹಸ್ತಾಂತರ ಕೋರಿದ್ದು ಇದೇ ಮೊದಲು.
ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಅಪಹರಣದಲ್ಲಿ ಶೇಖ್ ಹಸೀನಾ ಭಾಗಿ ಆರೋಪ
ಬಾಂಗ್ಲಾದಲ್ಲಿ ಮೀಸಲು ವಿರೋಧಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಬೆನ್ನಲ್ಲೇ ಆ.5ರಂದು ದೇಶ ತೊರೆದ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ನರಮೇಧದ ಆರೋಪದಡಿ ಅಂರಾತಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಹಸೀನಾ ಹಾಗೂ ಕೆಲ ಮಾಜಿ ಸಚಿವರು, ಸಲಹೆಗಾರರು, ಸೇನಾಧಿಕಾರಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಷಿದ್ ಹುಸೇನ್, ‘ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಹಸೀನಾರನ್ನು ಬಾಂಗ್ಲಾಗೆ ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿದ್ದೇವೆ’ ಎಂದರು. ‘ಭಾರತ ಹಾಗೂ ಬಾಂಗ್ಲಾ ನಡುವೆ ಹಸ್ತಾಂತರದ ಒಪ್ಪಂದವಿದೆ. ಈ ಪ್ರಕ್ರಿಯೆಯಲ್ಲಿ ಸಹಕರಿಸಲು ಭಾರತದ ವಿದೇಶಾಂಗ ಇಲಾಖೆಯಲ್ಲಿ ಮನವಿ ಮಾಡಿದ್ದೇವೆ’ ಎಂದು ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್ ಆಲಂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ