Odisha train accident: ಕರ್ನಾಟಕದಲ್ಲಿ 3 ತಿಂಗಳ ಹಿಂದೆ ತಪ್ಪಿತ್ತು ಒಡಿಶಾ ರೀತಿ ದುರಂತ!

By Kannadaprabha NewsFirst Published Jun 5, 2023, 6:25 AM IST
Highlights

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೀತಿಯದೇ ದುರಂತ ಮೂರು ತಿಂಗಳ ಹಿಂದೆ ಕರ್ನಾಟಕದ ಬೆಂಗಳೂರು-ಹುಬ್ಬಳ್ಳಿ ರೈಲು ಮಾರ್ಗದಲ್ಲಿರುವ ಹೊಸದುರ್ಗ ರೋಡ್‌ ಜಂಕ್ಷನ್‌ನಲ್ಲಿ ಸಂಭವಿಸುವುದು ಬೆಂಗಳೂರು-ನವದೆಹಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಚಾಲಕನ ಜಾಣ್ಮೆಯಿಂದ ಕೊನೆಯ ಕ್ಷಣದಲ್ಲಿ ತಪ್ಪಿತ್ತು ಎಂಬ ಆಘಾತಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

ಲಖನೌ (ಜೂ.5):  ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೀತಿಯದೇ ದುರಂತ ಮೂರು ತಿಂಗಳ ಹಿಂದೆ ಕರ್ನಾಟಕದ ಬೆಂಗಳೂರು-ಹುಬ್ಬಳ್ಳಿ ರೈಲು ಮಾರ್ಗದಲ್ಲಿರುವ ಹೊಸದುರ್ಗ ರೋಡ್‌ ಜಂಕ್ಷನ್‌ನಲ್ಲಿ ಸಂಭವಿಸುವುದು ಬೆಂಗಳೂರು-ನವದೆಹಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಚಾಲಕನ ಜಾಣ್ಮೆಯಿಂದ ಕೊನೆಯ ಕ್ಷಣದಲ್ಲಿ ತಪ್ಪಿತ್ತು ಎಂಬ ಆಘಾತಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

‘ಫೆಬ್ರವರಿ 8ರಂದು ಸಂಜೆ 5.49ಕ್ಕೆ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆಯ ದೋಷದಿಂದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲು ಹೊಸದುರ್ಗ ಜಂಕ್ಷನ್‌ನಲ್ಲಿ ಡೌನ್‌ ಲೈನ್‌ನಲ್ಲಿ ನಿಂತಿದ್ದ ಗೂಡ್‌್ಸ ರೈಲಿಗೆ ಡಿಕ್ಕಿ ಹೊಡೆಯುವುದು ಕ್ಷಣಮಾತ್ರದಲ್ಲಿ ತಪ್ಪಿದೆ’ ಎಂದು ನೈಋುತ್ಯ ರೈಲ್ವೆಯ ಅಂದಿನ ಪ್ರಿನ್ಸಿಪಾಲ್‌ ಚೀಫ್‌ ಆಪರೇಷನ್‌ ಮ್ಯಾನೇಜರ್‌ ಹರಿ ಶಂಕರ್‌ ವರ್ಮಾ ಈ ಬಗ್ಗೆ ಲಿಖಿತ ವರದಿಯನ್ನು ಉನ್ನತಾಧಿಕಾರಿಗಳಿಗೆ ಸಲ್ಲಿಸಿದ್ದರು. ತಕ್ಷಣವೇ ಈ ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಭಯಾನಕ ಅಪಘಾತಗಳು ಸಂಭವಿಸಬಹುದು ಎಂದೂ ಎಚ್ಚರಿಸಿದ್ದರು. ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಒಡಿಶಾದಲ್ಲಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ರೈಲು ದುರಂತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್ ನೆರವು, ಉಚಿತ ಶಿಕ್ಷಣ-ವಸತಿ!

ಫೆ.8ರಂದು ಸಂಜೆ ಏನಾಗಿತ್ತು?:

ಹರಿಶಂಕರ್‌ ಸಲ್ಲಿಸಿದ ವರದಿಯಲ್ಲಿ, ‘ಫೆ.8ರಂದು ಸಂಜೆ ಹೊಸದುರ್ಗ ಜಂಕ್ಷನ್‌ನಲ್ಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ (12649) ರೈಲು ಕಾಮನ್‌ ಲೂಪ್‌ ಲೈನ್‌ನಲ್ಲಿ ನಿಂತಿತ್ತು. ಅದಕ್ಕೆ ಡೌನ್‌ ಮೇನ್‌ಲೈನ್‌ಗೆ (ಬೆಂಗಳೂರು ಕಡೆಗೆ) ಹೋಗಲು ಕ್ರಾಸ್‌ಓವರ್‌ ಸಿಗ್ನಲ್‌ ನೀಡಲಾಗಿತ್ತು. ವಾಸ್ತವವಾಗಿ ಅದಕ್ಕೆ ಅಪ್‌ ಮೇನ್‌ಲೈನ್‌ಗೆ (ನಿಜಾಮುದ್ದೀನ್‌ ಕಡೆಗೆ) ಹೋಗಲು ಸಿಗ್ನಲ್‌ ನೀಡಬೇಕಿತ್ತು. ಹೀಗಾಗಿ ಸಿಬ್ಬಂದಿ ಏನೋ ಎಡವಟ್ಟು ಮಾಡಿದ್ದಾನೆ ಎಂಬುದನ್ನು ಊಹಿಸಿದ ಸಂಪರ್ಕ ಕ್ರಾಂತಿ ರೈಲ್ವೆ ಚಾಲಕನು ಡೌನ್‌ ಮೇನ್‌ಲೈನ್‌ನಲ್ಲಿ ಅದಾಗಲೇ ಗೂಡ್‌್ಸ ರೈಲು ಬರುತ್ತಿದ್ದುದನ್ನು ಗಮನಿಸಿ ತನ್ನ ರೈಲನ್ನು ಹೊರಡಿಸಲಿಲ್ಲ. ಹೀಗಾಗಿ ದೊಡ್ಡ ದುರಂತ ತಪ್ಪಿದೆ’ ಎಂದು ಹೇಳಿದ್ದರು.

ಎಲೆಕ್ಟ್ರಾನಿಕ್‌ ಸಿಗ್ನಲ್‌ ನಿರ್ವಾಹಕರು ಆಗಾಗ ತಮ್ಮ ಮೇಲಧಿಕಾರಿಗಳ ಜೊತೆ ಮಾತನಾಡಿ ಹೀಗೆ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಬದಲಿಸಿ ಲೊಕೇಶನ್‌ ಬಾಕ್ಸ್‌ ಮೂಲಕ ನಿಯಮಬಾಹಿರವಾಗಿ ಗ್ರೀನ್‌ ಸಿಗ್ನಲ್‌ ನೀಡುತ್ತಾರೆ. ಸಿಗ್ನಲ್‌ ವ್ಯವಸ್ಥೆಯಲ್ಲಿ ತೋರಿಸುವ ‘ಎರರ್‌’ ತಪ್ಪಿಸಲು ಹೀಗೆ ಮಾಡುತ್ತಾರೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.

ತಕ್ಷಣ ಸರಿಪಡಿಸಿ ಎಂದು ವರದಿ:

‘ನಿಯಮದ ಪ್ರಕಾರ ಎಲೆಕ್ಟ್ರಾನಿಕ್‌ ಸಿಗ್ನಲಿಂಗ್‌ ಸರಿಯಾಗಿ ಕೆಲಸ ಮಾಡದಿದ್ದರೆ ಎಲೆಕ್ಟ್ರಾನಿಕ್‌ ಸಿಗ್ನಲ್‌ ಮೆಂಟೇನರ್‌ಗಳು ಸ್ಟೇಶನ್‌ ಮಾಸ್ಟರ್‌ಗೆ ತಿಳಿಸಬೇಕು. ಅವರು ತಕ್ಷಣ ಸರಿಪಡಿಸಲು ಅನುಮತಿ ನೀಡಬೇಕು. ಆದರೆ ಹೊಸದುರ್ಗ ಸ್ಟೇಶನ್‌ನಲ್ಲಿ ಫೆ.8ರಂದು ಈ ನಿಯಮ ಉಲ್ಲಂಘಿಸಲಾಗಿದೆ. ಇಲ್ಲದಿದ್ದರೆ ಸ್ಟೇಶನ್‌ ಮಾಸ್ಟರ್‌ ಎಚ್ಚೆತ್ತುಕೊಂಡು ನಾನ್‌-ಇಂಟರ್‌ಲಾಕ್‌್ಡ ವ್ಯವಸ್ಥೆ ಮೂಲಕ ರೈಲುಗಳು ಸುರಕ್ಷಿತವಾಗಿ ಚಲಿಸುವಂತೆ ಮಾಡುತ್ತಿದ್ದರು. ಎಲೆಕ್ಟ್ರಾನಿಕ್‌ ಸಿಗ್ನಲಿಂಗ್‌ನಲ್ಲಿ ದೋಷವಿದ್ದರೆ ಸಿಬ್ಬಂದಿ ತಮ್ಮಷ್ಟಕ್ಕೆ ತಾವೇ ಅದನ್ನು ನಿಯಮಬಾಹಿರವಾಗಿ ನಿರ್ವಹಣೆ ಮಾಡಲು ಹೋಗದೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಸಿಗ್ನಲ್‌ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಮತ್ತು ಸಮಸ್ಯೆಯಾಗಿದ್ದಲ್ಲಿ ತಕ್ಷಣ ಸರಿಪಡಿಸದೆ ಇದ್ದರೆ ಭಾರೀ ದುರಂತಗಳು ಸಂಭವಿಸುತ್ತವೆ’ ಎಂದು ಹರಿ ವರ್ಮಾ ಎಚ್ಚರಿಸಿದ್ದರು.

ಗೋದ್ರಾ ದುರಂತ ಮಾಡಿಸಿದ್ದು ಯಾರು? ಒಡಿಶಾ ರೈಲು ಅಪಘಾತದಲ್ಲಿ ಸಿಎಂ ಮಮತಾ ರಾಜಕೀಯ!

1987ರ ಬ್ಯಾಚ್‌ನ ಐಆರ್‌ಟಿಎಸ್‌ ಅಧಿಕಾರಿ ವರ್ಮಾ ಅವರು ಉತ್ತರ ಪ್ರದೇಶ ಮೂಲದವರಾಗಿದ್ದು, ರೈಲ್ವೆ ಸುರಕ್ಷತೆಯ ವಿಷಯದಲ್ಲಿ ಅತ್ಯಂತ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ.

click me!