
ಕೊಟ್ಟಾಯಂ (ಕೇರಳ) (ಜ.03): ದೇವಾಲಯಗಳಲ್ಲಿ ಪುರುಷರು ಮೇಲಂಗಿ ತೆಗೆಯು ಪದ್ಧತಿ ನಿಲ್ಲಬೇಕು ಎನ್ನುವ ಶಿವಗಿರಿ ಮಠದ ಸಚ್ಚಿದಾನಂದ ಶ್ರೀ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ನಿಲುವಿಗೆ ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ಕಿಡಿಕಾರಿದ್ದು, ‘ಪ್ರತಿಯೊಂದು ದೇವಾಲಯವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಅದನ್ನು ಸರ್ಕಾರ ಅಥವಾ ಯಾವುದೇ ವ್ಯಕ್ತಿ ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಪ್ರಭಾವಿ ನಾಯರ್ ಸರ್ವೀಸ್ ಸೊಸೈಟಿ (ಎನ್ಎಸ್ಎಸ್) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಕುಮಾರನ್, ‘ಕ್ರೈಸ್ತರು ಮತ್ತು ಮುಸ್ಲಿಮರು ಕೂಡ ಅವರದ್ದೇ ಆದ ಸಂಪ್ರದಾಯವನ್ನು ಹೊಂದಿದ್ದಾರೆ.
ಸಿಎಂ ಮತ್ತು ಶಿವಗಿರಿ ಮಠ ಅವರನ್ನು ಟೀಕಿಸುವ ಧೈರ್ಯವನ್ನು ಹೊಂದಿದ್ದಾರೆಯೇ? ಪ್ರತಿ ದೇಗುಲಗಳಿಗೂ ಅದರದ್ದೇ ಆಚಾರ ವಿಚಾರಗಳಿವೆ. ಅದನ್ನು ಗೌರವಿಸಿ ಪಾಲಿಸಬೇಕು’ ಎಂದು ಹೇಳಿದ್ದಾರೆ. ‘ ಇದು ಎನ್ಎಸ್ಎಸ್ ನಿಲುವು. ಮೇಲಂಗಿಯನ್ನು ಧರಿಸುವುದನ್ನು ಅಗತ್ಯವಿಲ್ಲದ ದೇವಸ್ಥಾನಗಳು ಅದನ್ನು ಹಾಗೆಯೇ ಮುಂದುವರೆಸಬೇಕು. ಎಲ್ಲವನ್ನೂ ಹಿಂದೂಗಳ ಮೇಲೆ ಹೇರಬಹುದು, ಬಲವಂತವಾಗಿ ಹೇರಬಹುದು ಎನ್ನುವ ಗ್ರಹಿಕೆ ಸ್ವೀಕಾರ್ಹವಲ್ಲ’ ಎಂದು ಕಿಡಿ ಕಾರಿದ್ದಾರೆ.
ಅಂಗಿ ತೆಗೆಯುವ ಪದ್ಧತಿ ರದ್ದು?: ಕೇರಳದಲ್ಲಿ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳ ಸರ್ಕಾರದ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಠದ ಮುಖ್ಯಸ್ಥ ಸಚ್ಚಿದಾನಂದ ಸ್ವಾಮಿ, ‘ಪುರುಷರು ಜನಿವಾರ ಧರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಇದು ಸಾಮಾಜಿಕ ಪಿಡುಗು. ಇನ್ನಾದರೂ ಈ ಪದ್ಧತಿ ಕೊನೆಗೊಳಿಸಬೇಕಿದೆ’ ಎಂದು ಆಗ್ರಹಿಸಿದ್ದರು. ಜತೆಗೆ, ಶ್ರೀ ನಾರಾಯಣ ಗುರುಗಳಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಇದನ್ನು ನಿಷೇಧಿಸಲಾಗುವುದು ಎಂದೂ ಹೇಳಿದ್ದರು. ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ರೀಗಳ ಹೇಳಿಕೆ ಬೆಂಬಲಿಸಿದ್ದರು.
ದೇಗುಲದಲ್ಲಿ ಶರ್ಟ್ ತೆಗೆವ ಪದ್ಧತಿ ಸಾಮಾಜಿಕ ಅನಿಷ್ಠ: ಶಿವಗಿರಿ ಶ್ರೀ
ಅದರ ಬೆನ್ನಲ್ಲೇ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ‘ಇಂದು ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿಯಾಗಿ ಮೇಲಂಗಿ ತೆಗೆಯುವ ಪದ್ಧತಿ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿಸಿದರು. ನನಗೂ ಇದು ಉತ್ತಮ ಸಲಹೆಯಂತೆ ಕಂಡಿತು’ ಎಂದರು. ಆದರೆ ರಾಜ್ಯದಲ್ಲಿರುವ 5 ದೇವಸ್ವಂ ಮಂಡಳಿಗಳಾದ ಗುರುವಾಯೂರು, ತಿರುವಾಂಕೂರು, ಮಲಬಾರ್, ಕೊಚ್ಚಿನ್ ಮತ್ತು ಕೂಡಲಮಾಣಿಕ್ಯಂ ಪೈಕಿ ಯಾವ ಮಂಡಳಿಯವರು ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ವಿಜಯನ್ ಸ್ಪಷ್ಟಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ