
ನವದೆಹಲಿ: ಹಿಂದೊಮ್ಮೆ ತನ್ನ ನಾಯಿಯನ್ನು ವಾಕ್ ಕರೆದುಕೊಂಡು ಹೋಗುವುದಕ್ಕಾಗಿ ಇಡೀ ದೆಹಲಿ ಕ್ರೀಡಾಂಗಣವನ್ನೇ ಖಾಲಿ ಮಾಡಿಸಿ ವಿವಾದಕ್ಕೆ ಕಾರಣವಾಗಿದ್ದ ಐಎಎಸ್ ಅಧಿಕಾರಿ ಸಂಜೀವ್ ಖಿರ್ವರ್ ಅವರನ್ನು ಈಗ ದೆಹಲಿ ಮುನ್ಸಿಪರ್ ಕಾರ್ಪೋರೇಷನ್ನ (MCD)ನೂತನ ಕಮೀಷನರ್ ಆಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವಾಲಯವು ಇವರ ನೇಮಕದ ಬಗ್ಗೆ ಬುಧವಾರ ಘೋಷಣೆ ಮಾಡಿದೆ ಹಾಗೂ ಈ ವಿಚಾರವನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಕಚೇರಿಗೆ ತಿಳಿಸಲಾಗಿದೆ. 1992 ರ ಬ್ಯಾಚ್ನ ಐಎಎಸ್ ಅಧಿಕಾರಿ ಅಶ್ವನಿ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಸಂಜೀವ್ ಖಿರ್ವರ್ ನೇಮಕಗೊಂಡಿದ್ದಾರೆ, ಅಶ್ವನಿ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದೆ.
ಈ ತಿಂಗಳ ಕೊನೆಯಲ್ಲಿ ಮಹಾನಗರ ಪಾಲಿಕೆಯು ತನ್ನ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಮತ್ತು ಬಹು ಆಡಳಿತಾತ್ಮಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿಯೇ ಸಂಜೀವ್ ಖಿರ್ವರ್ ಅವರು ದೆಹಲಿ ಮಹಾನಗರ ಪಾಲಿಕೆಯ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ದಿನನಿತ್ಯದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವುದು, ನೀತಿಗಳನ್ನು ಅನುಷ್ಠಾನಗೊಳಿಸುವುದು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುವಲ್ಲಿ ಎಂಸಿಡಿ ಆಯುಕ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ಖಿರ್ವಾರ್ ಅವರು ಅರುಣಾಚಲ ಪ್ರದೇಶ-ಗೋವಾ-ಮಿಜೋರಾಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳ (AGMUT) ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ.
1994 ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ಅವರನ್ನು 2022ರಲ್ಲಿ ನಡೆದ ವಿವಾದದ ನಂತರ ಲಡಾಕ್ಗೆ ವರ್ಗಾವಣೆ ಮಾಡಲಾಗಿತ್ತು. ಆ ಸಮಯದಲ್ಲಿ ಅವರು ದೆಹಲಿಯ ಕಂದಾಯ ವಿಭಾಗದ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಹಾಗೂ ಅವರ ಪತ್ನಿ ಇಬ್ಬರೂ ಕೂಡ ಅಧಿಕಾರಿಗಳಾಗಿದ್ದು, ದೆಹಲಿಯ ಕ್ರೀಡಾಂಗಣದಲ್ಲಿ ತಮ್ಮ ನಾಯಿಯನ್ನು ವಾಕ್ ಕರೆದುಕೊಂಡು ಬರುವುದಕ್ಕಾಗಿ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಬೇಗನೆ ಹೊರನಡೆಯುವಂತೆ ಹೇಳಿದ್ದರು.
ನಾಯಿಯ ಜೊತೆ ತಾವು ವಾಕ್ ನಡೆಸುವುದಕ್ಕಾಗಿ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರರು ಆ ಸಮಯದಲ್ಲಿ ತಮ್ಮ ಸಾಮಾನ್ಯ ಮುಕ್ತಾಯ ಸಮಯವಾದ ಸಂಜೆ 7 ಗಂಟೆಗಿಂತ ಮುಂಚಿತವಾಗಿ ಅಲ್ಲಿಂದ ಹೊರಡುವಂತೆ ಸೂಚಿಸಲಾಗಿತ್ತು. ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಆಗಿನ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ರಾಷ್ಟ್ರ ರಾಜಧಾನಿಯ ಎಲ್ಲಾ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೆ ಆಟಗಾರರಿಗೆ ತೆರೆದಿಡುವಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಬಾಲಕಿಯನ್ನು ಬೆಂಬಲಿಸಿ ತಲೆ ಬೋಳಿಸಿಕೊಂಡ ತರಗತಿಯ ಎಲ್ಲಾ ಮಕ್ಕಳು, ಟೀಚರ್
ಆದಾಗ್ಯೂ ಕ್ರೀಡಾಂಗಣದ ಆಡಳಿತಾಧಿಕಾರಿ ಈ ಆರೋಪಗಳನ್ನು ನಿರಾಕರಿಸಿದರು. ಕ್ರೀಡಾಪಟುಗಳನ್ನಾಗಲಿ ಕೋಚ್ಗಳನ್ನಾಗಲಿ ಮೈದಾನದಿಂದ ಮೊದಲೇ ಹೋಗುವಂತೆ ಹೇಳಿಲ್ಲ ಎಂದು ಅವರು ಹೇಳಿದರು. ವಿವಾದದ ನಂತರ, ಖಿರ್ವರ್ ಅವರ ಪತ್ನಿ 1994 ರ ಬ್ಯಾಚ್ನ ಐಎಎಸ್ ಅಧಿಕಾರಿಯೂ ಆಗಿದ್ದ ರಿಂಕು ದುಗ್ಗಾ ಅವರು ಕಡ್ಡಾಯವಾಗಿ ನಿವೃತ್ತಿ ಹೊಂದಿದ್ದರು ಎಂದು ವರದಿಯಾಗಿದೆ. ಅವರ ಸೇವಾ ದಾಖಲೆಯ ಮೌಲ್ಯಮಾಪನದ ನಂತರ, 1972 ರ ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್) ಪಿಂಚಣಿ ನಿಯಮಗಳ ಮೂಲಭೂತ ನಿಯಮಗಳು (ಎಫ್ಆರ್) 56 (ಜೆ), ನಿಯಮ 48 ರ ಅಡಿಯಲ್ಲಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಉಡುಪಿ ಪರ್ಯಾಯ ವೇಳೆ ಕೇಸರಿ ಧ್ವಜ ಹಿಡಿದ ಮಹಿಳಾ ಅಧಿಕಾರಿಯ ವಿರುದ್ಧ ಕಾಂಗ್ರೆಸ್ ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ