ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ಶತ್ರುಸಂಹಾರ ಯಾಗಕ್ಕಾಗಿ ಕೇರಳದ ಕಣ್ಣೂರಿನಲ್ಲಿರುವ ಪ್ರಸಿದ್ಧ ಮಾಡಾಯಿಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ , ನಟ ಧನ್ವೀರ್ ಸೇರಿ ಆಪ್ತರಿದ್ದರು. ಕಾನೂನು ತೊಡಕಿನಲ್ಲಿಕರುವ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿರುವುದು ಈಗ ಕುತೂಹಲ ಮೂಡಿಸಿದೆ.
ಈ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆಯೇ ಬಹಳ ಫೇಮಸ್. ಪಕ್ಕ ಮಾಂಸಹಾರ ಪ್ರಿಯೆಯೂ ಆಗಿರುವ ಈ ದೇವಿಗೆ ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವು ಪ್ರಭಾವಿಗಳು ಭಕ್ತರಿದ್ದಾರೆ. ಈ ದೇವಾಲಯದ ಹಿನ್ನೆಲೆ, ವಿಶೇಷತೆ, ಕಾರ್ಣಿಕ ಸ್ಟೋರಿ ಇಲ್ಲಿದೆ. ಶತ್ರು ಸಂಹಾರಕ್ಕೆ ಹೆಸರುವಾಸಿಯಾಗಿರುವುದರ ಜೊತೆಗೆ ಇದು ವಾಮಾಚಾರ ಮಾಟಮಂತ್ರ ನಿವಾರಣಾ ಕ್ಷೇತ್ರವೂ ಹೌದು.
ಈ ದೇವಾಲಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿದ್ದು, ಮಂಗಳೂರಿನಿಂದ ತಿರುವನಂತಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಿಗುವ ದೇವಾಲಯವೇ ಮಾಡಾಯಿಕಾವು ಭಗವತೀ ಕ್ಷೇತ್ರ ಅಥವಾ ತಿರುವಾಡು ಭಗವತೀ ದೇವಾಸ್ಥಾನ. ಈ ದೇಗುಲದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಉಗ್ರರೂಪದಲ್ಲಿ ನೆಲೆಸಿದ್ದಾಳೆ ಎಂಬುದು ನಂಬಿಕೆ ಇದೆ. ಶತ್ರು ಸಂಹಾರದಲ್ಲಿ ಈಕೆಯ ಹೊಂದಿರುವಷ್ಟು ಶಕ್ತಿ ಬೇರೆ ಯಾರೂ ಹೊಂದಿರಲಾರರು.
ಈ ದೇವಾಲಯ ಪ್ರಾಚೀನ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ಈ ಪ್ರದೇಶವನ್ನು ಆಳುತ್ತಿದ್ದ ಮೂಶಿಕ ರಾಜವಂಶದವರು ಸ್ಥಾಪಿಸಿದ್ದರು. ಈಕೆ ಮಾಂಸ ಪ್ರೀಯೆಯಾಗಿದ್ದಾಳೆ. ಮಾಟ, ಮಂತ್ರದಂತಹ ಶತ್ರು ಬಾಧೆ ಭಕ್ತರ ಹತ್ತಿರ ಸುಳಿಯದಂತೆ ಮಾಡುತ್ತಾಳೆ ಎಂಬ ನಂಬಿಕೆ ಕ್ಷೇತ್ರದ ಭಕ್ತರದ್ದಾಗಿದೆ.
ರಾತ್ರಿ ಪ್ರದಕ್ಷಿಣೆ ನಿಷಿದ್ಧ
ಈ ದೇವಾಲಯದಲ್ಲಿ ರಾತ್ರಿ ಎಂಟು ಗಂಟೆಯ ನಂತರ ದೇವಸ್ಥಾನದ ಹೊರ ಆವರಣದಲ್ಲಿ ಯಾರೂ ಪ್ರದಕ್ಷಿಣೆ ಹಾಕುವಂತಿಲ್ಲ, ಈ ದೇವಸ್ಥಾನದ ಅರ್ಚಕರು ಹಾಗೂ ಕಾವಲುಗಾರರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲಿ ಇರುವಂತಿಲ್ಲ. ಯಾಕೆಂದರೆ ರಾತ್ರಿ ಎಂಟು ಗಂಟೆಯ ನಂತರ ದೇವಿ ಪಾರ್ವತಿ ರುದ್ರಕಾಳಿಯಾಗಿ ಇಲ್ಲಿ ಸಂಚರಿಸುತ್ತಾಳಂತೆ.
ಭದ್ರಕಾಳಿಗೆ ಪೂಜೆ ಮಾಡುವ ಅರ್ಚಕರು (ಪೂಜಾರಿಗಳು) ಇಲ್ಲಿ ಮಾಂಸ ಸೇವನೆ ಮಾಡುತ್ತಾರೆ. ಕೋಟಿ ಕಲಶಂ ಎನ್ನುವ ಪೂಜೆ ನಡೆಸುವಾಗ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ. ಸಸ್ಯಾಹಾರಿಗಳಿಗೆ ಬೇಯಿಸಿದ ಹೆಸರು ಕಾಳು, ಅಕ್ಕಿ, ಬೆಲ್ಲದಿಂದ ಮಾಡಲಾದ ಪ್ರಸಾದವನ್ನು ಕೊಡಲಾಗುತ್ತದೆ.
ಇಲ್ಲಿ ದೇವಿಗೆ ಬಂಗಾರದ ಕವಚದ ಖಡ್ಗವಿದೆ. ಇದು ಶತ್ರು ಸಂಹಾರದ ಸಂಕೇತವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಈ ಖಡ್ಗವನ್ನು ಹೊರತೆಗೆದು ಪೂಜೆ ಮಾಡಿ ಬಳಿಕ ಭಕ್ತರ ದರ್ಶನಕ್ಕೆ ಇಟ್ಟು ಪೂಜೆಯಾದ ನಂತರ ಮತ್ತೆ ಅದೇ ಸ್ಥಳದಲ್ಲಿ ಇಡಲಾಗುತ್ತದೆ. ಚರಕಲ ರಾಜರು ಯುದ್ಧಕ್ಕೆ ಹೋಗುವ ಮುನ್ನ ಶತ್ರು ಸಂಹಾರಕ್ಕಾಗಿ ಭದ್ರಕಾಳಿಯನ್ನು ಪೂಜಿಸುತ್ತಿದ್ದರಂತೆ.
ಬೆಲ್ಲದ ಪಾಯಸ ,ಪುಷ್ಪಾಂಜಲಿ,ತ್ರಿಕಾಲ ಪುಷ್ಪಾಂಜಲಿ , ರಕ್ತ ಪುಷ್ಪಾಂಜಲಿ ಹೀಗೆ ಇಲ್ಲಿ ಎಂಟು ವಿಧದ ಪೂಜೆ ನಡೆಸಲಾಗುತ್ತದೆ. ಶತ್ರು ಸಂಹಾರ ಪೂಜೆ ಕೇವಲ 100 ರೂ. ಒಳಗೆ ನಡೆಯುತ್ತದೆ. ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಗೆ ಈ ಪೂಜೆ ಮಾಡಲಾಗುತ್ತದೆ. ಈ ವೇಳೆ ಪೂಜೆ ಯಾರು ಮಾಡಿಸುತ್ತಾರೋ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ. ಪೂಜೆ ವಿಧಿ ವಿಧಾನಗಳು ಗೌಪ್ಯವಾಗಿರುತ್ತವೆ.
ಇಲ್ಲಿದೆ ತಲುಪುವುದು ಹೇಗೆ?
ಇಲ್ಲಿಗೆ ಹತ್ತಿರವೆಂದರೆ ಪಯಂಗಡಿ ರೈಲು ನಿಲ್ದಾಣ, ದೇವಾಲಯದಿಂದ ಕೇವಲ 2 ಕಿಮೀ ದೂರದಲ್ಲಿದೆ. ಪರಶುರಾಮ್ ಎಕ್ಸ್ಪ್ರೆಸ್, ಮಂಗಳೂರು ಮೇಲ್, ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್, ಮಲಬಾರ್ ಎಕ್ಸ್ಪ್ರೆಸ್, ಚೆನ್ನೈ ಮೇಲ್, ಮಾವೆಲಿ ಎಕ್ಸ್ಪ್ರೆಸ್, ತಿರುವನಂತಪುರ ಎಕ್ಸ್ಪ್ರೆಸ್ ಇತ್ಯಾದಿ ರೈಲುಗಳು ಇಲ್ಲಿ ಹಾದು ಹೋಗುತ್ತದೆ. ಕಣ್ಣೂರು, ಪಯ್ಯನೂರು, ತಲಿಪರಂಬ ನಿಂದ ಬಸ್ಸುಗಳು ಪಯಾಂಗಡಿಗೆ ತಲುಪುತ್ತವೆ. ಇದು ಪಯಂಗಡಿ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.