
ಪಾಟ್ನಾ(ಫೆ.24): 'ಬಿಜೆಪಿಯ ಶಬ್ದಕೋಶದಿಂದ ಗೋವು, ಟೋಪಿ, ಲಸಿಕೆ, ಹಿಂದೂಸ್ತಾನ್-ಪಾಕಿಸ್ತಾನ ಮತ್ತು ಸ್ಮಶಾನದಂತಹ ಪದಗಳನ್ನು ತೆಗೆದುಹಾಕಿದರೆ, ಆ ಪಕ್ಷವು ನೀರಿಲ್ಲದ ಮೀನಿನಂತೆ ಒದ್ದಾಡಿ ಸಾಯುತ್ತದೆ ಎಂದು ಎಐಎಂಐಎಂ (AIMIM) ನಾಯಕ ಅಖ್ತರುಲ್ ಇಮಾನ್ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜಕೀಯವು ಕೇವಲ ಭಾವನಾತ್ಮಕ ಮತ್ತು ಸಮಾಜ ಒಡೆಯುವ ಪದಗಳ ಮೇಲೆ ನಿಂತಿದೆ ಎಂದು ಲೇವಡಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಿಹಾರ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಇಮಾನ್, 'ಗೃಹ ಸಚಿವರು ಗಡಿ ಭಾಗಗಳಿಗೆ ಭೇಟಿ ನೀಡಿ ಆಂತರಿಕ ಭದ್ರತೆಯನ್ನು ಪರಿಶೀಲಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅಲ್ಲಿ ರಾಜಕೀಯ ಆಟವಾಡಬೇಡಿ' ಎಂದು ಎಚ್ಚರಿಸಿದರು. ಸೀಮಾಂಚಲ್ ಜನರ ವಲಸೆ ಮತ್ತು ದುಃಸ್ಥಿತಿಯ ಬಗ್ಗೆ ಗಮನಹರಿಸಿ ಎಂದು ಆಗ್ರಹಿಸಿದ ಅವರು, ಒಳನುಸುಳುವಿಕೆ ನಡೆಯುತ್ತಿದೆ ಎಂದು ನೀವು ಹೇಳುತ್ತೀರಲ್ಲ, ಹಾಗಿದ್ದರೆ 2014 ರಿಂದ ನೀವು ಏನು ಮಾಡುತ್ತಿದ್ದೀರಿ? ನೀವು ಕೈಗೆ ಬಳೆ ತೊಟ್ಟು ಕುಳಿತಿದ್ದೀರಾ? ಬಿಎಸ್ಎಫ್ ಮತ್ತು ಎಸ್ಎಸ್ಬಿ ಯಾರ ನಿಯಂತ್ರಣದಲ್ಲಿದೆ? ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯಸಭೆಗೆ ಹಿನಾ ಶಹಾಬ್ ಅವರ ಆಯ್ಕೆಗೆ ಬೆಂಬಲ ನೀಡುವಂತೆ ಆರ್ಜೆಡಿ ಶಾಸಕ ಭಾಯಿ ವೀರೇಂದ್ರ ಮಾಡಿರುವ ಮನವಿಗೆ ಪ್ರತಿಕ್ರಿಯಿಸಿದ ಅವರು, ಭಾಯಿ ವೀರೇಂದ್ರ ಅವರು ಪಕ್ಷದ ಅಧಿಕೃತ ವಕ್ತಾರರೇ?' ಎಂದು ವ್ಯಂಗ್ಯವಾಡಿದರು. ಇದೇ ವೇಳೆ, 'ಈ ಬಾರಿ ಆರ್ಜೆಡಿ ನಮ್ಮನ್ನು ಬೆಂಬಲಿಸಲಿ, ಮುಂದಿನ ದಿನಗಳಲ್ಲಿ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಕೇವಲ ಕೋಪದಿಂದ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಸಾಧ್ಯವಿಲ್ಲ, ಅದಕ್ಕೆ ಒಗ್ಗಟ್ಟು ಮತ್ತು ಪ್ರಾತಿನಿಧ್ಯ ಮುಖ್ಯ' ಎಂದು ಇಮಾನ್ ಪ್ರತಿಪಾದಿಸಿದರು.
ಸೀಮಾಂಚಲ್ನಲ್ಲಿ ಅಮಿತ್ ಶಾ ಮೂರು ದಿನಗಳ ವಾಸ್ತವ್ಯ
ಅಮಿತ್ ಶಾ ಅವರು ನಾಳೆ (ಫೆಬ್ರವರಿ 25) ಮೂರು ದಿನಗಳ ಪ್ರವಾಸಕ್ಕಾಗಿ ಬಿಹಾರಕ್ಕೆ ಆಗಮಿಸುತ್ತಿದ್ದು, ಸೀಮಾಂಚಲ್ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಖ್ತರುಲ್ ಇಮಾನ್ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ