ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಸರ್ಕಾರ ವಿಶ್ವಾಸಮತ ಗೆದ್ದ ನಂತರ, ಅಣ್ಣಾ ಡಿಎಂಕೆ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ ಕಾರಣ, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು ತಮ್ಮದೇ ಪಕ್ಷದ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.
ದಕ್ಷಿಣ ಭಾರತದ ರಾಜಕೀಯದ ದೈತ್ಯ ಶಕ್ತಿ ತಮಿಳುನಾಡಿನಲ್ಲಿ ಈಗ ದೊಡ್ಡ ಮಟ್ಟದ ರಾಜಕೀಯ ಹೈಡ್ರಾಮಾ ಶುರುವಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ, ಪ್ರಮುಖ ವಿರೋಧ ಪಕ್ಷವಾದ ಅಣ್ಣಾ ಡಿಎಂಕೆ (AIADMK) ನಡುಕಕ್ಕೀಡಾಗಿದೆ. ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ ತನ್ನದೇ ಪಕ್ಷದ 25 ಬಂಡಾಯ ಶಾಸಕರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಿ ಎಡಪ್ಪಾಡಿ ಪಳನಿಸ್ವಾಮಿ (EPS) ಕಠಿಣ ಆದೇಶ ಹೊರಡಿಸಿದ್ದಾರೆ.
26
ಇಪಿಎಸ್ ಗುಡುಗು: ಹಿರಿಯ ನಾಯಕರಿಗೂ ಇಲ್ಲ ವಿನಾಯಿತಿ
ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದ ಶಾಸಕರ ವಿರುದ್ಧ ಚಾಟಿ ಬೀಸಿದ್ದಾರೆ. ಹಿರಿಯ ನಾಯಕರಾದ ಎಸ್ಪಿ ವೇಲುಮಣಿ ಮತ್ತು ಸಿವಿ ಶಣ್ಮುಗಂ ಸೇರಿದಂತೆ ಒಟ್ಟು 25 ಶಾಸಕರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಕಿತ್ತೆಸೆಯಲಾಗಿದೆ. ಈ ಶಾಸಕರು ವಿಜಯ್ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂಬುದು ಇಪಿಎಸ್ ಕೋಪಕ್ಕೆ ಪ್ರಮುಖ ಕಾರಣವಾಗಿದೆ.
36
ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ದಿಗ್ವಿಜಯ
ವಿಧಾನಸಭೆಯಲ್ಲಿ ನಡೆದ ಹೈವೋಲ್ಟೇಜ್ ವಿಶ್ವಾಸಮತ ಯಾಚನೆಯಲ್ಲಿ ವಿಜಯ್ ಸರ್ಕಾರ ಭರ್ಜರಿ ಜಯ ಸಾಧಿಸಿದೆ. ಸರ್ಕಾರ ಉಳಿಸಿಕೊಳ್ಳಲು 117 ಮತಗಳ ಅಗತ್ಯವಿತ್ತು. ಆದರೆ, ವಿಜಯ್ ಪರವಾಗಿ ಒಟ್ಟು 144 ಮತಗಳು ಚಲಾವಣೆಯಾದವು. ಟಿಿವಿಕೆಯ ಸ್ವಂತ 107 ಶಾಸಕರ ಬಲದ ಜೊತೆಗೆ, ಕಾಂಗ್ರೆಸ್ನ 5, ಎಐಎಡಿಎಂಕೆಯ 25 ಬಂಡಾಯಗಾರರು ಹಾಗೂ ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಎಎಂಎಂಕೆ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಅಧಿಪತ್ಯ ಸ್ಥಾಪಿಸಿದ್ದಾರೆ.
ಬಂಡಾಯ ಎದ್ದಿರುವ ಶಾಸಕರು ಇಪಿಎಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಐಎಡಿಎಂಕೆಯ ಮೂಲ ತತ್ವವಾದ ಡಿಎಂಕೆ ವಿರೋಧಿ ನಿಲುವನ್ನು ಪಳನಿಸ್ವಾಮಿ ಅವರು ದುರ್ಬಲಗೊಳಿಸುತ್ತಿದ್ದಾರೆ. ವಿಜಯ್ ಅವರ ಟಿಿವಿಕೆ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಭರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬುದು ಬಂಡಾಯ ಶಾಸಕರ ವಾದ. ಇದೇ ಕಾರಣಕ್ಕೆ ಅವರು ವಿಶ್ವಾಸಮತದಲ್ಲಿ ವಿಜಯ್ ಪರ ನಿಲುವು ತಾಳಿದ್ದಾರೆ ಎಂದು ಹೇಳಲಾಗುತ್ತಿದೆ.
56
ದೂರ ಉಳಿದ ಡಿಎಂಕೆ, ತಟಸ್ಥ ಬಿಜೆಪಿ-ಪಿಎಂಕೆ
ಇನ್ನು ರಾಜ್ಯದ ಪ್ರಮುಖ ಪಕ್ಷವಾದ ಡಿಎಂಕೆ ಈ ವಿಶ್ವಾಸಮತ ಪ್ರಕ್ರಿಯೆಯಿಂದ ದೂರ ಉಳಿದು ಅಚ್ಚರಿ ಮೂಡಿಸಿದೆ. ಬಿಜೆಪಿಯ ಏಕೈಕ ಶಾಸಕ ಹಾಗೂ ಪಿಎಂಕೆಯ ನಾಲ್ವರು ಶಾಸಕರು ಸಹ ಮತದಾನದಲ್ಲಿ ಭಾಗವಹಿಸದೆ ತಟಸ್ಥ ನಿಲುವು ತಳೆದಿದ್ದಾರೆ. ಎಐಎಡಿಎಂಕೆಯ 22 ಶಾಸಕರು ಮಾತ್ರ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ.
66
ಕುದುರೆ ವ್ಯಾಪಾರದ ಆರೋಪ: ವಿಜಯ್ ಸ್ಪಷ್ಟನೆ
ಈ ಅನಿರೀಕ್ಷಿತ ಬೆಂಬಲದ ಬೆನ್ನಲ್ಲೇ ಟಿವಿಕೆ ಪಕ್ಷವು 'ಕುದುರೆ ವ್ಯಾಪಾರ' ನಡೆಸಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದಿವೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ನಟ ವಿಜಯ್, 'ಯಾವುದೇ ಅಡ್ಡದಾರಿ ಹಿಡಿದು ಬೆಂಬಲ ಪಡೆದಿಲ್ಲ. ಬದಲಾವಣೆಯನ್ನು ಬಯಸಿರುವ ಶಾಸಕರು ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ, ವಿಜಯ್ ಸರ್ಕಾರದ ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆಯಂತಹ ಸಾಂಪ್ರದಾಯಿಕ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿದೆ. ಮುಂದಿನ ದಿನಗಳಲ್ಲಿ ಈ 25 ಶಾಸಕರ ಭವಿಷ್ಯವೇನು ಹಾಗೂ ಎಐಎಡಿಎಂಕೆ ಈ ಹೊಡೆತದಿಂದ ಹೇಗೆ ಚೇತರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ