
ಅನಂತಪುರ: ಎಷ್ಟು ಬೇಯಿಸಿದರೂ ಮಟನ್ ಸರಿಯಾಗಿ ಬೆಂದಿಲ್ಲ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಟನ್ ಹಾಗೂ ನಾಟಿ ಕೋಳಿಯನ್ನು ಬೇಯಿಸುವುದು ಸುಲಭದ ಕೆಲಸವಲ್ಲ, ನಿರಂತರ ಬೇಯಿಸಿದ ನಂತರವೂ ಮಟನ್ ಹಾಗೂ ನಾಟಿಕೋಳಿಗೆ ಮೃದುತನ ಬರುವುದಿಲ್ಲ ಎಂದು ಮಾಂಸದಡುಗೆ ಮಾಡುವ ಅನೇಕರು ಆರೋಪಿಸುತ್ತಾರೆ. ಆದರೆ ಯಾರೂ ಇಂತಹ ಕ್ಷುಲ್ಲಕ ಸಾಮಾನ್ಯ ವಿಚಾರಕ್ಕೆ ಪೊಲೀಸ್ ಠಾಣೆಗೆ ಹೋಗುವುದಿಲ್ಲ, ಆದರೆ ಇಲ್ಲೊಬ್ಬರು ಎಷ್ಟೇ ಪ್ರಯತ್ನ ಮಾಡಿದರು ಮಟನ್ ಸರಿಯಾಗಿ ಬೆಂದಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 20 ಬಾರಿ ಬೇಯಿಸಿದರೂ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಎಂಬುವವರು ಯುಗಾದಿ ಆಚರಣೆಯ ಸಂದರ್ಭದಲ್ಲಿ ಮೇಕೆಯ ತಲೆಯ ಮಾಂಸವನ್ನು ಖರೀದಿಸಿದ್ದರು . ಯುಗಾದಿಗೆ ಸಾಂಪ್ರದಾಯಿಕ ತಲೆ ಮಾಂಸದ ಕರಿ (ತಲಕುರ) ತಯಾರಿಸಲು ಉತ್ಸುಕರಾಗಿ ತಲೆಮಾಂಸದೊಂದಿಗೆ ಮನೆಗೆ ಬಂದ ಅವರಿಗೆ ನಿರಾಸೆ ಕಾದಿತ್ತು. ಏಕೆಂದರೆ ಎಷ್ಟು ಬೆಂಕಿ ಹಚ್ಚಿ ಬೇಯಿಸಿದರೂ ಸುಮಾರು 20 ಸಲ ಬೇಯಿಸಿದರು ಮಟನ್ ಮಾತ್ರ ಗಟ್ಟಿಯಾಗಿ ಬೇಯದೇ ಉಳಿದಿತ್ತು. ಹೀಗಾಗಿ ನಿರಾಶೆಗೊಂಡ ಸೋದಲ ಹಾಜಿ ಎಂಬುವವರು ಮಾಂಸವಿದ್ದ ಮಣ್ಣಿನ ಪಾತ್ರೆ ಸಮೇತ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬೇಯಿಸದ ಮಾಂಸ ತುಂಬಿದ ಪಾತ್ರೆಯೊಂದಿಗೆ ಠಾಣೆಗೆ ಬಂದ ಸೋದಲ ಹಾಜಿ, ಪದೇ ಪದೇ ಪ್ರಯತ್ನಿಸಿದರೂ ಅದು ಮೃದುವಾಗುವುದಿಲ್ಲ ಅಥವಾ ಸರಿಯಾಗಿ ಬೇಯಿಸುವುದಿಲ್ಲ ಎಂದು ದೂರಿದ್ದಾರೆ. ಇತ್ತ ಈ ವಿಚಿತ್ರ ಪ್ರಕರಣವನ್ನು ನೋಡಿ ಪಟ್ಟಣ ವೃತ್ತ ನಿರೀಕ್ಷಕ ಆನಂದ ರಾವ್ ಅವರು ದಿಗ್ಭ್ರಮೆಗೊಂಡರು. ಪಟ್ಟಣ ವೃತ್ತ ನಿರೀಕ್ಷಕ ಆನಂದ ರಾವ್ ಅವರು ಈ ಬಗ್ಗೆ ಮಾತನಾಡಿ, ಪ್ರಕರಣ ವಿಚಿತ್ರವಾಗಿದ್ದರೂ, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಯಿತು ಮತ್ತು ಅಂತಿಮವಾಗಿ ಪೊಲೀಸರ ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಪರಿಹರಿಸಲಾಯಿತು ಎಂದಿದ್ದಾರೆ.
ಇದನ್ನೂ ಓದಿ: ಮುನ್ನಾರ್ನಲ್ಲಿ ಕಾರಿನ ಮೇಲೆ ಪಡಯಪ್ಪನ ದಾಳಿ: ಚಾಲಕ ಜಸ್ಟ್ ಮಿಸ್
ಸೋದಲ ಹಾಜಿ ಅವರು ಮಾಂಸದೊಂದಿಗೆ ಪೊಲೀಸ್ ಠಾಣೆಗೆ ಬಂದು ಮಟನ್ ಮಾರಾಟಗಾರನ ವಿರುದ್ಧ ದೂರು ನೀಡಿದ್ದಾರೆ. ನಂತರ ಮಾರಾಟಗಾರ ಈ ಮಾಂಸದ ಬದಲು ತಾಜಾ ಮಟನ್ ಮಾಂಸ ಕೊಡೋದಕ್ಕೆ ಒಪ್ಪಿಕೊಂಡಿದ್ದಾನೆ. ಈ ವಿಚಾರವಾಗಿ ಮಾಂಸ ಮಾರಾಟಗಾರನೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸ್ಥಳದಲ್ಲೇ ಬಗೆಹರಿಸಲಾಯ್ತು ಎಂದು ಎಸ್ಐ ಆನಂದ್ ರಾವ್ ಹೇಳಿದರು.
ಇದನ್ನೂ ಓದಿ: ಟ್ರಂಪ್ ಆಡಳಿತದಲ್ಲಿ ದಿವಾಳಿ ಆಯ್ತಾ ಅಮೆರಿಕಾ: ಸರ್ಕಾರಿ ಅಧಿಕಾರಿಗಳಿಗಿನ್ನೂ ಆಗಿಲ್ಲ ವೇತನ: ಎಲಾನ್ ಮಸ್ಕ್ ಹೇಳಿದ್ದೇನು?
ಕುರಿ ಅಥವಾ ಮೇಕೆ ಜಾಸ್ತಿ ಬೆಳೆದಿದ್ದರೆ ಮಾಂಸ ಸರಿಯಾಗಿ ಅಥವಾ ಸುಲಭವಾಗಿ ಬೇಯುವುದಿಲ್ಲ ಎಂಬುದು ಬಹುತೇಕ ಮಾಂಸಪ್ರಿಯರಿಗೆ ತಿಳಿದಿರುವ ವಿಚಾರವಾಗಿದೆ. ಆದರೆ ಈ ಬಗ್ಗೆ ದೂರು ನೀಡಿ ಬೇರೆ ಮಾಂಸ ಪಡೆಯುವಲ್ಲಿ ಯಶಸ್ವಿಯಾದ ಸೋದಲ ಹಾಜಿ ಬಗ್ಗೆ ಈ ಪ್ರದೇಶದಲ್ಲಿ ಈಗ ವ್ಯಾಪಕ ಚರ್ಚೆಯಾಗ್ತಿದೆ. ನಾಗರಿಕರ ಸಮಸ್ಯೆಗಳು ಎಷ್ಟೇ ಅಸಾಮಾನ್ಯವಾಗಿದ್ದರೂ ಸಹ, ಅವುಗಳನ್ನು ಪರಿಹರಿಸಲು ಪೊಲೀಸರು ಬದ್ಧರಾಗಿದ್ದಾರೆ ಎಂದು ಸಿಐ ಆನಂದ ರಾವ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ