
ಆಂಧ್ರಪ್ರದೇಶ: ತೀವ್ರ ಹೊಟ್ಟೆನೋವು ಮತ್ತು ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ 33 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಆಕೆಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ದಂಗಾಗಿ ಹೋಗಿದ್ದಾರೆ. ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು (Spoons) ಹಾಗೂ ಒಂದು ಮೇಣದಬತ್ತಿಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲಾ ಕೇಂದ್ರವಾದ ನರಸರಾವ್ ಪೇಟೆಯ ಖಾಸಗಿ ಆಸ್ಪತ್ರೆಯಾದ 'ಮಾತಾಶ್ರೀ ಆಸ್ಪತ್ರೆ'ಯಲ್ಲಿ ಈ ಅಪರೂಪದ ಹಾಗೂ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಪೆಟ್ಲೂರಿವಾರಿಪಾಲೆಂ ಗ್ರಾಮದ 33 ವರ್ಷದ ವಿವಾಹಿತ ಮಹಿಳೆಗೆ ಶನಿವಾರ ಇದ್ದಕ್ಕಿದ್ದಂತೆ ವಿಪರೀತ ಎದೆ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬಸ್ಥರು ಆಕೆಯನ್ನು ತಕ್ಷಣ ಮಾತಾಶ್ರೀ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮತ್ತು ವಿವಿಧ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಲೋಹ ಹಾಗೂ ಪ್ಲಾಸ್ಟಿಕ್ ವಸ್ತುಗಳು ಇರುವುದು ದೃಢಪಟ್ಟಿದೆ.
ಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಜಿಕಲ್ ಸ್ಪೆಷಲಿಸ್ಟ್ ಡಾ. ಪಿ. ರಾಮಚಂದ್ರ ರೆಡ್ಡಿ ನೇತೃತ್ವದ ವೈದ್ಯರ ತಂಡ ತಕ್ಷಣ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದೆ. "ನಾವು ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಜಠರದಿಂದ 14 ಬಾಲ್ಪಾಯಿಂಟ್ ಪೆನ್ನುಗಳು, 5 ಸಣ್ಣ ಮರದ ಚಮಚಗಳು ಮತ್ತು ಒಂದು ಮೇಣದಬತ್ತಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದೇವೆ. ಒಂದು ಪೆನ್ನಿನ ಮುಚ್ಚಳ (ಕ್ಯಾಪ್) ಇರಲಿಲ್ಲ. ಅದು ಹೊಟ್ಟೆಯ ಒಳಭಾಗವನ್ನು ಚುಚ್ಚಿ ಗಾಯಗೊಳಿಸಿದ್ದು, ಇದರಿಂದ ಆಕೆಗೆ ತೀವ್ರ ನೋವು ಕಾಣಿಸಿಕೊಂಡಿತ್ತು" ಎಂದು ಡಾ. ರೆಡ್ಡಿ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಪ್ರಸ್ತುತ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟೊಂದು ವಸ್ತುಗಳನ್ನು ಆಕೆ ಹೇಗೆ ಮತ್ತು ಯಾವಾಗ ನುಂಗಿದಳು ಎಂಬುದು ಆರಂಭದಲ್ಲಿ ನಿಗೂಢವಾಗಿತ್ತು. ಆದರೆ ಮಹಿಳೆಯ ತಂದೆ ನೋಮುಲ ಹನುಮಂತರಾವ್ ನೀಡಿದ ಮಾಹಿತಿ ಪ್ರಕಾರ, ಆಕೆ ಕಳೆದ 10 ವರ್ಷಗಳಿಂದ ತೀವ್ರ ಮಾನಸಿಕ ಖಿನ್ನತೆ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಕೇವಲ ಎರಡು ತಿಂಗಳ ಹಿಂದಷ್ಟೇ ಆಕೆಯ ಪತಿ ವಿಚ್ಛೇದನ (ಡೈವೋರ್ಸ್) ನೀಡಿದ್ದರಿಂದ ಆಕೆ ಇನ್ನಷ್ಟು ತೀವ್ರ ಖಿನ್ನತೆಗೆ ಜಾರಿದ್ದು, ಈ ಹುಚ್ಚು ಸಾಹಸಕ್ಕೆ ಕೈಹಾಕಿರಬಹುದು ಎಂದು ಶಂಕಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ