ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ, ಅವರು ಸಂಚರಿಸುವ ಮಾರ್ಗದ ಸಮೀಪದ ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಫೋಟದ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಘಟನೆಯ ಹಿಂದಿನ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹೊತ್ತಲ್ಲೇ ಸಿಲಿಕಾನ್ ಸಿಟಿಯಲ್ಲಿ ಭಾರಿ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಪ್ರಧಾನಿಗಳು ಸಂಚರಿಸುವ ಮಾರ್ಗದ ಸಮೀಪದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಭದ್ರತಾ ಲೋಪದ ಬಗ್ಗೆ ಅನುಮಾನ ಮೂಡಿಸಿವೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
25
ತಾತಗುಣಿ ಬಳಿ ಸ್ಫೋಟಕ ಪತ್ತೆ: ಏನಿದು ಘಟನೆ?
ಬೆಂಗಳೂರು ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಬಳಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರದೇಶವು ಪ್ರಧಾನಿ ಮೋದಿ ಅವರು ಸಂಚರಿಸುವ ರಸ್ತೆಯ ಸಮೀಪದಲ್ಲೇ ಇರುವುದು ಪೊಲೀಸರ ನಿದ್ದೆ ಗೆಡಿಸಿದೆ. ಆಂಟಿ ಸಬೊಟೇಜ್ ಚೆಕ್ (ASC) ತಂಡವು ಪ್ರಧಾನಿಗಳ ಆಗಮನಕ್ಕೂ ಮುನ್ನ ರಸ್ತೆಯನ್ನು ಸ್ಯಾನಿಟೈಜ್ ಮಾಡುತ್ತಿದ್ದಾಗ, ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಬ್ರಿಡ್ಜ್ ಪಕ್ಕದ ಕಾಂಪೌಂಡ್ ಬಳಿ ಈ ಜಿಲೆಟಿನ್ ಕಡ್ಡಿಗಳನ್ನು ಪತ್ತೆ ಹಚ್ಚಿದೆ.
35
ಪೊಲೀಸರಿಗೆ ಬಂದ 'ಆ' ಒಂದು ಕರೆ!
ಈ ಜಿಲೆಟಿನ್ ಕಡ್ಡಿಗಳ ಪತ್ತೆಯ ಹಿಂದೆ ಕುತೂಹಲಕಾರಿ ಕಥೆಯಿದೆ. ಮುಂಜಾನೆ ಕೋರಮಂಗಲ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. 'ಹೆಚ್ ಎ ಎಲ್ (HAL) ಹಾಗೂ ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದ. ತಕ್ಷಣ ಅಲರ್ಟ್ ಆದ ಬೆಂಗಳೂರು ಪೊಲೀಸರು ರಾಮನಗರ ಭಾಗದ ಪೊಲೀಸರಿಗೆ ಮಾಹಿತಿ ರವಾನಿಸಿದರು. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ತಪಾಸಣೆ ನಡೆಸಿದಾಗ HAL ಬಳಿ ಏನೂ ಸಿಗಲಿಲ್ಲ. ಆದರೆ, ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.
ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಕೋರಮಂಗಲ ಸಮೀಪದ ಮನೆಯೊಂದರಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಈ ಹಿಂದೆಯೂ ವಿಐಪಿಗಳು ನಗರಕ್ಕೆ ಬಂದಾಗಲೆಲ್ಲಾ ಇದೇ ರೀತಿ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಮಾನಸಿಕ ಸ್ಥಿತಿ: ಈ ಹಿಂದೆ ಈತನನ್ನು ವಶಕ್ಕೆ ಪಡೆದಾಗ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದರು.
ಈ ಬಾರಿಯ ಗಂಭೀರತೆ: ಪ್ರತಿ ಬಾರಿ ಕೇವಲ ಹುಸಿ ಕರೆ ಮಾಡುತ್ತಿದ್ದ ವ್ಯಕ್ತಿ, ಈ ಬಾರಿ ಜಿಲೆಟಿನ್ ಕಡ್ಡಿಗಳನ್ನು ಎಸೆದಿರುವುದು ಪೊಲೀಸರ ತೀವ್ರ ತನಿಖೆಗೆ ಕಾರಣವಾಗಿದೆ. ನಿಜವಾಗಿಯೂ ಆತನೇ ಇಟ್ಟಿದ್ದಾನಾ ಅಥವಾ ಇದರ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬ ನಿಟ್ಟಿನಲ್ಲಿ ಸದ್ಯ ನಿಗೂಢ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ.
55
ತನಿಖೆ ತೀವ್ರಗೊಳಿಸಿದ ಕಗ್ಗಲೀಪುರ ಪೊಲೀಸರು
ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. 'ಜಿಲೆಟಿನ್ ಕಡ್ಡಿಗಳು ಸಿಕ್ಕಿರುವುದು ನಿಜ, ಕರೆ ಮಾಡಿದ ವ್ಯಕ್ತಿಗೂ ಈ ಸ್ಫೋಟಕಗಳಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ. ಸದ್ಯ ಸಿಕ್ಕಿರುವ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದ್ದು, ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ