ಚಾಮರಾಜ ಕ್ಷೇತ್ರಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿ ಬೇಡ, ನಾನು ಆಕ್ಷಾಂಕ್ಷಿ:ಪ್ರತಾಪ್ ಸಿಂಹ

Published : Jan 15, 2026, 03:04 PM IST

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜ ಕ್ಷೇತ್ರದ ಜನರಿಗೆ ಉಪದ್ರವ ನೀಡುವ ಜನಪ್ರತಿನಿಧಿಗಳು ಬೇಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಾ ಶೈಲಿಯೇ ಕಾರ್ಯಕರ್ತರ ದುರ್ವರ್ತನೆಗೆ ಕಾರಣ ಎಂದು ಆರೋಪಿಸಿದ್ದಾರೆ.

PREV
16
ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿಗಳು ಬೇಡ

ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ರಾಜಕೀಯ, ಚಾಮರಾಜ ಕ್ಷೇತ್ರದ ಭವಿಷ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತ ಕುರಿತು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಆದರೆ ಉಪದ್ರ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

26
ಕಾಂಗ್ರೆಸ್ ನ ವಾಸು ಅಭಿವೃದ್ಧಿ ಸ್ನೇಹಿ ಶಾಸಕ

ಚಾಮರಾಜ ಕ್ಷೇತ್ರದ ಜನಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಉಪದ್ರ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ. ವಿದ್ಯಾವಂತರೆ ಇರುವ ಚಾಮರಾಜ ಕ್ಷೇತ್ರದ ಜನರಿಗೆ ವಿದ್ಯಾವಂತರೆ ಪ್ರತಿನಿಧಿ ಆಗಲು ಬಯಸುತ್ತಾರೆ. ಬಿಜೆಪಿಯ ಶಂಕರಲಿಂಗೇಗೌಡ ಜನಸ್ನೇಹಿ ಶಾಸಕ. ಕಾಂಗ್ರೆಸ್ ನ ವಾಸು ಅಭಿವೃದ್ಧಿ ಸ್ನೇಹಿ ಶಾಸಕ. ಇವರಿಬ್ಬರೂ ನನಗೆ ಸದಾ ಸ್ಮರಣೀಯರು. ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆಕಾಂಕ್ಷಿಗೂ ಅಭ್ಯರ್ಥಿಗೂ ವ್ಯತ್ಯಾಸ ಗೊತ್ತಿಲ್ಲದೆ ಕೆಲವರು ಏನೇನೋ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.

36
ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣ: ‘ಪುಡಾರಿಯನ್ನು ಒದ್ದು ಒಳಗೆ ಹಾಕಿ’

ಶಿಡ್ಲಘಟ್ಟ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅಧಿಕಾರಿಗೆ ಬೆದರಿಕೆ ಹಾಕುವ ಪುಡಾರಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು. ಅಧಿಕಾರಿಗೆ ಧಮ್ಕಿ ಹಾಕಿದವನನ್ನು ಒದ್ದು ಒಳಗೆ ಹಾಕಬೇಕು. ಸಿಎಂ ಸಿದ್ದರಾಮಯ್ಯ ಅವರ ಬಾಯೇ ಬಚ್ಚಲಾಗಿದೆ. ಅವರೇ ಯಾರಿಗೂ ಮರ್ಯಾದೆ ಕೊಡಲ್ಲ. ಅದನ್ನೇ ಅವರ ಪಕ್ಷದ ಕಾರ್ಯಕರ್ತರೂ ಅನುಸರಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

46
ಮುಖ್ಯಮಂತ್ರಿ ಬಳಸುವ ಭಾಷೆಯೇ ಕಾರ್ಯಕರ್ತರ ವರ್ತನೆಗೆ ಕಾರಣ

ಮುಖ್ಯಮಂತ್ರಿ ಬಳಸುವ ಭಾಷೆಯೇ ಕಾರ್ಯಕರ್ತರ ವರ್ತನೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಅವರ ಭಾಷೆ ಸರಿಯಾಗಿದ್ದರೆ, ಅವರ ಕಾರ್ಯಕರ್ತರ ಭಾಷೆಯೂ ಸರಿಯಾಗಿರುತ್ತಿತ್ತು. ಹಿಂದೆಯೂ ಐಎಎಸ್ ಅಧಿಕಾರಿಗೆ ಸಿದ್ದರಾಮಯ್ಯ ಅವರ ಭಂಟರು ನಿಂದಿಸಿದ್ದರು. ಇಂತಹ ಅನೇಕ ಘಟನೆಗಳು ನಡೆದಿವೆ. ಈಗಲೂ ಅದೇ ಸಂಸ್ಕೃತಿ ಮುಂದುವರಿದಿದೆ” ಎಂದು ಹೇಳಿದರು. ರಾಜ್ಯವನ್ನು ಮೊದಲು ಫ್ಲೆಕ್ಸ್ ಮುಕ್ತ ಮಾಡಬೇಕು ಎಂದು ಆಗ್ರಹಿಸಿದ ಪ್ರತಾಪ್ ಸಿಂಹ, ನನ್ನ ಫೋಟೋ ಇದ್ದರೂ ಕೂಡ ಫ್ಲೆಕ್ಸ್‌ಗಳನ್ನು ತೆಗೆಸಬೇಕು ಎಂದು ಸ್ಪಷ್ಟಪಡಿಸಿದರು.

56
‘ರಾಜ್ಯದಲ್ಲಿ ಆಡಳಿತ ಸತ್ತಿದೆ’ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಆಡಳಿತ ಸತ್ತಿದೆ. ಆ ಸತ್ತ ಆಡಳಿತದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿ.ಕೆ. ಶಿವಕುಮಾರ್ ಹಿಂದೆ ಹೊತ್ತಿದ್ದಾರೆ. ಆಡಳಿತದ ಹೆಣವನ್ನು ಮುಂದೆ ಹೊರುವ ಪ್ರಯತ್ನವನ್ನು ಡಿಕೆ ಮಾಡುತ್ತಿದ್ದಾರೆ. ಹೆಣವನ್ನು ಮುಂದೆ ಯಾರಾದರೂ ಹೊರಲಿ, ಹಿಂದೆ ಯಾರಾದರೂ ಹೊರಲಿ – ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಎಂದಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರಾಗುತ್ತಾರೆ. ಜನರು ಅವರನ್ನು ಮರೆಯುವ ದಿನಗಳು ಬಹಳ ದೂರವಿಲ್ಲ ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಜೊತೆಗೆ ಪೈಪೋಟಿ ನಡೆಸುತ್ತಾ ಕೆಲ ದಿನಗಳು ಮಾತ್ರ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು ಎಂದು ಟೀಕಿಸಿದ ಪ್ರತಾಪ್ ಸಿಂಹ, “ಅದರಿಂದ ಯಾವುದೇ ಪ್ರಯೋಜನ ಇಲ್ಲ” ಎಂದರು.

66
‘ಜನರ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ’

ಕಳೆದ ಚುನಾವಣೆಯಲ್ಲಿ ಜನರು ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಪ್ರತಾಪ್ ಸಿಂಹ ಹೇಳಿದರು. “ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತವನ್ನು ಜನರು ಸಹಿಸಿಕೊಳ್ಳಲೇಬೇಕು. ಈ ಸರ್ಕಾರ ಬೀಳುವುದಿಲ್ಲ. ಕುರ್ಚಿಯಲ್ಲಿ ಕುಳಿತುಕೊಳ್ಳುವವರು ಮಾತ್ರ ಬದಲಾಗಬಹುದು” ಎಂದು ಅವರು ವ್ಯಂಗ್ಯವಾಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories