ದೆಹಲಿ ಪಾಲಿಕೆಯಲ್ಲಿ ರಾತ್ರಿಯಿಡೀ ಹೊಡೆದಾಟ: -ಚಪ್ಪಲಿ, ಬಾಟಲಿ, ಅರೆಬರೆ ತಿಂದ ಸೇಬು ಎಸೆದು ಕಿತ್ತಾಟ

Published : Feb 24, 2023, 05:21 AM IST
ದೆಹಲಿ ಪಾಲಿಕೆಯಲ್ಲಿ ರಾತ್ರಿಯಿಡೀ ಹೊಡೆದಾಟ: -ಚಪ್ಪಲಿ, ಬಾಟಲಿ, ಅರೆಬರೆ ತಿಂದ ಸೇಬು ಎಸೆದು ಕಿತ್ತಾಟ

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯ ಶ್ರೇಯೋಭಿವೃದ್ಧಿ ಕುರಿತು ಚರ್ಚೆ ನಡೆಸಬೇಕಾದ ಮಹಾನಗರ ಪಾಲಿಕೆಯ ಸದಸ್ಯರು ರಾತ್ರಿ ಇಡೀ ಪರಸ್ಪರ ಹೊಡೆದಾಡಿಕೊಂಡ ನಾಚಿಕೆಗೇಡಿನ ಘಟನೆ ನಡೆದಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಶ್ರೇಯೋಭಿವೃದ್ಧಿ ಕುರಿತು ಚರ್ಚೆ ನಡೆಸಬೇಕಾದ ಮಹಾನಗರ ಪಾಲಿಕೆಯ ಸದಸ್ಯರು ರಾತ್ರಿ ಇಡೀ ಪರಸ್ಪರ ಹೊಡೆದಾಡಿಕೊಂಡ ನಾಚಿಕೆಗೇಡಿನ ಘಟನೆ ನಡೆದಿದೆ. ಚಪ್ಪಲಿ, ಬಾಟಲಿ, ಅರೆಬರೆ ತಿಂದುಳಿಸಿದ ಸೇಬು, ಕಾಗದ, ಮೈಕ್‌ಗಳನ್ನು ಪರಸ್ಪರ ತೂರಾಡಿದ್ದಾರೆ. ಪುರುಷ- ಮಹಿಳೆ ಎಂಬ ಭೇದವಿಲ್ಲದೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಮತಪತ್ರಗಳನ್ನು ಹರಿದು, ಮತ ಪೆಟ್ಟಿಗೆಗಳನ್ನು ಎಸೆದಿದ್ದಾರೆ. ಮೇಯರ್‌ ಅವರಿಗೆ ಮೀಸಲಾಗಿರುವ ಪೋಡಿಯಂ ಅನ್ನೇ ಕಿತ್ತೆಸೆದಿದ್ದಾರೆ.

ಬಹುಶಃ ದೇಶದ ಪಾಲಿಕೆಯೊಂದು ಇಡೀ ರಾತ್ರಿ ಸಭೆ ನಡೆಸಿದ್ದು ಹಾಗೂ ಈ ಪಾಟಿ ಗಲಾಟೆ ನಡೆದಿದ್ದು ಇದೇ ಮೊದಲು ಎನ್ನಲಾಗಿದೆ. ಅಕ್ಷರಶಃ ಬೀದಿ ಗೂಂಡಾಗಳಂತೆ ಕಿತ್ತಾಡಿರುವ ಆಮ್‌ ಆದ್ಮಿ ಪಕ್ಷ (Aam Aadmi Party) ಹಾಗೂ ಬಿಜೆಪಿ ಸದಸ್ಯರ (BJP members) ವರ್ತನೆಗೆ ಸರ್ವತ್ರ ಆಕ್ರೋಶ ವ್ಯಕ್ತವಾಗಿದೆ.

ತತ್ವಶಾಸ್ತ್ರದ ಉಪನ್ಯಾಸಕಿ ದೆಹಲಿ ಮೇಯರ್‌, ಯಾರಿವರು ಶೆಲ್ಲಿ ಒಬೆರಾಯ್‌?

ಬುಧವಾರ ಆಪ್‌ನ ಶೆಲ್ಲಿ ಒಬೆರಾಯ್‌ ( Shelly Oberoi)ಅವರು ಮೇಯರ್‌ ಆಗಿ ಆಯ್ಕೆಯಾದರು. ತದ ನಂತರ ಆಪ್‌ನ ಆಲೆ ಮೊಹಮ್ಮದ್‌ ಇಕ್ಬಾಲ್‌ (Ale Mohammad Iqbal) ಅವರು ಉಪ ಮೇಯರ್‌ ಆಗಿ ಚುನಾಯಿತರಾದರು. ಬಳಿಕ ನಡೆದ ಸ್ಥಾಯಿ ಸಮಿತಿಗಳ ಚುನಾವಣೆ ವೇಳೆ ರಾದ್ಧಾಂತವೇ ನಡೆಯಿತು. ರಾತ್ರಿ ಇಡೀ ಗಲಾಟೆ ನಡೆಯಿತು. ಪದೇ ಪದೇ ಕಲಾಪ ಮುಂದೂಡಿಕೆಯಾಯಿತು. 14 ತಾಸುಗಳಲ್ಲಿ 14 ಮುಂದೂಡಿಕೆಯನ್ನು ಪಾಲಿಕೆ ಕಂಡಿತು. ಗಲಾಟೆಯಾಗಿ ಸದಸ್ಯರು ರಾತ್ರಿಯಿಡೀ ಮಹಾನಗರ ಪಾಲಿಕೆಯಲ್ಲೇ ತಂಗಿದ್ದರು. ಬೆಳಗ್ಗೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಮುಂದೂಡಿಕೆ ಮಾಡಲಾಯಿತು.

ಆಗಿದ್ದೇನು?:

ನಾಗರಿಕ ಸ್ಥಾಯಿ ಸಮಿತಿಯ (Civic Standing Committee) ಆರು ಹುದ್ದೆಗಳಿಗೆ ಮೇಯರ್‌ ಚುನಾವಣೆ ಘೋಷಿಸಿದರು. ಏಳು ಮಂದಿ ಆಕಾಂಕ್ಷಿತರು ಇದ್ದರು. ಈ ಚುನಾವಣೆ ವೇಳೆ ಮೊಬೈಲ್‌ ಫೋನ್‌ ಇಟ್ಟುಕೊಳ್ಳಲು ಸದಸ್ಯರಿಗೆ ಮೇಯರ್‌ ಅವಕಾಶ ಕೊಟ್ಟರು. ಇದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಯಿತು. ಮೇಯರ್‌- ಉಪಮೇಯರ್‌ ಚುನಾವಣೆಯಲ್ಲಿ (Mayor-deputy mayor election) ಮೊಬೈಲ್‌ಗೆ ಅವಕಾಶ ಇರಲಿಲ್ಲ. ಆದರೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೇಕೆ? ಎಂದು ಪ್ರಶ್ನೆ ಮಾಡಿತು. ಅಲ್ಲಿಂದ ಗದ್ದಲ ಆರಂಭವಾಯಿತು. ಬಿಜೆಪಿ ಸದಸ್ಯರು ಬಾವಿಗೆ ಇಳಿದರು. ಆಗ ಹೊಡೆದಾಟ ನಡೆಯಿತು. ಸದಸ್ಯರು ಬೀದಿ ಪುಂಡರು ಕಲ್ಲು ತೂರುವಂತೆ ಗಾಜಿನ ಬಾಟಲಿ, ಚಪ್ಪಲಿ, ಅರ್ಧ ತಿಂದ ಸೇಬು, ಮೈಕ್‌ಗಳನ್ನು ಕಿತ್ತೆಸೆದರು.

ಆಪ್ ಬಿಜೆಪಿ ನಡುವೆ ಮಾರಾಮಾರಿ, ದೆಹಲಿ ಮೇಯರ್ ಚುನಾವಣೆ ರದ್ದಾಯ್ತು ಮೊದಲ ಬಾರಿ!

ಮೇಯರ್‌ ಚುನಾವಣೆ ಬಿಜೆಪಿಯ ಮೇಯರ್‌ ಅಭ್ಯರ್ಥಿ ರೇಖಾ ಗುಪ್ತಾ (Rekha Gupta) ಅವರು ಮೇಯರ್‌ ಅವರ ಪೋಡಿಯಂನೇ ಕಿತ್ತೆಸೆದರು. ಮಹಿಳಾ ಸದಸ್ಯರು ಪರಸ್ಪರ ಹೊಡೆದಾಡಿಕೊಂಡರು. ಪುರುಷ ಸದಸ್ಯರು ಪರಸ್ಪರ ತಳ್ಳಾಡಿದರು. ರಾತ್ರಿ ಇಡೀ ಹೊಡೆದಾಡುತ್ತಾ ಪಾಲಿಕೆಯಲ್ಲೇ ಸಮಯ ಕಳೆದು, ಅಲ್ಲೇ ಮಲಗಿದರು.

ಈ ನಡುವೆ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಮೇಯರ್‌ ಶೆಲ್ಲಿ, ಬಿಜೆಪಿ ಸದಸ್ಯರು ಬ್ಯಾಲೆಟ್‌ ಪೇಪರ್‌ಗಳನ್ನು ಹರಿದು, ಬ್ಯಾಲೆಟ್‌ ಬಾಕ್ಸ್‌ ಎಸೆದಿದ್ದಲ್ಲದೆ ತಮ್ಮ ಮೇಲೂ ದಾಳಿ ನಡೆಸಿದರು ಎಂದು ಆರೋಪಿಸಿದರು. ಮೇಯರ್‌ ಚುನಾವಣೆಯಲ್ಲಿನ ಸೋಲನ್ನು ಅರಗಿಸಿಕೊಳ್ಳದೆ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆಪ್‌ ನಾಯಕ ಸಂಜಯ ಸಿಂಗ್‌ ದೂರಿದ್ದಾರೆ. ಆದರೆ ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಇದಕ್ಕೆಲ್ಲಾ ಅರವಿಂದ್‌ ಕೇಜ್ರಿವಾಲ್‌ ಹೊಣೆ ಎಂದು ಟೀಕಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು