Border Dispute: ಕರ್ನಾಟಕ ಸೇರಲು ಠರಾವು ಹೊರಡಿಸಿದ ಮಹಾರಾಷ್ಟ್ರದ 11 ಗ್ರಾಮ ಪಂಚಾಯಿತಿಗಳು

By Sathish Kumar KHFirst Published Dec 6, 2022, 4:48 PM IST
Highlights

ಸೊಲ್ಲಾಪುರ ಜಿಲ್ಲಾಧಿಕಾರಿಗೆ ಠರಾವು ಪತ್ರ ಸಲ್ಲಿಸಿ ನಿರಾಕ್ಷೇಪಣಾ ಪತ್ರ ನೀಡುವಂತೆ ಒತ್ತಾಯ
ಪೊಲೀಸ್ ಬಲ ಬಳಸಿ ಕನ್ನಡಿಗರ ಬಾಯಿ ಮುಚ್ಚಿಸಲು ಮಹಾ ಸರ್ಕಾರದ ಯತ್ನ
ಮಹಾರಾಷ್ಟ್ರ ತೊರೆಯಲು ಇನ್ನೂ 50 ಗ್ರಾಮ ಪಂಚಾಯಿತಿಗಳಿಂದ ಸಿದ್ಧತೆ

ವರದಿ- ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.06) : ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಿನ ಗಡಿ ವಿವಾದ ತಾರಕಕ್ಕೇರಿದೆ. ಹೆಚ್ಚಾಗಿ ಕನ್ನಡಿಗರು ವಾಸಿಸುವ ಗಡಿ ಭಾಗದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ತಮ್ಮನ್ನ ಕರ್ನಾಟಕಕ್ಕೆ ಸೇರಿಸಿ ಎಂದು ಪ್ರತಿಭಟನೆಗಳು, ಮಂಡಲಗಳಲ್ಲಿ ಕರ್ನಾಟಕಕ್ಕೆ ಸೇರಿತ್ತೇವೆ ಎನ್ನುವ ಠರಾವು ಮಾಡುತ್ತಿವೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಪೊಲೀಸರ ಮೂಲಕ ಕನ್ನಡಿಗರ ಧ್ವನಿ ಅಡಗಿಸಲು ಬಲ ಪ್ರಯೋಗಕ್ಕೆ ಮುಂದಾಗಿದೆ.

ಕರ್ನಾಟಕ ಮಹಾರಾಷ್ಟ್ರ ನಡುವೆ ಗಡಿ ವಿವಾದ ಶುರುವಾಗ್ತಿದ್ದಂತೆ ಮಹಾರಾಷ್ಟ್ರ ಗಡಿಯಲ್ಲಿನ ಕನ್ನಡಿಗರು ಕರ್ನಾಟಕ ಸೇರುವುದಾಗಿ ಹೋರಾಟ ಶುರು ಮಾಡಿದ್ದಾರೆ. ಈಗ ನಾವು ಕರ್ನಾಟಕ‌ ಸೇರುವುದಾಗಿ ಗ್ರಾ.ಪಂ‌ಗಳಲ್ಲಿ ಠರಾವು ಪಾಸ್ ಸಹ ಮಾಡಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಸೇರುವ ಬಗ್ಗೆ ಠರಾವು ಪಾಸ್ ಮಾಡಿದ್ದಾರೆ. ಈ ಮೂಲಕ ತಾವು ಕರ್ನಾಟಕಕ್ಕೆ ಸೇರಿಯೆ ಸಿದ್ಧ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳೆ ಕರ್ನಾಟಕ‌ ಸೇರುವ ತೀರ್ಮಾನಕ್ಕೆ ಬಂದು ಠರಾವು ಪಾಸ್ ಮಾಡಿರೋದು ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.

 

karnataka maharashtra border dispute: ನಾವೂ ಕರ್ನಾಟಕ ಸೇರ್ತೀವಿ: ಪಂಢರಪುರದಲ್ಲೂ ಕೂಗು!

ಸೊಲ್ಲಾಪುರ ಡಿಸಿಗೆ ಠರಾವು ಪತ್ರ ಸಲ್ಲಿಕೆ: ಅಕ್ಕಲಕೋಟ ತಾಲೂಕಿನ 11 ಗ್ರಾ.ಪಂಗಳು ಕರ್ನಾಟಕ‌ ಸೇರುವ ಠರಾವು ಪಾಸ್ ಮಾಡಿದ ಪತ್ರಗಳನ್ನ ಸೊಲ್ಲಾಪುರ ಡಿಸಿಗೆ ತಲುಪಿಸಿವೆ. ಸ್ವತಃ ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಗ್ರಾಮಸ್ಥರು ಸೊಲ್ಲಾಪುರ ಡಿಸಿಗೆ ಠರಾವು ಪತ್ರಗಳನ್ನ ನೀಡಿದ್ದಾರೆ. ಠರಾವು ಪಾಸ್ ಮಾಡಿದ ಪತ್ರಗಳನ್ನ ಡಿಸಿಗೆ ಸಲ್ಲಿಕೆ ಮಾಡಿ ನಮಗೆ ಕರ್ನಾಟಕ ಸೇರಲು ನಿರಾಕ್ಷೇಪಣಾ ನೀಡುವಂತೆ ಕೇಳಿದ್ದಾರೆ. ಇದೆ ವಿಚಾರವನ್ನ ನಿನ್ನೆ ಗಡಿ ಗ್ರಾಮಕ್ಕೆ ಭೇಟಿ‌ ನೀಡಿದ್ದ ಮಹಾರಾಷ್ಟ್ರ ಸಚಿವ ಸಾವಂತ್ ಎದುರು ಇಲ್ಲಿನ ಗ್ರಾಮಸ್ಥರು ಇಟ್ಟಿದ್ದರು. ಮಹಾರಾಷ್ಟ್ರ ಸರ್ಕಾರದ ಯಾವುದೇ ಒತ್ತಡಗಳಿಗು ಈ ಮೂಲಕ ಮನಿಯುತ್ತಿಲ್ಲ.

ಪೊಲೀಸರ ಮೂಲಕ ಬಲ ಪ್ರಯೋಗ: ಕಳೆದ ಐದಾರು ದಿನಗಳ ಹಿಂದೆ ಅಷ್ಟೇ ಕರ್ನಾಟಕಕ್ಕೆ ಸೇರುವುದಾಗಿ ಅಕ್ಕಲಕೋಟ ತಾಲೂಕಿನ ಉಡಗಿ ಗ್ರಾಮಸ್ಥರು ಠರಾವು ಪಾಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿರುವ ಅಕ್ಕಲಕೋಟ ದಕ್ಷಿಣ ಪೊಲೀಸರು ಇನ್ಮುಂದೆ ಮಹಾರಾಷ್ಟ್ರ ಸರಕಾರದ ವಿರುದ್ಧ ಘೋಷಣೆ ಕೂಗದಂತೆ ಹಾಗೂ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ನೋಟಿಸ್ ವಿರುದ್ಧ ವ್ಯಕ್ತಪಡಿಸಿರುವ ಉಡಗಿ ಗ್ರಾಮದ ಕನ್ನಡಿಗರು, ಕರ್ನಾಟಕ ಸರಕಾರ ನಮ್ಮ ಬೆಂಬಲಕ್ಕೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಈ ಮೂಲಕ ಕರ್ನಾಟಕಕ್ಕೆ ಸೇರುತ್ತೇವೆ ಎಂದು ಠರಾವು ಪಾಸು ಮಾಡುತ್ತಿರುವ, ಕನ್ನಡ ಪರ ಘೋಷಣೆ ಕೂಗಿರುವ ಗ್ರಾಮಸ್ಥರಿಗೆ ಅಲ್ಲಿನ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

ಕರ್ನಾಟಕಕ್ಕೆ ಸೇರುತ್ತೇವೆ: ಮರಾಠಿ ಹಳ್ಳಿಗಳ ಪಟ್ಟು..!

ಠರಾವು ಪಾಸ್ ಮಾಡಲು 50 ಗ್ರಾ.ಪಂ‌ ಸಿದ್ಧತೆ: ಪೊಲೀಸ್ ಮೂಲಕ ಬಲ ಪ್ರಯೋಗಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ರು, ಅಲ್ಲಿನ ಕನ್ನಡ ಭಾಷಿಕರಲ್ಲಿ ಉತ್ಸಾಹ ಕುಗ್ಗುತ್ತಿಲ್ಲ.‌ ಬದಲಿಗೆ ಅಕ್ಕಲಕೋಟೆ 11 ಗ್ರಾ.ಪಂ ಠರಾವು ಪಾಸ್ ಮಾಡಿದ ಬೆನ್ನಲ್ಲೆ ಮತ್ತೆ 50 ಗ್ರಾ.ಪಂ ಗಳು ಠರಾವು ಪಾಸ್ ಮಾಡಲು ಸಿದ್ಧತೆ ಮಾಡಿಕೊಂಡಿವೆ ಎನ್ನುವ ಮಾಹಿತಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಈ ಮದ್ಯೆ ಕರ್ನಾಟಕ್ಕೆ ಸೇರಿಸಿ ಎನ್ನುವ ಬಿಸಿಯ ನಡುವೆ  ಗಡಿ ವಿವಾದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ  ಸೇರುವ ಕೂಗು ನಿಲ್ಲತ್ತಿಲ್ಲ. ಈ ಬಿಸಿ ಮಹಾರಾಷ್ಟ್ರಕ್ಕೆ  ತಟ್ಟುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸಚಿವರೊಬ್ಬರು ಗಡಿ ಭಾಗದ ಹಳ್ಳಿಯಾಗಿರುವ ತಿಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕನ್ನಡ ಭಾಷಿಕರ ವಿರುದ್ಧ ರಾಜಕಾರಣಿಗಳ ಸಿಟ್ಟು: ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕನ್ನಡಿಗರ ವಿರುದ್ದ ಸಿಟ್ಟಾಗಿರುವ ಸ್ಥಳೀಯ ರಾಜಕೀಯ ಮುಖಂಡರುಗಳು ಹಾಗೂ ಶಾಸಕರು  ಪೊಲೀಸರ ಮೂಲಕ ಗ್ರಾಮಸ್ಥರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ. ನೋಟಿಸ್ ನೀಡುವ ಮೂಲಕ ಕನ್ನಡಿಗರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ತಿಕ್ಕುಂಡಿ ಗ್ರಾಮದ ದ್ವಾರ ಬಾಗಿಲು ಮೇಲೆ ಕನ್ನಡ ಧ್ವಜಾರೋಹಣ ಮಾಡಿದ್ದ ಗ್ರಾಮಸ್ಥರು, ಸಿಎಂ ಬಸವರಾಜ್ ಬೊಮ್ಮಾಯಿಗೆ ಅಭಿನಂದಿಸಿ, ಕರ್ನಾಟಕ ರಾಜ್ಯ ಸೇರ್ಪಡೆಗೆ ತಿಕ್ಕುಂಡಿ ಗ್ರಾಮಸ್ಥರು ಠರಾವು ಪಾಸ್ ಮಾಡಿದ್ದರು. ಇದು ಕೂಡ  ಮರಾಠಿ ಭಾಷಿಕ ರಾಜಕಾರಣಿಗಳು,  ಶಾಸಕರಲ್ಲಿ ಸಿಟ್ಟಿಗೆ ಕಾರಣವಾಗಿದ್ದು ಪೊಲೀಸ್ ಬಲದ ಮೂಲಕ ಬಾಯಿ‌ ಮುಚ್ಚಲು ಇನ್ನಿಲ್ಲದ ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಮಹಾರಾಷ್ಟ್ರದ ಹಲವು ಭಾಗ ಸೇರಿಸಿ ಕರ್ನಾಟಕದ ಹೊಸ ನಕ್ಷೆ ತಯಾರಿ..!

ಮಹಾರಾಷ್ಟ್ರ ಬಿಡುವ ಚಳವಳಿ ಮುಂದುವರಿಕೆ: ರಾಜ್ಯದ ಸುತ್ತಲಿನ ಅಲ್ಪ ಭಾಷಿಕ ಪ್ರದೇಶಗಳು ಮಹಾರಾಷ್ಟ್ರ ಬೀಡುವ ನಿರ್ಣಯ ತೆಗೆದುಕೊಳ್ಳುತ್ತಿವೆ. ಜತ್ತದಿಂದ ಪ್ರಾರಂಭವಾದ ಈ ಚಳುವಳಿ ಅಕ್ಕಲಕೋಟೆ, ಸೊಲ್ಲಾಪುರದಿಂದ ಹಿಡಿದ ನಾಸಿಕ ದಲ್ಲಿಯ ಗುಜರಾತಿ ಭಾಷಿಕರು, ನಾಂದೇಢ ಜಿಲ್ಲೆಯ ತೆಲಗು ಭಾಷಿಕರು ನಮ್ಮ ಪ್ರದೇಶಗಳು ನೆರೆಯ ರಾಜ್ಯಗಳಿಗೆ ಜೋಡಿಸಿ ಎಂಬ ಕೂಗು ತೀವ್ರವಾಗಿದೆ. ಕರ್ನಾಟಕ ಸರಕಾರವು ಬೇಗ ಮುಂದೆ ಬಂದು ಗಡಿನಾಡಿನ ಕನ್ನಡಿಗರ ಬೆಂಬಲಕ್ಕೆ ನಿಲ್ಲಬೇಕು ಎಂದು ಸಹ ಇಲ್ಲಿನ ಕನ್ನಡಿಗರು ಮನವಿ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆ ಸಮಸ್ಯೆ ಜಾಸ್ತಿಯಾಗಿದೆ. ಈಗಾಗಲೇ ಗಡಿ ಭಾಗದ 17 ಗ್ರಾಮ ಪಂಚಾಯ್ತಿಗಳು ಠರಾವು ಪಾಸ್ ಮಾಡಿದ್ದಾರೆ. ಹೀಗೆ ಕರ್ನಾಟಕಕ್ಕೆ ಬೆಂಬಲ ನೀಡಿದವರ ವಿರುದ್ಧ ಪೊಲೀಸರನ್ನು ಬಳಕೆ ಮಾಡಿಕೊಂಡು ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.

click me!