ಶ್ರೀ ಹ್ಯಾಲಿ ವಾರ್ ಅವರು ಶಾಲಾ ಶಿಕ್ಷಣ ಪಡೆಯದಿದ್ದರೂ, ಪ್ರಕೃತಿಯೊಂದಿಗೆ ಗಾಢ ಒಡನಾಟ ಹೊಂದಿದ್ದಾರೆ. ಸುಮಾರು ತಮ್ಮ ಹತ್ತನೇ ವಯಸ್ಸಿನಲ್ಲೇ ನೈಸರ್ಗಿಕ ಸೇತುವೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದ ಅವರಿಗೆ ಈಗ ಸುಮಾರು 69ರ ಪ್ರಾಯ. ಈ ವಯಸ್ಸಿನಲ್ಲೂ ತುಂಬು ಉತ್ಸಾಹದಿಂದ ಪರಿಸರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮರದ ಬೇರುಗಳಿಂದಲೇ ಸುಮಾರು 70 ಅಡಿ ಉದ್ದದ ಸೇತುವೆಯನ್ನು ಕಳೆದ 50 ವರ್ಷಗಳಿಂದ ನಿರ್ಮಿಸಿ, ಅದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
“ಚಿಕ್ಕವಯಸ್ಸಿನಲ್ಲೇ ನಾನು ತಂದೆ ಮತ್ತು ತಾತನೊಂದಿಗೆ ಮರದ ಬೇರುಗಳನ್ನು ಸೇತುವೆಯನ್ನಾಗಿ ಪರಿವರ್ತಿಸಲು ತೆರಳುತ್ತಿದ್ದೆ. ಕಾಲಾಂತರದಲ್ಲಿ ಈ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡೆ. ಇದುವರೆಗೂ ಮೂರು ನೈಸರ್ಗಿಕವಾಗಿ ಜೀವ ಹೊಂದಿರುವ ಬೇರುಗಳ ಸೇತುವೆ ನಿರ್ಮಿಸಿದೆ” ಎಂದು ಶ್ರೀ ಹ್ಯಾಲಿ ವಾರ್ ತಿಳಿಸಿದರು.
ಶ್ರೀ ವಾರ್ ಅವರ ಪುತ್ರ ಶ್ರೀ ವಿಲ್ಲಿಂಗ್ ಸನ್ ಅವರು ತಮ್ಮ ತಂದೆಯ ಕುರಿತು ಮಾತನಾಡಿ, ತಂದೆಯ ಕಾರ್ಯ ನಮಗೆ ಬಾಲ್ಯದಿಂದಲೂ ಪ್ರೇರಣೆಯಾಗಿದೆ. ನಾನು ಸಹ ಅವರ ರೀತಿಯಲ್ಲೇ ಸೇತುವೆ ಕಟ್ಟುಯ ಕಾಯಕದಲ್ಲಿ
ತೊಡಗಿಸಿಕೊಂಡಿದ್ದೇನೆ. ಮೇಘಾಲಯದ ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆಗಾಲ ಹಾಗೂ ತುರ್ತು ಸಂದರ್ಭಗಳಲ್ಲಿ ನಾವು ನಿರ್ಮಿಸಿದ ಬೇರಿನ ಸೇತುವೆಗಳು ಜನರ ಸಂಚಾರಕ್ಕೆ ಅನುಕೂಲವಾಗಿದೆ. ಇದು ಮುಖ್ಯವಾಗಿ ನಮ್ಮ ಗ್ರಾಮದಿಂದ ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸಾಧನವಾಗಿದೆ” ಎಂದು ತಿಳಿಸಿದರು.