* ಯುಪಿ ಮಾಜಿ ಸಿಎಂ ಮುಲಾಯಂ ಸೊಸೆ ಬಿಜೆಪಿಗೆ
* ಸಮಾಜವಾದಿ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟ ಅಪರ್ಣಾ
ಲಕ್ನೋ(ಜ.19): ಸಮಾಜವಾದಿ ಪಕ್ಷದ ಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದವು. ಆದರೀಗ ಈ ಎಲ್ಲಾ ಅಂತೆ ಕಂತೆಗಳಿಗೆ ತೆರೆ ಬಿದ್ದಿದ್ದು, ಯಾದವ್ ಕುಟುಂಬದ ಸೊಸೆ ಅಪರ್ಣಾ ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗಷ್ಟೇ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸ್ನೇಹಿತ ಹರಿಓಂ ಯಾದವ್ ಬಿಜೆಪಿ ಸೇರಿದ ನಂತರ ಇದೀಗ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿರುವುದು ಸಮಾಜವಾದಿ ಪಕ್ಷ ಹಾಗೂ ಯಾದವ್ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಿಜೆಪಿಯ ಮೂವರು ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರಂ ಸಿಂಗ್ ಸೈನಿ ಅವರು ಪಕ್ಷವನ್ನು ತೊರೆದು ಎಸ್ಪಿ ಸೇರಿದ ನಂತರ, ಪಕ್ಷಾಂತರಕ್ಕೆ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಆದರೆ, ಈ ಚರ್ಚೆಗಳ ಬಗ್ಗೆ ಬಿಜೆಪಿ ಅಥವಾ ಅಪರ್ಣಾ ಯಾದವ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಅಪರ್ಣಾ ಯಾದವ್ ಅವರು ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ ಲಕ್ನೋದ ಕ್ಯಾಂಟ್ ಪ್ರದೇಶದಿಂದ 2017 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಅವರು ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ಅವರಿಂದ ಸೋಲನ್ನು ಎದುರಿಸಬೇಕಾಯಿತು.
ಸಮಾಜವಾದಿ ಪಕ್ಷದ ಕಿರಿಯ ಸೊಸೆ ಅಪರ್ಣಾ ಯಾದವ್ ಅವರು ಯಾವಾಗಲೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯನ್ನು ಹೊಗಳುತ್ತಾರೆ. ರಾಮ ಮಂದಿರಕ್ಕೆ 11 ಲಕ್ಷ 11 ಸಾವಿರ ದೇಣಿಗೆ ಕೂಡ ನೀಡಿದ್ದಾರೆ. ಇದರೊಂದಿಗೆ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ಕಾರಿ ಸಂಸ್ಥೆಯಾದಾಗ ಅವರೊಂದಿಗೆ ತಮ್ಮ ಫೋಟೋವನ್ನು ಸಹ ಹಂಚಿಕೊಂಡಿದ್ದರು.
ಯಾರು ಅಪರ್ಣಾ?
ಅಪರ್ಣಾ ಯಾದವ್ ಮುಲಾಯಂ ಸಿಂಗ್ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ. 2017ರ ವಿಧಾನಸಭೆ ಚುನಾವಣೆಯಲ್ಲಿ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ರೀತಾ ಬಹುಗುಣ ಜೋಶಿ ಎದುರು 33,796 ಮತಗಳಿಂದ ಸೋಲನ್ನಪ್ಪಿದ್ದರು. ಈ ಬಾರಿ ಬಿಜೆಪಿ ಸೇರ್ಪಡೆಯಾಗುತ್ತಿರುವುದರಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ದಟ್ಟವವಾಗಿವೆ. ಬಿಜೆಪಿ ಈಗಾಗಲೇ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.