ನಂಜನಗೂಡು ಗೋಳೂರು ಜಾತ್ರೇಲಿ ವಿಡಿಯೋ, ರೀಲ್ಸ್ ನಿಷೇಧ; ಡಂಗೂರದ ಮೂಲಕ ₹30 ಸಾವಿರ ದಂಡದ ಎಚ್ಚರಿಕೆ!

Published : Feb 11, 2026, 01:04 PM IST

ನಂಜನಗೂಡಿನ ಗೋಳೂರು ಗ್ರಾಮದಲ್ಲಿ, ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಒಂದು ವಿನೂತನ ಕ್ರಮ ಕೈಗೊಳ್ಳಲಾಗಿದೆ. ಕಿರುಕುಳ ನೀಡುವ ಅಥವಾ ಅನುಮತಿಯಿಲ್ಲದೆ ವಿಡಿಯೋ ಮಾಡುವ ಕಿಡಿಗೇಡಿಗಳಿಗೆ ₹30,000 ದಂಡ ವಿಧಿಸುವುದಾಗಿ ಡಂಗೂರ ಸಾರಿ ಎಚ್ಚರಿಕೆ ನೀಡಲಾಗಿದೆ.

PREV
16
ಹೆಣ್ಣು ಮಕ್ಕಳ ರಕ್ಷಣೆಗೆ ಡಂಗೂರ

ಮೈಸೂರು (ಫೆ.11): ಹಬ್ಬ ಎಂದರೆ ಸಡಗರ, ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆ, ಹಬ್ಬಗಳ ಹೆಸರಿನಲ್ಲಿ ಕಿಡಿಗೇಡಿಗಳು ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೋಳೂರು ಗ್ರಾಮವೊಂದು ವಿನೂತನ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿದೆ.

26
ವಿನೂತನ ಡಂಗೂರ - ಕಿಡಿಗೇಡಿಗಳಿಗೆ ಎಚ್ಚರಿಕೆ:

ಗೋಳೂರು ಗ್ರಾಮದ ಗ್ರಾಮದೇವತೆಯ ಜಾತ್ರೆಯು ಇಂದಿನಿಂದ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಬರುವ ಭಕ್ತರಿಗೆ ಹಾಗೂ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಗ್ರಾಮದ ಮುಖಂಡರು ಸೇರಿ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ತೀರ್ಮಾನವನ್ನು ಇಡೀ ಗ್ರಾಮಕ್ಕೆ 'ಡಂಗೂರ' ಬಾರಿಸುವ ಮೂಲಕ ಸಾರಲಾಗಿದೆ.

36
30 ಸಾವಿರ ರೂಪಾಯಿ ದಂಡ!

ಜಾತ್ರೆಯ ವೇಳೆ ಬರುವ ಹೆಣ್ಣುಮಕ್ಕಳನ್ನು ರೇಗಿಸುವುದು, ಅವಹೇಳನ ಮಾಡುವುದು ಅಥವಾ ಅವರ ಅನುಮತಿಯಿಲ್ಲದೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಕಂಡುಬಂದರೆ ಅಂತಹವರಿಗೆ ಬರೋಬ್ಬರಿ 30,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಂಗೂರದಲ್ಲಿ ಎಚ್ಚರಿಸಲಾಗಿದೆ. ಕೇವಲ ವಿಡಿಯೋ ಮಾಡುವುದು ಮಾತ್ರವಲ್ಲದೆ, ಕುಡಿದು ಗಲಾಟೆ ಮಾಡುವವರು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವವರಿಗೂ ಈ ನಿಯಮ ಅನ್ವಯವಾಗಲಿದೆ.

46
ಏಕೆ ಈ ಕಠಿಣ ಕ್ರಮ?

ಸಾಮಾನ್ಯವಾಗಿ ಜಾತ್ರೆಗಳಲ್ಲಿ ಜನದಟ್ಟಣೆಯ ಲಾಭ ಪಡೆಯುವ ಕೆಲ ಪುಂಡರು ಮಹಿಳೆಯರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಅಥವಾ ಅವರನ್ನು ಕೆಣಕುವುದು ಮಾಡುತ್ತಿರುತ್ತಾರೆ. ಇದು ಅನೇಕ ಬಾರಿ ದೊಡ್ಡ ಜಗಳಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಗೌರವ ಕಾಪಾಡಲು ಮತ್ತು ಮಹಿಳೆಯರ ಸುರಕ್ಷತೆಗಾಗಿ ಗ್ರಾಮದ ಮುಖಂಡರು ಈ 'ದಂಡದ ಅಸ್ತ್ರ'ವನ್ನು ಬಳಸಿದ್ದಾರೆ.

56
ಗ್ರಾಮಸ್ಥರ ಮೆಚ್ಚುಗೆ

ಗ್ರಾಮದ ಮುಖಂಡರ ಈ ಹಠಾತ್ ಹಾಗೂ ಕಠಿಣ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಜಾತ್ರೆ ಎನ್ನುವುದು ಭಕ್ತಿಯ ಸಂಕೇತವಾಗಿರಬೇಕು. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಸುರಕ್ಷಿತ ಭಾವನೆ ಇರಬೇಕು. ಈ ದಂಡದ ಭಯದಿಂದಾದರೂ ಕಿಡಿಗೇಡಿಗಳು ಹದ್ದುಬಸ್ತಿನಲ್ಲಿರುತ್ತಾರೆ' ಎಂಬುದು ಸ್ಥಳೀಯರ ಅಭಿಪ್ರಾಯ.

66
ಎಷ್ಟು ಜಾರಿ ಆಗುತತೆ ಕಾದು ನೋಡಬೇಕು

ಒಟ್ಟಿನಲ್ಲಿ, ಆಧುನಿಕ ಕಾಲದ ತಂತ್ರಜ್ಞಾನದ ದುರುಪಯೋಗವನ್ನು ತಡೆಯಲು ಗ್ರಾಮೀಣ ಭಾಗದ ಜನರು ಈ ರೀತಿ ಒಗ್ಗಟ್ಟಾಗಿ ನಿರ್ಧಾರ ಕೈಗೊಂಡಿರುವುದು ಮಾದರಿಯಾಗಿದೆ. ಇಂದಿನಿಂದ ಆರಂಭವಾಗುವ ಗೋಳೂರು ಗ್ರಾಮದೇವತೆಯ ಜಾತ್ರೆಯಲ್ಲಿ ಈ ನಿಯಮ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories