
ಅರಾರಿಯಾ: ಬಿಹಾರದದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಈಗ ಇಲ್ಲಿ ಬಹುಕೋಟಿ ವೇಚ್ಚದಲ್ಲಿ ಕೇವಲ ಆರು ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಘಟನೆಯ ವೇಳೆ ಯಾವುದೇ ವಾಹನಗಳು ಸೇತುವೆಯ ಮೇಲೆ ಇಲ್ಲದ ಕಾರಣ ಅನಾಹುತ ತಪ್ಪಿದೆ. ಅರಾರಿಯಾದಲ್ಲಿ ಪರ್ಮನ್ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸೇತುವೆಯ ಒಂದು ಕಂಬವು ನದಿಗೆ ಬಿದ್ದಿದ್ದು ಸೇತುವೆ ಕುಸಿತದಿಂದ ಪಟೇಗಾನ ಮತ್ತು ಫೋರ್ಬ್ಸ್ಗಂಜ್ ಬ್ಲಾಕ್ಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಅರಾರಿಯಾದ ರಾಜ್ಯ ಸರ್ಕಾರದ ಗ್ರಾಮೀಣ ಕಾಮಗಾರಿ ಇಲಾಖೆಯಿಂದ ಸುಮಾರು ₹4 ಕೋಟಿ ವೆಚ್ಚದಲ್ಲಿ 2019 ರಲ್ಲಿಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಫೋರ್ಬ್ಸ್ಗಂಜ್ನ ಕೌಚಾರ್ ಪ್ರದೇಶದಲ್ಲಿ ಸೇತುವೆ ಕುಸಿದಿದ್ದು, ಹೀಗಾಗಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ವರದಿಗಳ ಪ್ರಕಾರ, ಅರಾರಿಯಾದ ಫೋರ್ಬ್ಸ್ಗಂಜ್ ಬ್ಲಾಕ್ನ ಕೇವಲಶಿ ಗ್ರಾಮದಲ್ಲಿ ಪರ್ಮನ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೌಚಾರ್ ಸೇತುವೆಯ ಒಂದು ಭಾಗ ನದಿಗೆ ಕುಸಿದಿದೆ. ಹೀಗಾಗಿ ಫೋರ್ಬ್ಸ್ಗಂಜ್ ಮತ್ತು ಪಟೇಗಾನ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಾರಿಯಾದ ಗ್ರಾಮೀಣ ಕಾಮಗಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಕುಮಾರ್ ದೂರವಾಣಿ ಮೂಲಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಪರ್ಮನ್ ನದಿಯ ಮೇಲೆ ಸುಮಾರು ₹4 ಕೋಟಿ ವೆಚ್ಚದಲ್ಲಿ ನಾಲ್ಕು ಸ್ಪ್ಯಾನ್ಗಳ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಅದರ ಒಂದು ಕಂಬವು ನದಿಗೆ ಬಿದ್ದಿದೆ ಎಂದಿದ್ದಾರೆ.
ಬಿಹಾರದಲ್ಲಿ ಈಗ ವಿಧಾನಸಭೆಯ ಚುನಾವಣೆ ಕಾವೇರಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಮತಬೇಟೆಯಲ್ಲಿ ತೊಡಗಿರುವಾಗಲೇ ಈ ಘಟನೆ ನಡೆದಿದೆ. ಇದೇ ಸಮಯದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪರ್ಮನ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕುಸಿದಿರುವುದು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅರಾರಿಯಾ ಜಿಲ್ಲೆಯಲ್ಲಿ ಸೋಮವಾರ ಸಣ್ಣ ಸೇತುವೆಯ ಕಂಬ ಕುಸಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೋರ್ಬ್ಸ್ಗಂಜ್ನಲ್ಲಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅನಿಲ್ ಕುಮಾರ್ ಘಟನೆಯ ಬಗ್ಗೆ ವಿವರವಾದ ವರದಿಯನ್ನು ಕೇಳಿದ್ದೇನೆ ಎಂದು ಹೇಳಿದರು.
ಬಿಹಾರದಲ್ಲಿ ಹೊಸ ಹೊಸ ಸೇತುವೆಗಳು ಕುಸಿಯೋದು ಹೊಸತೇನಲ್ಲ:
ಸೇತುವೆಯ ಕಂಬ ಕುಸಿದಿರುವುದರಿಂದ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಆರ್ಡಬ್ಲ್ಯೂಡಿ ಇಲಾಖೆಯ ತಾಂತ್ರಿಕ ತಜ್ಞರ ತಂಡವನ್ನು ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದಲ್ಲಿ ಸೇತುವೆಗಳು ಕುಸಿಯುವುದು ಹೊಸದೇನಲ್ಲ. ಕಳೆದ ವರ್ಷ, ರಾಜ್ಯದಲ್ಲಿ ನಿರ್ಮಾಣ ಹಂತದ ಹಾಗೂ ನಿರ್ಮಿಸಿ ಕೆಲದಿನಗಳಷ್ಟೇ ಕಳೆದಿದ್ದ ಸೇತುವೆಗಳು ಕುಸಿದಿದ್ದವು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮತ್ತು ಸಣ್ಣ ಎರಡೂ ರೀತಿಯ 12 ಸೇತುವೆಗಳು ಕಳೆದ ವರ್ಷ ಕುಸಿದು ಬಿದ್ದಿದ್ದವು.
ಬಿಹಾರದ ವಿಧಾನಸಭಾ ಚುನಾವಣೆಗೆ ಇದೇ ತಿಂಗಳ 6 ಹಾಗೂ 11 ನೇ ತಾರೀಖಿಗೆ 2 ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ನವಂಬರ್ 14ರಂದು ಫಲಿತಾಂಶ ಹೊರಬರಲಿದೆ.
ಇದನ್ನೂ ಓದಿ: ಯುಎಇನಲ್ಲಿ ಬಂಧಿತನಾಗಿರುವ ಸೋದರನ ಬಿಡುಗಡೆಗೆ ದೆಹಲಿ ಕೋರ್ಟ್ ಮೆಟ್ಟಿಲೇರಿದ ನಟಿ ಸೆಲೀನಾ ಜೇಟ್ಲಿ
ಇದನ್ನೂ ಓದಿ: ಪೊಲೀಸ್ ಅಧಿಕಾರಿಯನ್ನೇ ಎತ್ತಿ ಕುಣಿದಾಡಿದ ಕ್ರಿಕೆಟ್ ಅಭಿಮಾನಿಗಳು
ಇದನ್ನೂ ಓದಿ: ಬಾಯ್ಫ್ರೆಂಡ್ ಜೊತೆಗೆ ಕಾರಿನಲ್ಲಿದ್ದ ವಿದ್ಯಾರ್ಥಿನಿಯ ಅಪಹರಿಸಿ ಗ್ಯಾಂಗ್*ರೇಪ್ : ವಿಮಾನ ನಿಲ್ದಾಣದ ಸಮೀಪವೇ ಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ