ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾನುವಾರ 71 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಅವರಲ್ಲಿ 60 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಇನ್ನು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ ಮತ್ತು ಜೆಡಿಯುನ ತಲಾ ಇಬ್ಬರು ಇದ್ದಾರೆ.
ಜೆಡಿಎಸ್, ಹಿಂದೂಸ್ತಾನಿ ಅವಾಮ್ ಮೋರ್ಚಾ (ಹಮ್), ಶಿವಸೇನೆ (ಶಿಂಧೆ ಬಣ), ಅಪ್ಪಾ ದಳ, ರಾಷ್ಟ್ರೀಯ ಲೋಕದಳ (ಆರ್ಎಲ್ಡಿ), ಎಲ್ಜೆಪಿ(ರಾಮವಿಲಾಸ್ ಪಾಸ್ವಾನ್) ಮತ್ತು ರಿಪ ಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತಲಾ ಒಬ್ಬರಿದ್ದಾರೆ. ಬಿಜೆಪಿ 240, ಟಿಡಿಪಿ16, ಜೆಡಿಯು 12, ಎಲ್ಜೆಪಿ 5, ಶಿವ ಸೇನೆ 1, ಜೆಡಿಎಸ್ 2, ಹಮ್ 1, ಆರ್ಎಲ್ಡಿ 2, ಆರ್ಪಿಐ 1, ಅಪ್ಪಾದಳ 1 ಸೀಟು ಗೆದ್ದಿದ್ದವು.
ಹೆಚ್ಡಿಕೆ ಮೋದಿ ರಾಜನಾಥ್ ಸಿಂಗ್ ಸೇರಿದಂತೆ ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು
ಮೋದಿ ಮಂತ್ರಿಮಂಡಲ ಸೇರಲು ಎನ್ಸಿಪಿ ನಕಾರ
ಮುಂಬೈ: ಮೋದಿ ಮಂತ್ರಿಮಂಡಲ ಸೇರಲು ಎನ್ಸಿಪಿ (ಅಜಿತ್ ಪವಾರ್ ಬಣ) ಭಾನುವಾರ ನಿರಾಕರಿಸಿದೆ. ಏಕೆಂದರೆ ಸಂಪುಟ ದರ್ಜೆ ಸ್ಥಾನಮಾನ ನೀಡದೇ ರಾಜ್ಯ ದರ್ಜೆ (ಸ್ವತಂತ್ರ ನಿರ್ವಹಣೆ) ನೀಡಿದ್ದಕ್ಕೆ ಪಕ್ಷದ ನೇತಾರ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಸಚಿವಾಕಾಂಕ್ಷಿ ಪ್ರಫುಲ್ ಪಟೇಲ್ ಕಿಡಿಕಾರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅಜಿತ್ ಪವಾರ್ 'ಪ್ರಫುಲ್ ಪಟೇಲ್ ಅವರು ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಈಗ ರಾಜ್ಯ ಸಚಿವ ಹುದ್ದೆ ನೀಡದಿರುವುದು ಸರಿಯಲ್ಲ. ತಡವಾದರೂ ಚಿಂತೆಯಿಲ್ಲ, ಎನ್ಸಿಪಿಗೆ ಸಂಪುಟ ಸ್ಥಾನಮಾನವೇ ಬೇಕು. ಇಂದು ಒಬ್ಬ ಲೋಕಸಭೆ ಮತ್ತು ಒಬ್ಬ ರಾಜ್ಯಸಭಾ ಸಂಸದರಿದ್ದಾರೆ, ಆದರೆ ಮುಂದಿನ 2 -3 ತಿಂಗಳಲ್ಲಿ ಇನ್ನೂ ಇಬ್ಬರು ರಾಜ್ಯ ಸಭಾ ಸದಸ್ಯರು ಸೇರಿಕೊಳ್ಳಲಿದ್ದು, ಆಗ ನಮ್ಮ ಬಲ ಇಡೀ ಸಂಸತ್ತಲ್ಲಿ 4 ಕ್ಕೇರಲಿದೆ. ಹೀಗಾಗಿ ನಮಗೆ ಸಂಪುಟ ಸ್ಥಾನಮಾನವೇ ಬೇಕು' ಎಂದರು. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಮಾತನಾಡಿ, 'ಮುಂದಿನ ಸುತ್ತಿನಲ್ಲಿ ಎನ್ಸಿಪಿ ಸಂಪುಟ ಸೇರಲಿದೆ' ಎಂದರು.
ನಡ್ಡಾಗೆ ಕೇಂದ್ರ ಸಚಿವ ಹುದ್ದೆ: ಬಿಜೆಪಿ ನೂತನ ಅಧ್ಯಕ್ಷ ಹುದ್ದೆ ಯಾರಿಗೆ?
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಇದೀಗ ಎಲ್ಲರ ಕುತೂಹಲ, ಬಿಜೆಪಿ ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದರತ್ತ ತಿರುಗಿದೆ.
2014-19ರ ಅವಧಿಗೆ ಕೇಂದ್ರ ಆರೋಗ್ಯ ಖಾತೆ ಸಚಿವರಾಗಿದ್ದ ನಡ್ಡಾರನ್ನು 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 2022ರಲ್ಲಿ ನಡ್ಡಾ ಅವಧಿ ಮುಕ್ತಾಯವಾಗಬೇಕಿತ್ತಾದರೂ, 2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಲೋಕಸಭಾ ಚುನಾವಣೆ ಮುಕ್ತಾಯಗೊಂಡು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರೊಂದಿಗೆ ನಡ್ಡಾ ಅಧ್ಯಕ್ಷೀಯ ಅವಧಿಯು ಅಂತ್ಯದತ್ತ ಸಾಗಿದೆ.
ನಡ್ಡಾ ಸ್ಥಾನಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತಾದರೂ, ಅವರು ಕೂಡಾ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರಣ, ಮುಂದಿನ ಅಧ್ಯಕ್ಷರ ಕುರಿತ ಕುತೂಹಲ ಮತ್ತಷ್ಟು ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ