ಮೈಸೂರಿನ ಐತಿಹಾಸಿಕ ಕೆಎಸ್ಐಸಿ ಕಾರ್ಖಾನೆಯ ಭೂಮಿಯನ್ನು ಕ್ರೀಡಾಂಗಣಕ್ಕೆ ಬಳಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು 112 ವರ್ಷಗಳ ಸಂಸ್ಥೆ ಮುಚ್ಚುವ ಸಂಚನ್ನ ಮಾ.6ರೊಳಗೆ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಮೈಸೂರು (ಫೆ.28): ಮೈಸೂರಿನ ಐತಿಹಾಸಿಕ ಕೆಎಸ್ಐಸಿ (KSIC) ರೇಷ್ಮೆ ಕಾರ್ಖಾನೆಯ ಭೂಮಿಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಈ ಕಾರ್ಖಾನೆಯನ್ನು ಮುಚ್ಚಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಲಾಭದ ಹಣದಲ್ಲಿ ಕಾರ್ಮಿಕರಿಗೆ ಸೌಲಭ್ಯ ನೀಡುವ ಬದಲು ಭೂಮಿ ಪರಭಾರೆ ಮಾಡುತ್ತಿರುವುದು ಖಂಡನೀಯ' ಎಂದು ಗುಡುಗಿದ್ದಾರೆ. ಶುಕ್ರವಾರ ತಿ.ನರಸೀಪುರದಲ್ಲಿ ನಡೆದ ರೇಷ್ಮೆ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು.
25
112 ವರ್ಷಗಳ ಇತಿಹಾಸವಿರುವ 'ತಾಯಿ'ಯಂತಿರುವ ಸಂಸ್ಥೆ
'ಮೈಸೂರು ರೇಷ್ಮೆ ಕಾರ್ಖಾನೆಗೆ 112 ವರ್ಷಗಳ ಭವ್ಯ ಇತಿಹಾಸವಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂಗ್ಲೆಂಡ್ ಮತ್ತು ಸ್ವಿಜರ್ಲ್ಯಾಂಡ್ನ ತಂತ್ರಜ್ಞಾನವನ್ನು ತರಿಸಿ ಈ ಉದ್ಯಮ ಆರಂಭಿಸಿದ್ದರು. ಈ ಕಾರ್ಖಾನೆ ನಮಗೆ ತಾಯಿಯಿದ್ದಂತೆ. ಆದರೆ ಕಾಂಗ್ರೆಸ್ ಸರ್ಕಾರ ತಾಯಿಯ ಕೆಚ್ಚಲನ್ನು ಕತ್ತರಿಸುವ ಕೆಲಸ ಮಾಡುತ್ತಿದೆ. ಸುಮಾರು 2,000 ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವ ಈ ಸಂಸ್ಥೆಯನ್ನು ಮುಚ್ಚಲು ಸಂಚು ರೂಪಿಸಲಾಗಿದೆ' ಎಂದು ಅಶೋಕ ಆಪಾದಿಸಿದರು.
35
ಕಾಂಗ್ರೆಸ್ ನಾಯಕರ ಹಿತಾಸಕ್ತಿಗಾಗಿ ಸರ್ಕಾರಿ ಘಟಕ ಬಲಿ?
ಸ್ಥಳೀಯ ಕಾಂಗ್ರೆಸ್ ನಾಯಕರು ಸ್ವಂತ ನೂಲು ತೆಗೆಯುವ ಕಾರ್ಖಾನೆಗಳನ್ನು ಹೊಂದಿದ್ದು, ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರಿ ಕಾರ್ಖಾನೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಅಶೋಕ ಗಂಭೀರ ಆರೋಪ ಮಾಡಿದರು. 'ಚೀನಾದ ನೂಲು ಖರೀದಿಸಿದರೆ ಕಮಿಷನ್ ಸಿಗುತ್ತದೆ ಎಂಬ ಕಾರಣಕ್ಕೆ ಈ ದಂಧೆ ನಡೆಯುತ್ತಿದೆ. 96 ಕೋಟಿ ರೂ. ಲಾಭ ಬಂದಿದ್ದರೂ ಕಾರ್ಮಿಕರ ವೇತನ ಹೆಚ್ಚಿಸಿಲ್ಲ. ಬದಲಾಗಿ ಅಧಿಕಾರಿಗಳ ವಿದೇಶಿ ಪ್ರವಾಸಕ್ಕೆ ಒಂದೂವರೆ ಕೋಟಿ ರೂ. ವ್ಯರ್ಥ ಮಾಡಲಾಗಿದೆ' ಎಂದು ಕಿಡಿಕಾರಿದರು.
6 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವುದರಿಂದ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಪಟ್ಟಿ ಮಾಡಿದ ಅಶೋಕ, 'ಕ್ರೀಡಾಂಗಣಕ್ಕಾಗಿ 430 ಮರಗಳನ್ನು ಕಡಿಯಬೇಕಾಗುತ್ತದೆ. ಕಾರ್ಖಾನೆಯ ಬಾಯ್ಲರ್ ಪಕ್ಕದಲ್ಲೇ ಕ್ರೀಡಾಂಗಣ ಬಂದರೆ ಭದ್ರತಾ ಕಾರಣಗಳಿಂದ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ಸಿಗುವುದಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ಜಾಗ ಸಿಗುತ್ತದೆ, ಲೇಔಟ್ ಮಾಡಲು ಭೂಮಿ ಇದೆ, ಆದರೆ ಕ್ರೀಡಾಂಗಣಕ್ಕೆ ಕಾರ್ಖಾನೆಯ ಜಾಗವೇ ಬೇಕೆ? ಪಕ್ಕದಲ್ಲೇ 18 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಅಲ್ಲಿ ಕ್ರೀಡಾಂಗಣ ನಿರ್ಮಿಸಿ' ಎಂದು ಸಲಹೆ ನೀಡಿದರು.
55
ಮಾರ್ಚ್ 6ರ ಒಳಗೆ ನಿರ್ಧಾರ ಹಿಂಪಡೆಯಲು ಆಗ್ರಹ
'ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದವರ ಪರ ಧ್ವನಿ ಎತ್ತಿದ್ದರು. ಕಾಂಗ್ರೆಸ್ ಆ ಆಶಯಗಳನ್ನು ಮಣ್ಣುಪಾಲ ಮಾಡುತ್ತಿದೆ. ಸರ್ಕಾರ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದರೆ ನಾವು ಮುತ್ತಿಗೆ ಹಾಕುತ್ತೇವೆ. ಮಾರ್ಚ್ 6ರ ಒಳಗೆ ಈ ಯೋಜನೆಯನ್ನು ಕೈಬಿಡದಿದ್ದರೆ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು' ಎಂದು ಅಶೋಕ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.