
ಅಲಹಾಬಾದ್: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ V/s ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶಾಹಿ ಈದ್ಗಾ ಮಸೀದಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಹಿಂದೂಗಳಿಗೆ ದೊಡ್ಡ ಗೆಲವು ಸಿಕ್ಕಿದೆ. ನ್ಯಾಯಾಧೀಶ ಮಯಾಂಕ್ ಕುಮಾರ್ ಜೈನ್ ನೇತೃತ್ವದ ಪೀಠ ಎಲ್ಲಾ 18 ಮೊಕದಮ್ಮೆಗಳನ್ನು ಅಂಗೀಕರಿಸಿದ್ದು, ಆದೇಶ 7 ನಿಯಮ 11ರ ಅಡಿಯಲ್ಲಿ ಈದ್ಗಾ ಮಸೀದಿ ಪರವಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಇದೇ ವೇಳೆ ಹಿಂದೂ ಕಡೆಯವರ ಎಲ್ಲಾ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಪ್ ಬೋರ್ಡ್ ಮತ್ತು ಶಾಹಿ ಈದ್ಗಾ ಸಮಿತಿ, ಪೂಜಾ ಸ್ಥಳದ ಮಿತಿ ಕಾಯಿದೆ, ವಕ್ಫ್ ಕಾಯಿದೆ ಹಾಗೂ ನಿರ್ದಿಷ್ಟ ಪರಿಹಾರ ಕಾಯಿದೆಯಡಿಯಲ್ಲಿ ಹಿಂದೂಗಳು ಸಲ್ಲಿಕೆ ಮಾಡಿರುವ ಎಲ್ಲಾ 18 ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಕೆ ಮಾಡಿತ್ತು.
ಆಗಸ್ಟ್ 12ರಂದು ಮುಂದಿನ ವಿಚಾರಣೆ
ಇದೀಗ ಹಿಂದೂಗಳ ಪರವಾಗಿ ಆದೇಶ ಬಂದಿದ್ದು, ಮುಂದೆ ಎಲ್ಲಾ 18 ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 12ರಂದು ನಡೆಯಲಿದೆ. ಅಲಹಾಬಾದ್ ಹೈಕೋರ್ಟ್ ಹಿಂದೂಗಳ ಪರವಾಗಿ ಸಲ್ಲಿಕೆಯಾಗಿರುವ 18 ಅರ್ಜಿಗಳ ಪೈಕಿ 15 ಮನವಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುತ್ತಿದೆ. ಇನ್ನುಳಿದ ಮೂರು ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಈ ಅರ್ಜಿಗಳ ವಿಚಾರಣೆಯ ರದ್ದುಕೋರಿ ಸುನ್ನಿ ಸೆಂಟ್ರಲ್ ವಕ್ಪ್ ಬೋರ್ಡ್ ಮತ್ತು ಶಾಹಿ ಈದ್ಗಾ ಸಮಿತಿ ಅರ್ಜಿ ಸಲ್ಲಿಕೆ ಮಾಡಿದ್ದವು.
1968ರಲ್ಲಿ ನಡೆದಿತ್ತು ಒಪ್ಪಂದ
1968ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಮಸೀದಿ ಈದ್ಗಾ ಟ್ರಸ್ಟ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ 10.9 ಎಕರೆ ಭೂಮಿಯನ್ನು ಕೃಷ್ಣ ಜನ್ಮಭೂಮಿಗೂ ಮತ್ತು ಇನ್ನುಳಿದ 2.5 ಎಕರೆ ಭೂಮಿಯನ್ನು ಶಾಹಿ ಮಸೀದಿ ಸಮಿತಿಗೆ ನೀಡಲಾಗಿತ್ತು. 1991 ರ ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲೇಖಿಸಿ ಹಿಂದೂ ಕಡೆಯವರು ನೀಡಿದ ಅರ್ಜಿಗಳನ್ನು ವಜಾಗೊಳಿಸುವಂತೆ ಮುಸ್ಲಿಂ ಕಡೆಯವರು ಈ ಹಿಂದೆ ಒತ್ತಾಯಿಸಿದ್ದರು.
ಶ್ರೀಕೃಷ್ಣ ಕೇಳಿದ್ದು 5 ಗ್ರಾಮ, ಈಗ 3 ಶ್ರದ್ಧಾ ಕೇಂದ್ರ, ಕಾಶಿ ಮಥುರಾ ಕುರಿತು ಸಿಎಂ ಯೋಗಿ ಮಹತ್ವದ ಹೇಳಿಕೆ!
ಏನಿದು ವಿವಾದ?:
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಶ್ರೀಕೃಷ್ಣ ದೇವಾಲಯದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕಟ್ರಾ ಕೇಶವದೇವ ದೇವಸ್ಥಾನದ 13.37 ಎಕರೆ ಆವರಣದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿಯನ್ನು ಒಡೆದು ಕೃಷ್ಣಜನ್ಮಭೂಮಿ ವ್ಯಾಪ್ತಿಗೆ ಸೇರಿಸಬೇಕು. ಈ ಭೂಮಿ ಶ್ರೀ ಕೃಷ್ಣಜನ್ಮಭೂಮಿಯ ಭಾಗವಾಗಿದೆ ಮತ್ತು ಹಿಂದೂಗಳ ಆರಾಧನೆಯ ಸ್ಥಳವಾಗಿದೆ ಎಂಬುದು ಕೆಲವು ಹಿಂದೂ ಪಕ್ಷಗಾರರ ವಾದ.
ಅಲ್ಲದೆ, ತಮ್ಮ ವಾದಕ್ಕೆ ಬಲ ನೀಡಲು, ‘ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಾಲಯದ ಹಲವು ಚಿಹ್ನೆಗಳು ಇವೆ. ಶೇಷನಾಗನ ಚಿತ್ರ ಹಾಗೂ ಕಮಲದ ಚಿತ್ರಗಳಿವೆ. ಇದರ ಸತ್ಯಾಸತ್ಯತೆ ತಿಳಿಯಲು, ಸಮೀಕ್ಷೆ ಅಗತ್ಯವಿದೆ’ ಎಂದು ದಾವೆದಾರ ವಿಷ್ಣುಶಂಕರ ಜೈನ್ ಪ್ರತಿಪಾದಿಸಿದ್ದರು.
ಮಥುರಾದಲ್ಲಿ 668 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ 70 ಅಂತಸ್ತಿನ ಗಗನಚುಂಬಿ ಶ್ರೀಕೃಷ್ಣ ದೇಗುಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ