
ಹೈದರಾಬಾದ್: ದೇಶದ ಹಲವೆಡೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದರೆ, ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ನಡೆಯುತ್ತಿದೆ. ಈ ವೇಳೆ ಅಚಾತುರ್ಯವೊಂದು ನಡೆದಿದ್ದು, ಮತ ಹಾಕಲು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಶಾಸಕನೋರ್ವ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಸುಮ್ಮನಿರದ ಮತದಾರ ಕೂಡ ತಿರುಗಿಸಿ ಬಾರಿಸಿದ್ದರೇ ಆದರೆ ಈ ವೇಳೆ ಶಾಸಕನ ಜೊತೆಗಿದ್ದವರೆಲ್ಲಾ ಬೆಂಬಲಿಗರೆಲ್ಲಾ ಸೇರಿಕೊಂಡು ಸಾಮಾನ್ಯ ಮತದಾರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತದಾನದ ದಿನವೇ ಶಾಸಕನ ಈ ಉದ್ಧಟನತದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇದರ ಜೊತೆಗೆ ಇಂತವರೆಲ್ಲಾ ಜನ ಪ್ರತಿನಿಧಿಗಳಾಗಿ ಗೆದ್ದು ಬಂದರೆ ಸಾಮಾನ್ಯ ಜನರ ಕತೆ ಏನು ಎಂಬ ಪ್ರಶ್ನೆ ಮೂಡಿದೆ.
ಹಾಗಾದರೆ ಆಗಿದ್ದೇನು?
ಆಂಧ್ರ ಪ್ರದೇಶದ ಗುಂಟೂರು ವಿಧಾನಸಭಾ ಕ್ಷೇತ್ರ ಪೋಲಿಂಗ್ ಬೂತೊಂದರಲ್ಲಿ ಈ ಘಟನೆ ನಡೆದಿದೆ. ಮತದಾರರು ತಮ್ಮ ಕ್ಷೇತ್ರದಲ್ಲಿ ವೋಟು ಹಾಕುವುದಕ್ಕಾಗಿ ಸಾಲಾಗಿ ನಿಂತಿದ್ದ ವೇಳೆ ಅಲ್ಲಿಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಪಕ್ಷದ ಹಾಲಿ ಶಾಸಕ ಎ ಶಿವಕುಮಾರ್ ಬಂದಿದ್ದು, ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮತದಾರನೋರ್ವನ ಕೆನ್ನೆಗೆ ಶಾಸಕ ಎ. ಶಿವಕುಮಾರ್ ಬಾರಿಸಿದ್ದಾನೆ. ಈ ವೇಳೆ ಮತದಾರನೂ ತಿರುಗಿಸಿ ಬಾರಿಸಿದ್ದಾನೆ. ಆದರೆ ಈ ವೇಳೆ ಶಾಸಕ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರೆಲ್ಲರೂ ಪಾಪದ ಮತದಾರನೋರ್ವನ ಮೇಲೆ ತೋಳಗಳಂತೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಆಂಧ್ರದಲ್ಲಿ ಮೋದಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮೈತ್ರಿಯಿಂದ ಮ್ಯಾಜಿಕ್ ನಿರೀಕ್ಷೆ
ಅಲ್ಲದೇ ಈ ವೇಳೆ ಮತದಾರನ ರಕ್ಷಣೆಗೆ ಯಾವ ಭದ್ರತಾ ಸಿಬ್ಬಂದಿಯೂ ಆಗಮಿಸಿಲ್ಲ, ಇಂದು ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳು ಸೇರಿದಂತೆ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಲೋಕ ಕದನ: ವೈಎಸ್ಆರ್ ಕೋಟೆಯಲ್ಲಿ ಸೋದರನಿಗೆ ಸೋದರಿ ಶರ್ಮಿಳಾ ಸವಾಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ