ಕುಡಿತಕ್ಕೆ ದಾಸನಾದ ಅಪ್ಪ: ಪೊಲೀಸ್‌ ಠಾಣೆ ಮೆಟ್ಟಿಲೇರಿದ 7 ವರ್ಷದ ಮಗ

By Anusha KbFirst Published Aug 30, 2022, 2:49 PM IST
Highlights

ಕುಡಿತ ಮನುಷ್ಯರನ್ನು ಮೃಗಗಳನ್ನಾಗಿಸುತ್ತದೆ. ಕುಡಿತಕ್ಕೆ ದಾಸನಾಗಿ ಹೆಂಡತಿ ಮಕ್ಕಳಿಗೆ ಬಡಿಯುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ತೆಲಂಗಾಣದ ರಾಜಣ್ಣ ಶ್ರೀಸಿಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕುಡಿತ ಮನುಷ್ಯರನ್ನು ಮೃಗಗಳನ್ನಾಗಿಸುತ್ತದೆ. ಕುಡಿತಕ್ಕೆ ದಾಸನಾಗಿ ಹೆಂಡತಿ ಮಕ್ಕಳಿಗೆ ಬಡಿಯುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ತೆಲಂಗಾಣದ ರಾಜಣ್ಣ ಶ್ರೀಸಿಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂರನೇ ತರಗತಿಯಲ್ಲಿ ಓದುತ್ತಿರುವ ಏಳು ವರ್ಷದ ಬಾಲಕ ಸಮೀಪದ ಪೊಲೀಸ್‌ ಠಾಣೆಯಲ್ಲಿ ತಂದೆಯ ವಿರುದ್ಧ ದೂರು ನೀಡಿದ್ದಾನೆ.

ಮುಸ್ತಾಬಾದ್ ನಿವಾಸಿಯಾದ ಬಾಲಕೃಷ್ಣ ಕುಡಿತಕ್ಕೆ ದಾಸನಾಗಿದ್ದ ಈತನಿಗೆ ಭರತ್ ಹಾಗೂ ಶಿವಾನಿ ಹೆಸರಿನ ಇಬ್ಬರು ಮಕ್ಕಳಿದ್ದು, ಭರತ್ ಮುಸ್ತಾಬಾದ್‌ನ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಇತ್ತ ಕುಡಿತಕ್ಕೆ ದಾಸನಾಗಿದ್ದ ತಂದೆ ಬಾಲಕೃಷ್ಣ ಮಕ್ಕಳೆದುರೇ ದಿನವೂ ಮಕ್ಕಳ ತಾಯಿ ಹಾಗೂ ತನ್ನ ಪತ್ನಿಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ತಂದೆಯ ಕೈಯಲ್ಲಿ ಅಮ್ಮ ದೌರ್ಜನ್ಯಕ್ಕೊಳಗಾಗುತ್ತಿದ್ದಿದ್ದನ್ನು ಸಹಿಸದ ಪುತ್ರ ಇದಕ್ಕೊಂದು ಪರಿಹಾರ ಹುಡುಕಲು ಯತ್ನಿಸಿದ್ದಾನೆ. ಒಂದು ದಿನ ತನ್ನ ಕುಟುಂಬದವರಿಗೂ ಹೇಳದೇ ಪುಟ್ಟ ಬಾಲಕ ಸೀದಾ ತನ್ನ ಊರಿನಲ್ಲಿದ್ದ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಇದು ಪೊಲೀಸ್‌ ಠಾಣೆಯಲ್ಲಿದ್ದ ಎಲ್ಲರನ್ನೂ ಅಚ್ಚರಿಗೊಳಿಸಿದೆ. 

ಯಾರಾಯ್ತೋ ಅವರೆಲ್ಲಾ ಆಲ್ಕೋಹಾಲ್ ಕುಡಿಯೋ ಹಂಗಿಲ್ಲ, ಅನಾರೋಗ್ಯಕ್ಕೆ ಕುತ್ತು!

ಪೊಲೀಸ್ ಠಾಣೆಯಲ್ಲಿ ಆತ ಇನ್ಸ್‌ಪೆಕ್ಟರ್ ವೆಂಕಟೇಶ್ವರಲು ಅವರನ್ನು ಭೇಟಿಯಾಗಿದ್ದಾನೆ. ತನ್ನ ವಯಸ್ಸಿಗೆ ಮಿಗಿಲಾದ ಬುದ್ಧಿವಂತಿಕೆಯನ್ನು ತೋರಿದ ಬಾಲಕ, ತನ್ನ ಕುಡುಕ ಅಪ್ಪನಿಂದ ತಾಯಿ ಪ್ರತಿದಿನ ನರಕಯಾತನೆ ಅನುಭವಿಸುತ್ತಿರುವ ಬಗ್ಗೆ ಹೇಳಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಬಾಲಕನಲ್ಲಿ ಹೆಚ್ಚಿನ ವಿವರ ಕೇಳಿದಾಗ ಕಳೆದ ನಾಲ್ಕು ವರ್ಷಗಳಿಂದ ತನ್ನ ತಂದೆ ಸರಾಯಿ ಸೇವಿಸುತ್ತಿರುವುದಾಗಿ ಹೇಳಿದ್ದಾನೆ. ಪೊಲೀಸರ ಮೇಲಿನ ಸಂಪೂರ್ಣ ನಂಬಿಕೆಯಲ್ಲಿ ತನ್ನ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ವಿಶ್ವಾಸದಿಂದ ಬಾಲಕ ಎಲ್ಲಾ ಘಟನೆಯನ್ನು ವಿವರಿಸಿದ್ದು ನೋಡಿ ಪೊಲೀಸರೇ ಕೆಲಕಾಲ ಅಚ್ಚರಿಗೊಳಗಾಗಿದ್ದರು. 

Uttara Kannada ಪ್ರೇಮಿಗಳಿಬ್ಬರ ಜೀವನಕ್ಕೆ ಕಂಟಕವಾಯ್ತು ಕುಡಿತದ ಚಟ!

ಬಾಲಕ ನೀಡಿದ ದೂರಿನ ಮೇರೆಗೆ ಸಬ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್ವರಲು ಬಾಲಕನ ತಂದೆ ಬಾಲಕೃಷ್ಣ ಹಾಗೂ ತಾಯಿ ದೀಪಿಕಾಳನ್ನು ಠಾಣೆಗೆ ಕರೆಸಿದ್ದಾರೆ. ಅಲ್ಲದೇ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಇದು ಹೀಗೆ ಮುಂದುವರೆದರೆ ಮಗು ಮತ್ತೆ ದೂರು ನೀಡುವುದು. ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಘಟನೆಯನ್ನು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ತಮ್ಮ ಫೋನ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 

ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರುವುದು ತೆಲಂಗಾಣದಲ್ಲಿ ಇದು ಮೊದಲೇನಲ್ಲ. ಮೂರು ವರ್ಷಗಳ ಹಿಂದೆ ಹೈದರಾಬಾದ್‌ನ ಎಸ್ಆರ್ ನಗರದ ಬಾಲಕನೋರ್ವ ತನ್ನ ಅಜ್ಜಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ.

ಕೆಲ ದಿನಗಳ ಹಿಂದೆ ಗಂಡಂದಿರ ಕುಡಿತದ ಚಟದಿಂದ ಬೇಸತ್ತ ಹಾವೇರಿಯ ಮಹಿಳೆಯರು ಪ್ರಧಾನಿಗೆ ಪತ್ರ ಬರೆಯಲು ಮುಂದಾಗಿದ್ದರು. ಸಾರಾಯಿ ಚಟ ಅನ್ನೋದು ಕುಟುಂಬದ ನೆಮ್ಮದಿ ಹಾಳು ಮಾಡೋದಲ್ಲದೆ ಆರೋಗ್ಯವೂ ಹದಗೆಟ್ಟು ಚಟ್ಟ ಏರೋ ಬಹುದೊಡ್ಡ ಪಿಡುಗು. ಗ್ರಾಮಗಳಲ್ಲಿ  ಸಣ್ಣ ಸಣ್ಣ ಬೀಡಿ ಅಂಗಡಿ, ದಿನಸಿ ಅಂಗಡಿ , ಎಗ್ ರೈಸ್ ಅಂಗಡಿಗಳಲ್ಲಿ  ಯಥೇಚ್ಛವಾಗಿ ಸಿಗ್ತಿರೋ ಸಾರಾಯಿ ಕುಡಿದು ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕುಡಿದು ಕುಡಿದು ಲಿವರ್ ಡ್ಯಾಮೇಜ್ ಆಗಿ ಸತ್ತವರೆಷ್ಟು ಅನ್ನೋದನ್ನ ಲೆಕ್ಕ ಹಾಕೋಕೂ ಆಗಲ್ಲ ಬಿಡಿ. ಇಷ್ಟೆಲ್ಲಾ ಅನಾಹುತ ಆದರೂ ಸರ್ಕಾರಕ್ಕೆ ಸಾರಾಯಿನೇ ಬೊಕ್ಕಸ ತುಂಬಿಸೋ ಕಾಮಧೇನು ಆಗಿಬಿಟ್ಟಿದೆ. ಕುಡುಕ ಗಂಡಂದಿರ ಕಾಟ ತಾಳಲಾಗದೇ  ಹೆಣ್ಣು ಮಕ್ಕಳು ಮನೆ , ಊರು ಬಿಟ್ಟು ಹೋದ ಉದಾಹರಣೆಗಳೂ ಇದೆ. ಇದೇ ರೀತಿ  ಕುಡುಕ ಗಂಡಂದಿರ ಕಾಟ ತಾಳಲಾಗದೇ ಗ್ರಾಮವೊಂದರ ಹೆಣ್ಣು ಮಕ್ಕಳು ಪ್ರಧಾನಿ ಮೋದಿಯವರಿಗೆ ಮಾಂಗಲ್ಯವನ್ನೇ ಕಳಿಸಲು ಮುಂದಾದ ಘಟನೆ ಹಾವೇರಿಯಲ್ಲಿ ನಡೆದಿತ್ತು

click me!