ಬಾಗಿಲು ಕಿಟಕಿ ಬಿಡದೇ ಕಚೇರಿಯ ಪೀಠೋಪಕರಣಗಳನ್ನೆಲ್ಲಾ ಗುಜರಿಗೆ ಮಾರಿದ ಕುಡುಕ ಪ್ಯೂನ್

By Anusha KbFirst Published Sep 27, 2022, 11:51 AM IST
Highlights

 ಕುಡಿತದ ಚಟಕ್ಕೆ ಬಿದ್ದ ಸರ್ಕಾರಿ ಕಚೇರಿಯ ಪ್ಯೂನ್(ಜವಾನ) ಒಬ್ಬ ಕಚೇರಿಯ ಚರಾಸ್ತಿಯನ್ನೆಲ್ಲಾ ಮಾರಿದ್ದಾನೆ.  ಒಡಿಶಾದ ಗಂಜಮ್‌ನಲ್ಲಿ ಈ ಘಟನೆ ನಡೆದಿದೆ

ಕುಡಿತಕ್ಕೆ ಸಂಪೂರ್ಣ ದಾಸರಾದವರು ಕುಡಿಯುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅನೇಕರ ಕುಡಿತದ ಚಟದಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಮಕ್ಕಳು ಸಂಸಾರ ಇಡೀ ಕುಟುಂಬವೇ ತಿನ್ನಲು ಅನ್ನವಿಲ್ಲದೇ ಕಡು ಬಡತನದಲ್ಲಿ ದಿನ ದೂಡುವ ಸ್ಥಿತಿ ಬಂದಿದೆ. ಕುಡಿತದ ಚಟದ ಘೋರ ಪರಿಣಾಮವಿದು. ಹೀಗೆ ಕುಡಿತದ ಚಟಕ್ಕೆ ಬಿದ್ದ ಸರ್ಕಾರಿ ಕಚೇರಿಯ ಪ್ಯೂನ್(ಜವಾನ) ಒಬ್ಬ ಕಚೇರಿಯ ಚರಾಸ್ತಿಯನ್ನೆಲ್ಲಾ ಮಾರಾಟಕ್ಕಿಟ್ಟು ಕುಡಿತಕ್ಕೆ ಕಾಸು ಮಾಡಿಕೊಂಡಿದ್ದಾನೆ. 

ಒಡಿಶಾದ ಗಂಜಮ್ ಜಿಲ್ಲೆಯಲ್ಲಿ (Ganjam district) ಈ ಆಘಾತಕಾರಿ ಘಟನೆ ನಡೆದಿದೆ. ಎಂ ಪಿತಾಂಬರ್ (M Pitambar) ಎಂಬಾತನೇ ಹೀಗೆ ಸರ್ಕಾರಿ ಕಚೇರಿಯ ಕುರ್ಚಿ, ಪಿಠೋಪಕರಣ ಫೈಲುಗಳು ಮುಂತಾದವನ್ನು ಮಾರಾಟ ಮಾಡಿದ ಕುಡುಕ. ಈತ ಗಂಜಮ್ ಜಿಲ್ಲಾ ಶಿಕ್ಷಣ ಇಲಾಖೆ ಕಚೇರಿಯಲ್ಲಿ (district education office) ಪ್ಯೂನ್(ಕಚೇರಿ ಜವಾನ) ಆಗಿ ಕೆಲಸ ಮಾಡುತ್ತಿದ್ದ. ತೀವ್ರವಾದ ಕುಡಿತದ ಗೀಳಿಗೆ ಬಿದ್ದ ಈತನಿಗೆ ಈತನ ಸಂಪಾದನೆ ಕುಡಿತಕ್ಕೆ ಸಾಲುತ್ತಿರಲಿಲ್ಲ. ಹೀಗಾಗಿ ಆತ ತಾನು ಕೆಲಸ ಮಾಡುತ್ತಿದ್ದ ಕಚೇರಿಯ ಪಿಠೋಪಕರಣ ಸೇರಿದಂತೆ ಕೆಲ ಫೈಲುಗಳನ್ನು ಕೂಡ ಮಾರಾಟ ಮಾಡಿ ಸಿಕ್ಕ ಹಣದಲ್ಲಿ ಕುಡಿದು ಮೋಜು ಮಾಡಿದ್ದಾನೆ. ಅಂದಹಾಗೆ ಈತ ಕಚೇರಿಯ ವಸ್ತುಗಳನ್ನೆಲ್ಲಾ ಗುಜುರಿಗೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. 

ಎಣ್ಣೆ ವಿಷ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಕುಡುಕರ ಅಡ್ಡಿಪಡಿಸಲು ನಿರಾಕರಿಸಿದ ಕೋರ್ಟ್!

ಕಳೆದ ಎರಡು ವರ್ಷಗಳಿಂದ ಈತ ಹೀಗೆ ಒಂದೊಂದಾಗಿ ಕಚೇರಿಯ ವಸ್ತುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾನೆ. ಕಚೇರಿ ಬೇರೆಡೆ ಶಿಫ್ಟ್ ಆಗಿದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಈ ಹಳೆ ಕಚೇರಿಯನ್ನು ನೋಡಿಕೊಳ್ಳಲು ಅಧಿಕಾರಿಗಳು ಈ ಕುಡುಕ ಪಿತಾಂಬರನನ್ನು ಕಾವಲಿಗಿಟ್ಟಿದ್ದರು. ಆದರ ಈತ ಕಚೇರಿಯನ್ನು ಕಾಯುವ ಬದಲು ಅಲ್ಲಿದ್ದ ವಸ್ತುಗಳನ್ನೆಲ್ಲಾ ಒಂದೊಂದಾಗಿ ತಾನೇ ಗುಜುರಿಗೆ (scrap dealers) ಮಾರಿದ್ದಾನೆ. 

ಇನ್ನು ವಿಪರ್ಯಾಸ ಎಂದರೆ ಶಿಕ್ಷಣ ಇಲಾಖೆಯ ಈ ಹಳೆ ಕಚೇರಿಯೂ ಬೆಹ್ರಾಂಪುರ (Berhampur city) ನಗರದ ಪೊಲೀಸ್ ಠಾಣೆ (Police station) ಪಕ್ಕದಲ್ಲಿಯೇ ಇತ್ತು. ಅನೇಕ ಅತ್ಯಮೂಲ್ಯವಾದ ದಾಖಲೆಗಳು ಹಾಗೂ ಪಿಠೋಪಕರಣಗಳು ಇಲ್ಲಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಪಿತಾಂಬರ್‌  ಕಚೇರಿಯ ಒಂದೊಂದೇ ವಸ್ತುಗಳನ್ನು ಮಾರಿ, 'ನುಂಗಿ ಬೀರು ಕುಡಿದಿದ್ದಾನೆ'. 

4 ಬಾರಿ ಹಾವು ಕಚ್ಚಿದ್ರೂ "ಐಯಾಮ್‌ ಸ್ಟೆಡಿ" ಎಂದು ಗಟ್ಟಿ ನಿಂತ ವ್ಯಕ್ತಿ; ಕುಡುಕರ ಶಕ್ತಿ ಅಂದ್ರೆ ಏನಂದುಕೊಂಡ್ರಿ!

ಇತ್ತೀಚೆಗೆ ಶಿಕ್ಷಣ ಇಲಾಖೆಯ ಅಧಿಕಾರಿ ಜಯಂತ್ ಕುಮಾರ್ ಸಾಹು (Jayant Kumar Sahu) ಎಂಬುವವರು ಮಹತ್ವದ ರೆಕಾರ್ಡೊಂದನ್ನು ಪಡೆಯುವ ಸಲುವಾಗಿ ಕಚೇರಿಗೆ ಭೇಟಿ ನೀಡಿದಾಗ ಈ ಪ್ರಕರಣ ಬಯಲಿಗೆ ಬಂದಿದೆ. ಕೇವಲ ಫೈಲುಗಳು ಪಿಠೋಪಕರಣಗಳು ಮಾತ್ರವಲ್ಲದೇ ಕಚೇರಿಯ ಕೆಲ ಕಿಟಕಿ ಬಾಗಿಲುಗಳು ಕೂಡ ಮಾಯವಾಗಿರುವುದು ಅಧಿಕಾರಿ ಗಮನಕ್ಕೆ ಬಂದಿದೆ. ಬಳಿಕ ಅಧಿಕಾರಿ ಜಯಂತ್ ಕುಮಾರ್ ಸಮೀಪದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು

ಹೀಗಾಗಿ ಈ ಕಟ್ಟಡದ ಕಾವಲಿಗಿದ್ದ ಪ್ಯೂನ್ ಪಿತಾಂಬರ್‌ನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ, ಆತ ಕುಡಿತಕ್ಕೆ ಹಣ ಮಾಡುವ ಸಲುವಾಗಿ, ಕಚೇರಿಯಲ್ಲಿದ್ದ ವಸ್ತುಗಳನ್ನೆಲ್ಲಾ ಕಳೆದ ಎರಡು ವರ್ಷಗಳಲ್ಲಿ ಒಂದೊಂದಾಗಿ ಗುಜುರಿಯವನಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆತ ಮಾರಿದ ಪೀಠೋಪಕರಣಗಳಲ್ಲಿ(furniture) 35 ಅಲ್ಮೇರಾಗಳು (almirahs) (ಬಾಗಿಲುಗಳಿರುವ ಸಣ್ಣ ಕಪಾಟುಗಳು) 10 ಸೆಟ್ ಚೇರ್‌ಗಳು ಟೇಬಲ್‌ಗಳು ಹಾಗೂ ಎರಡು ಬಾಗಿಲುಗಳು ಸೇರಿವೆ. 

ಒಟ್ಟಿನಲ್ಲಿ ಒಮ್ಮೆ ಕುಡಿತದ ಚಟಕ್ಕೆ ಬಿದ್ದರೆ ಮದಿರೆಯೇ ಮನಸ್ಸನ್ನು ಆವರಿಸಿ ಮನುಷ್ಯನ ಮನಸ್ಸನ್ನು ಸಂಪೂರ್ಣವಾಗಿ ವಶಕ್ಕೆ ಒಡೆದು ತನ್ನ ಆಟದಂತೆ ಕುಣಿಸುವುದು ಎಂಬುದಕ್ಕೆ ಇಲ್ಲಿ ನಡೆದ ಘಟನೆ ಉತ್ತಮ ಉದಾಹರಣೆಯಾಗಿದೆ. 
 

click me!