
ಪಿಟಿಐ ರಾಮೇಶ್ವರಂ (ಏ.7): ‘ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ನೀಟ್ ಪರೀಕ್ಷೆಯನ್ನು ಬಲವಂತವಾಗಿ ಹೇರುತ್ತಿದೆ’ ಎಂದು ಕೂಗೆಬ್ಬಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಡಿಎಂಕೆ ಜನಪ್ರತಿನಿಧಿಗಳು ಕನಿಷ್ಠ ಪಕ್ಷ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ’ ಎಂದು ತಿವಿದಿದ್ದಾರೆ. ಅಲ್ಲದೆ, ‘ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಿ’ ಎಂದು ಸ್ಟಾಲಿನ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ರಾಮನವಮಿಯ ಸಂದರ್ಭದಲ್ಲಿ ತಮಿಳುನಾಡಿನ ಒಟ್ಟು 8,300 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಪಾಂಬನ್ ಸೇತುವೆಯನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಮೋದಿ,
ಭಾನುವಾರ ತಮಿಳು ಭಾಷೆ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ‘ತಮಿಳು ಭಾಷೆ, ಪರಂಪರೆಯನ್ನು ಜಗತ್ತಿನ ಮೂಲೆ ಮೂಲೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ರಾಮನವಮಿಯಂದು ಅಯೋಧ್ಯೆ ಅಲ್ಲ, ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ! ಅದಕ್ಕೂ ರಾಮನಿಗೂ ಇರುವ ಸಂಬಂಧವೇನು?
ಇದೇ ವೇಳೆ ಡಿಎಂಕೆ ಜನಪ್ರತಿನಿಧಿಗಳನ್ನು ಅವರ ಹೆಸರೆತ್ತದೇ ತರಾಟೆಗೆ ತೆಗೆದುಕೊಂಡ ಮೋದಿ, ‘ನನಗೆ ತಮಿಳುನಾಡಿನ ನಾಯಕರ ಪತ್ರಗಳು ಬರುತ್ತವೆ. ಆದರೆ ಅವುಗಳಲ್ಲಿನ ಸಹಿ ತಮಿಳಿನಲ್ಲಿ ಇರುವುದಿಲ್ಲ. ಕನಿಷ್ಠ ಪಕ್ಷ ನಿಮ್ಮ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ’ ಎಂದು ಕಿಚಾಯಿಸಿದರು.
ಇದಲ್ಲದೆ, ‘ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಬೋಧನೆ ಮಾಡಬೇಕು’ಎಂದು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದರು.
ಇಂಗ್ಲಿಷಲ್ಲೂ ಮೋದಿ ಭಾಷಣ!:
ಸಾಮಾನ್ಯವಾಗಿ ಹಿಂದಿಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದಿ ಹೇರಿಕೆ ವಿವಾದದ ನಡುವೆ ರಾಮೇಶ್ವರದಲ್ಲಿ ಭಾನುವಾರ ಹಿಂದಿ ಜತೆಗೆ ಇಂಗ್ಲಿಷ್ನಲ್ಲೂ ಭಾಷಣ ಮಾಡಿ ಗಮನ ಸೆಳೆದರು. ಅವರ ಭಾಷಣವನ್ನು ತಮಿಳಿಗೆ ತರ್ಜುಮೆಯನ್ನೂ ಮಾಡಲಾಯಿತು.
ಇದನ್ನೂ ಓದಿ: ವಕ್ಫ್ ಮಸೂದೆಗೂ ಹಿಂದೂತ್ವಕ್ಕೂ ಏನು ಸಂಬಂಧ? ಮೋದಿ ಸರ್ಕಾರದ ವಿರುದ್ಧ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಕಿಡಿ!
ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರ. ‘ಕೇಂದ್ರ ಸರ್ಕಾರ ಶಿಕ್ಷಣ ಹಾಗೂ ಆಡಳಿತದಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ’ ಎಂದು ರಾಜ್ಯದಲ್ಲಿ ದೊಡ್ಡ ಆಂದೋಲನವನ್ನೇ ನಡೆಸುತ್ತಿದೆ.
ಡಿಎಂಕೆ ಹಿಂದಿ ಹೇರಿಕೆ ಕೂಗಿಗೆ ಪ್ರಧಾನಿ ಚಾಟಿ ತಮಿಳಲ್ಲೇ ವೈದ್ಯ ಶಿಕ್ಷಣ ನೀಡುವಂತೆ ಸವಾಲು
ಹೆಚ್ಚು ಹಣ ಕೊಟ್ರೂ ಅನುದಾನಕ್ಕೆ ಅಳು: ಸ್ಟಾಲಿನ್ಗೆ ಚಾಟಿರಾಮೇಶ್ವರಂ: ತಮಿಳುನಾಡಿಗೆ ಕೇಂದ್ರೀಯ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಕೂಗೆಬ್ಬಿಸಿರುವ ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ ಹೆಚ್ಚಿನ ಹಂಚಿಕೆಯ ಹೊರತಾಗಿಯೂ, ಕೆಲವರು ನಿಧಿಗಾಗಿ ಅಳುತ್ತಾರೆ’ ಎಂದು ಛೇಡಿಸಿದ್ದಾರೆ. ‘ತಮಿಳುನಾಡಿನ ಮೂಲಸೌಕರ್ಯವು ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ. ಈ ಹಿಂದಿನ ಅವಧಿಗೆ (ಯುಪಿಎ ಅವಧಿಗೆ) ಹೋಲಿಸಿದರೆ 2014ರಿಂದ ತಮಿಳುನಾಡಿಗೆ ಕೇಂದ್ರದ ನಿಧಿ 3 ಪಟ್ಟು ಹೆಚ್ಚಾಗಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ