
ನವದೆಹಲಿ: ಹೈದರಾಬಾದ್ನಿಂದ ಥಾಯ್ಲೆಂಡ್ಗೆ 132 ಜನರನ್ನು ಹೊತ್ತೊಯ್ಯುತ್ತಿದ್ದ ಏರಿಂಡಿಯಾ ಎಕ್ಸ್ಪ್ರೆಸ್ ವಿಮಾನದ ನೋಸ್ ವೀಲ್ (ವಿಮಾನದ ಮೂತಿ ಬಳಿಯಿರುವ ಚಕ್ರ) ಲ್ಯಾಂಡಿಂಗ್ ವೇಳೆ ಕಳಚಿ ಬಿದ್ದ ಘಟನೆ ಫುಕೆಟ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪರಿಣಾಮ ರನ್ವೇಯನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
ಬುಧವಾರ ಬೆಳಿಗ್ಗೆ 6.23ಕ್ಕೆ ಹೈದರಾಬಾದ್ನಿಂದ ಹೊರಟಿದ್ದ ಏರಿಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ವಿಮಾನವು ಥಾಯ್ಲೆಂಡ್ನ ಫುಕೆಟ್ ವಿಮಾನದಲ್ಲಿ 11.25ಕ್ಕೆ ಇಳಿಯುತ್ತಿದ್ದಾಗ ಘಟನೆ ನಡೆದಿದೆ ಎಂದು ಏರಿಂಡಿಯಾ ಎಕ್ಸ್ಪ್ರೆಸ್ ದೃಢ ಪಡಿಸಿದೆ. ಘಟನೆಯಿಂದ ವಿಮಾನದ ಲ್ಯಾಂಡಿಂಗ್ ಗೇರ್ಗೆ ಹಾನಿಯಾಗಿದೆ. ದುರಸ್ತಿಗಾಗಿ ಸಂಜೆ 6.30ರ ತನಕ ರನ್ ವೇ ಮುಚ್ಚಲಾಗಿತ್ತು.
ಮುಂಬೈ: ಮಂಗಳವಾರ ಚೇತರಿಸಿಕೊಂಡಿದ್ದ ರುಪಾಯಿ ಮೌಲ್ಯ ಹಾಗೂ ಷೇರುಪೇಟೆ ಬುಧವಾರ ಮತ್ತೆ ಕುಸಿತದ ಹಾದಿ ಹಿಡಿದಿವೆ. ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1342 ಅಂಕ ಇಳಿಕೆ ಕಂಡು 76,863.71ರಲ್ಲಿ ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ನಿಫ್ಟಿ 394.75 ಅಂಕ ಇಳಿದು 23,866.85ರಲ್ಲಿ ಮುಕ್ತಾಯವಾಗಿದೆ.ಷೇರುಪೇಟೆಯ ನಕಾರಾತ್ಮಕ ಪರಿಣಾಮ ಹೂಡಿಕೆದಾರರು ಒಂದೇ ದಿನ ಬರೋಬ್ಬರಿ 5.14 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ಇನ್ನು ಡಾಲರ್ ಎದುರು ರುಪಾಯಿ 19 ಪೈಸೆ ಕುಸಿದು 92.04ರಲ್ಲಿ ಮುಕ್ತಾಯವಾಗಿದೆ. ಇನ್ನು ಮಧ್ಯಪ್ರಾಚ್ಯ ಬಿಕ್ಕಟ್ಟು, ವಿದೇಶಿ ನಿಧಿಯ ಹೊರ ಹರಿವು ಈ ನಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ವೆಲ್ಲಿಂಗ್ಟನ್: ತಮ್ಮ ದೇಶದಲ್ಲಿ ಸಿಲುಕಿದ್ದ ಇರಾನಿನ ಮಹಿಳಾ ಫುಟ್ಬಾಲ್ ತಂಡದ ಐದು ಸದಸ್ಯರಿಗೆ ಮಂಗಳವಾರ ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದ್ದ ಆಸ್ಟ್ರೇಲಿಯಾ ಇದೀಗ ಮತ್ತಿಬ್ಬರು ಆಟಗಾರ್ತಿಯರಿಗೆ ಆಶ್ರಯ ನೀಡಿದೆ.
ಈ ಬಗ್ಗೆ ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವ ಟೋನಿ ಬರ್ಕ್ ಮಾಹಿತಿ ನೀಡಿದ್ದು, ‘ಮಂಗಳವಾರ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿರುವ ಅವರ ಹೋಟೆಲ್ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿದ್ದ ಐವರು ಆಟಗಾರ್ತಿಯರ ಜತೆ ಈಗ ಇನ್ನಿಬ್ಬರು ಸೇರಿಕೊಂಡಿದ್ದಾರೆ. ಇದರಲ್ಲಿ ಓರ್ವರು ಆಟಗಾರ್ತಿ. ಇನ್ನೊಬ್ಬರು ಸಿಬ್ಬಂದಿ’ ಎಂದಿದ್ದಾರೆ.
ಕೇರಳ: ಮೋದಿಗಿಂತ ಮೊದಲೇ ಹೈವೇ ಉದ್ಘಾಟಿಸಿದ ಸಿಪಿಎಂ!
ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿಯಿಂದ ಬುಧವಾರ ಲೋಕಾರ್ಪಣೆಯಾಗಬೇಕಿದ್ದ ರಾಷ್ಟ್ರೀಯ ಹೆದ್ದಾರಿ-66ರ ಮಾರ್ಗವೊಂದನ್ನು ಅವರಿಗಿಂತ ಕೆಲ ಹೊತ್ತು ಮೊದಲೇ ಆಡಳಿತಾರೂಢ ಸಿಪಿಎಂ ಉದ್ಘಾಟಿಸಿದ ಪ್ರಸಂಗ ನಡೆದಿದೆ. ಉದ್ಘಾಟನಾ ಆಮಂತ್ರಣ ಪತ್ರಿಕೆಯಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಹೆಸರನ್ನು ಕೈಬಿಡಲಾಗಿತ್ತು. ಈ ಹಿನ್ನೆಲೆ ಸಿಪಿಎಂ ಹೀಗೆ ಮಾಡಿದೆ ಎನ್ನಲಾಗಿದೆ.ಈ ಎರಡೂ ಮಾರ್ಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲು ಮಧ್ಯಾಹ್ನ 12.30ಕ್ಕೆ ಸಮಯ ನಿಗದಿಯಾಗಿತ್ತು. ಸಚಿವರ ಹೆಸರು ಕೈಬಿಟ್ಟಿದ್ದಕ್ಕೆ ಸಿಎಂ ಪಿಣರಾಯಿ ವಿಜಯನ್ ಕೂಡ ಗೈರಾಗಿದ್ದರು. ಆದರೆ ಮೋದಿಗೂ ಮುನ್ನ ಮಾರ್ಗಕ್ಕೆ ಸಿಪಿಐ ಶಾಸಕ ಸಿ.ಎಚ್.ಕುಂಇಂಬು ಚಾಲನೆ ನೀಡಿದರು.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ‘ನಾವು ಶಿಷ್ಟಾಚಾರದಂತೆ ಕರೆದಿದ್ದೇವೆ. ಬೇಸರಗೊಂಡರೆ ಅದು ಅವರ ಸಮಸ್ಯೆ’ ಎಂದು ಹೇಳಿದ್ದಾರೆ.
ಕಾನೂನು ಪಾಠಗಳ ಪರಿಶೀಲನೆಗೆ ಸಮಿತಿ ರಚಿಸಿ: ಸುಪ್ರೀಂ
ನವದೆಹಲಿ: ಎನ್ಸಿಇಆರ್ಟಿ ಪಠ್ಯ ಕ್ರಮದಲ್ಲಿ ನ್ಯಾಯಾಂಗಕ್ಕೆ ಅಪಮಾನವೆಸಗುವ ಪಾಠಗಳ ಸೇರ್ಪಡೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪಠ್ಯಗಳ ಪರಿಶೀಲನೆಗೆ ವಾರದೊಳಗಡೆ ತಜ್ಞರ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ.ಎನ್ಸಿಇಆರ್ಟಿಯ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಂಶಗಳ ಉಲ್ಲೇಖ ಬಗ್ಗೆ ಸುಮೋಟ್ ಕೇಸ್ ದಾಖಲಿಸಿದ್ದ ಸುಪ್ರೀಂ ಕೋರ್ಟ್ ಬುಧವಾರ ಸಿಜೆಐ ಸೂರ್ಯಕಾಂತ್ ನೇತೃತ್ವದಲ್ಲಿ ವಿಚಾರಣೆ ನಡೆಸಿತ್ತು.
ಈ ವೇಳೆ ಪೀಠವು ‘.ಕಾನೂನು ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಪರಿಶೀಲಿಸಿ ಅಂತಿಮಗೊಳಿಸಲು ತಜ್ಞರ ಸಮಿತಿ ರಚಿಸಬೇಕು. ಅದರಲ್ಲಿ ಮಾಜಿ ನ್ಯಾಯಾಧೀಶರು, ಶಿಕ್ಷಣ ಮತ್ತು ಕಾನೂನು ತಜ್ಞರಿರಬೇಕು’ ಎಂದಿದೆ. ಅಲ್ಲದೇ ‘ಕೇವಲ 8ನೇ ತರಗತಿಯ ಪಠ್ಯವಲ್ಲ, ಎಲ್ಲಾ ತರಗತಿಯ ಪುಸ್ತಕಗಳು ಪರಿಶೀಲನೆಗೆ ಒಳಗಾಗಬೇಕು’ ಎಂದು ಸೂಚಿಸಿದೆ.ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಂಶ ಉಲ್ಲೇಖಿಸಿದ್ದಕ್ಕೆ ಮಂಗಳವಾರವಷ್ಟೇ ಎನ್ಸಿಇಆರ್ಟಿ ಬಹಿರಂಗ ಕ್ಷಮೆ ಕೇಳಿ, ಪುಸ್ತಕವನ್ನು ವಾಪಸ್ ಪಡೆಯುವುದಾಗಿ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ