ಭಾರತ ಹಾಕಿ ಆಟಗಾರ್ತಿಯಿಂದ ಈಗ ಗದ್ದೆ ಕೆಲಸ!

By Suvarna NewsFirst Published May 2, 2020, 10:59 AM IST
Highlights

ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇನ್ನು ಭಾರತ ಮಹಿಳಾ ಹಾಕಿ ಆಟಗಾರ್ತಿಯೊಬ್ಬರು ಬಿಡುವಿನ ಸಮಯದಲ್ಲಿ ಗೋಧಿ ಕಟಾವು ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.02): ದೇಶದೆಲ್ಲೆಡೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಮನೆಯಲ್ಲಿ ಇತರ ಚಟುವಟಿಕೆಗಳಿಂದ ಸಮಯ ಕಳೆಯುತ್ತಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ ಪರ ಇನ್ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಪೂನಂ ರಾಣಿ ಮಲ್ಲಿಕ್‌ ಗೋಧಿ ಕೊಯ್ಲಿನಲ್ಲಿ ಬ್ಯುಸಿಯಾಗಿದ್ದಾರೆ.

ಹರಾರ‍ಯಣದ ಹಿಸಾರ್‌ನ ಉಮ್ರಾ ಗ್ರಾಮದ ಪೂನಂ ಮೂಲತಃ ರೈತ ಕುಟುಂಬದಿಂದ ಬಂದವರು. ಇನ್ನೂರಕ್ಕೂ ಹೆಚ್ಚು ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರೂ ಗದ್ದೆ ಕೆಲಸ ಮಾಡುವುದನ್ನು ಮಾತ್ರ ಮರೆತಿಲ್ಲ. ಹರ್ಯಾಣ ಭಾಗದಲ್ಲಿ ಸದ್ಯ ಗೋಧಿ ಕೊಯ್ಲಿನ ಸಂದರ್ಭವಾಗಿದ್ದು, ತಮ್ಮ ಕುಟುಂಬದವರೊಟ್ಟಿಗೆ ಗದ್ದೆಯಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಲಾಕ್‌ಡೌನ್ ಚಾಲ್ತಿಯಲ್ಲಿರುವುದರಿಂದ ರೈತರು ಕೆಲಸಗಾರರ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸ್ವತಃ ಪೂನಂ ತನ್ನ ಸಹೋದರ ಹಾಗೂ ಪೋಷಕರ ಜತೆ ಗದ್ದೆಗಿಳಿದಿದ್ದಾರೆ.

ನಾನು ಇದೇ ಮೊದಲ ಬಾರಿಗೆ ಗೋಧಿ ಕಟಾವಿಗೆ ಬಂದಿದ್ದೇನೆ ಎಂದು ಮಲ್ಲಿಕ್ ಹೇಳಿದ್ದಾರೆ. ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವಳಾದರೂ ಕ್ರೀಡೆಯ ಮೇಲೆ ಹೆಚ್ಚು ಗಮನ ಹರಿಸಿದ್ದರಿಂದ ಸುಗ್ಗಿಯ ಕಾಲದಲ್ಲಿ ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಹಳ್ಳಿಯಲ್ಲಿರುವ ಸಾಕಷ್ಟು ರೈತರು ಗುರುತು-ಪರಿಚಯವಿಲ್ಲದ ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವು ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಹೀಗಾಗಿ ನನ್ನ ಕುಟುಂಬಕ್ಕೆ ನೆರವಾಗಲು ನಾನು ಗದ್ದೆಗಿಳಿದ್ದೇನೆ ಎಂದು ರಾಣಿ ಹೇಳಿದ್ದಾರೆ.

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಹಣ ಪಾವತಿಸದೇ ಆತಿಥ್ಯದ ಹಕ್ಕು ಕಳೆದುಕೊಂಡ ಭಾರತ..!

ಹರ್ಯಾಣ ತಂಡದ ನಾಯಕಿಯಾಗಿರುವ ರಾಣಿ ಲಾಕ್‌ಡೌನ್ ಆರಂಭಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ವಿಯಾಗಿ ಮುನ್ನಡೆಸಿ ತಂಡಕ್ಕೆ ಚಿನ್ನ ಗೆಲ್ಲಿಸಿಕೊಟ್ಟಿದ್ದರು. ಈ ಮೂಲಕ ಹರ್ಯಾಣದ ಸತತ 7 ವರ್ಷಗಳ ಚಿನ್ನದ ಬರವನ್ನು ನೀಗಿಸಿದ್ದರು. ಫಾರ್ವಡ್‌ ಆಟಗಾರ್ತಿಯಾಗಿರುವ ಪೂನಂ ರಾಣಿ ಮಲಿಕ್  2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 

ಬಾಕ್ಸರ್‌ ಅಮಿತ್‌ ಪಂಗಲ್‌, ಮನೋಜ್‌ ಕುಮಾರ್‌, ಪ್ಯಾರಾ ಒಲಿಂಪಿಯನ್‌ ರಿಂಕು ಹೂಡಾ ಕೂಡಾ ತಮ್ಮ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.
 

click me!