
ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಕೊಲೆ ಮಾಡಿದ್ದು, ಬೇರೆ ಯಾರೋ ಹೊರಗಿನವರಲ್ಲ ಬದಲಾಗಿ ಮಹಿಳೆಯ ಸ್ವಂತ ಮಗನೇ ಎಂಬ ವಿಚಾರ ತಿಳಿದು ಇಡೀ ಗ್ರಾಮವೇ ಆಘಾತಕ್ಕೀಡಾಗಿದೆ. ಹಾಗಿದ್ರೆ ಮಗನೇ ಸ್ವಂತ ತಾಯಿಯನ್ನು ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿದ್ದೇಕೆ? ಅಮ್ಮ ಮಗನ ಮಧ್ಯೆ ಅಂತ ದ್ವೇಷ ಏನಿತ್ತು ಡಿಟೇಲ್ ಸ್ಟೋರಿ ಇಲ್ಲಿದೆ.
ತಾಯಿಗೆ ಮೂಹೂರ್ತವಿಟ್ಟ ಪಾಪಿ ಮಗ
ಡಿಸೆಂಬರ್ 24 ರ ರಾತ್ರಿ ಶ್ಯಾಮ್ಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆಯಿತು. ಆದರೆ ಈ ಸಾವು ಕೊಲೆಯೋ ಅಸಹಜ ಸಾವೋ ಎಂಬ ಅನುಮಾನ ಬಂದಿದ್ದರಿಂದ ಪೊಲೀಸರು ಈ ಪ್ರಕರಣವನ್ನು ಸಿಟಿ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಿದ್ದರು. ಹೀಗೆ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಕೊಲೆ ಆರೋಪಿ ಆ ಮಹಿಳೆಯ ಮಗನೇ ಎಂಬ ವಿಚಾರ ತಿಳಿದು ಶಾಕ್ ಆಗಿತ್ತು. ತಾಂತ್ರಿಕ ಸಾಕ್ಷಿಗಳು, ಮೊಬೈಲ್ ಫೋನ್ ಲೋಕೇಷನ್ ಟ್ರ್ಯಾಕಿಂಗ್ ಮತ್ತು ಕರೆ ವಿವರ ದಾಖಲೆಗಳಿಂದ ಪೊಲೀಸರು ಈ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ
ಮಗನನ್ನು ಓದುವುದಕ್ಕೆ ಇಂಗ್ಲೆಂಡ್ಗೆ ಕಳುಹಿಸಿದ್ದ ಪೋಷಕರು
ತಾಯಿ ಬಲ್ಜಿಂದರ್ ಕೌರ್ ಅವರನ್ನೇ ಕೊಲೆ ಮಾಡಿದ ಗೋಮಿತ್ ರಥಿ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರಕ್ಕೆ ಕುಟುಂಬದಲ್ಲೇ ವಿರೋಧವಿತ್ತು. ಹೀಗಾಗಿ ಮಗನ ಈ ಪ್ರೇಮ ಸಂಬಂಧವನ್ನ ದೂರ ಮಾಡುವುದಕ್ಕಾಗಿ ಗೋಮಿತ್ ರಥಿಯನ್ನು ಅವನ ಪೋಷಕರು ವಿದೇಶಕ್ಕೆ ಕಳುಹಿಸಿದ್ದರು.
ಯಾರಿಗೂ ಹೇಳದೇ ಭಾರತಕ್ಕೆ ಬಂದ ಮಗ
ಆದರೆ ಡಿಸೆಂಬರ್ 18 ರಂದು ತನ್ನ ಕುಟುಂಬದವರಿಗೂ ಮಾಹಿತಿ ನೀಡದೇ ಬಲ್ಜಿಂದರ್ ಕೌರ್ ಮಗ ಗೋಮಿತ್ ರಥಿ ಇಂಗ್ಲೆಂಡ್ನಿಂದ ಭಾರತಕ್ಕೆ ರಹಸ್ಯವಾಗಿ ಮರಳಿದ್ದ. ಆತನ ಬರುವಿಕೆಯ ಬಗ್ಗೆ ಆತನ ಸ್ನೇಹಿತನಿಗೆ ಮಾತ್ರ ತಿಳಿದಿತ್ತು. ಆತನ ಸ್ನೇಹಿತ ಪಂಕಜ್ ಕೂಡ ಇದನ್ನು ಗ್ರಾಮಸ್ಥರು ಹಾಗೂ ಸಂಬಂಧಿಕರಿಂದ ಮರ ಮಾಚಿದ್ದರು. ಪೊಲೀಸರ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ತಾಯಿಯೊಂದಿಗಿನ ಮಗನ ದೀರ್ಘಕಾಲದ ಸಂಘರ್ಷ
ಪೊಲೀಸ್ ಅಧಿಕಾರಿ ರಾಕೇಶ್ ಕುಮಾರ್ ಅವರ ಪ್ರಕಾರ, ಗೋಮಿತ್ ರಥಿ ತನ್ನ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮಗನ ವರ್ತನೆಯ ಬಗ್ಗೆ ಆಕೆ ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು. ಈ ಮಧ್ಯೆ ಗೋಮಿತ್ ಬೇರೆ ಜಾತಿಯ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ತಿಳಿದ ನಂತರ ತಾಯಿ ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದಳು ಇದು ಇಬ್ಬರ ನಡುವಣ ಸಂಬಂಧ ಹದಗೆಡುವುದಕ್ಕೆ ಇನ್ನಷ್ಟು ಕಾರಣವಾಗಿತ್ತು.
ಇದನ್ನೂ ಓದಿ: ಹಿಜಾಬ್ ಧರಿಸಿ ರೀಲ್ಸ್ ಮಾಡ್ತಿರುವ ಮುಸ್ಲಿಂ ಇನ್ಫ್ಲುಯೆನ್ಸರ್ಗೆ ಜೀವ ಬೆದರಿಕೆ
ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಕುಟುಂಬ ಸದಸ್ಯರು, ನಂತರ ಗೋಮಿತ್ನನ್ನು ಸ್ಟಡಿ ವೀಸಾದಲ್ಲಿ ಇಂಗ್ಲೆಂಡ್ಗೆ ಕಳುಹಿಸಿದರು. ವಿದೇಶದಲ್ಲಿದ್ದ ಗೋಮಿತ್ ರಥಿ ಅಲ್ಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿದ್ದ. ಆದರೆ ತಾಯಿ ಮೇಲಿನ ದ್ವೇಷ ಮಾತ್ರ ಹೆಚ್ಚಾಗ್ತಲೇ ಇತ್ತು.
ಹೀಗಾಗಿ ಡಿಸೆಂಬರ್ 24 ರಂದು ಯಾರಿಗೂ ಹೇಳದೇ ಭಾರತಕ್ಕೆ ಬಂದ ಗೋಮಿತ್ ತನ್ನ ಗ್ರಾಮಕ್ಕೆ ಹಿಂತಿರುಗಿ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತು ತಾಯಿ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದಾನೆ. ಈ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲು ಶವವನ್ನು ನೀರಿನ ಟ್ಯಾಂಕಿಗೆ ಎಸೆದಿದ್ದಾನೆ. ಇತ್ತ ಗೋಮಿತ್ನ ಸ್ನೇಹಿತ ಪಂಕಜ್, ಗೋಮಿತ್ ಭಾರತಕ್ಕೆ ಮರಳಿರುವುದನ್ನು ಮರೆಮಾಚಿದ್ದಲ್ಲದೆ, ಕೊಲೆಯ ಮೊದಲು ಮತ್ತು ನಂತರ ಅವನಿಗೆ ಸಹಾಯ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಇದನ್ನೂ ಓದಿ: ಹೂವಿನ ಮಾಲೆ ವಧುವರರಿಗೆ ಕೊಡುವ ಬದಲು ತಾವೇ ಹಾಕಿದ ಬಾಲಕರು: ವೀಡಿಯೋ ಭಾರಿ ವೈರಲ್
ಈ ಕೊಲೆ ಪ್ರಕರಣ ಭೇದಿಸಲು ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದ ಮೇರೆಗೆ ರಚಿಸಲಾದ ವಿಶೇಷ ತನಿಖಾ ತಂಡ (SIT),ಮೊಬೈಲ್ ಡೇಟಾ, ಲೋಕೇಶನ್ ಮುಂತಾದ ತಾಂತ್ರಿಕ ಸಾಕ್ಷ್ಯಗಳ ಸಹಾಯದಿಂದ ಈ ಕೊಲೆ ಪ್ರಕರಣವನ್ನು ಬೇಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ