ಚುನಾವಣೆಗೂ ಮುನ್ನ ಘೋಷಿಸುವ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ದೇಶದ ಆರ್ಥಿಕತೆಗೆ ಮಾರಕವಾದ ಇಂತಹ ನೀತಿಗಳ ಬದಲು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೆಂದು ನ್ಯಾಯಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒತ್ತಿಹೇಳಿದೆ.
ಚುನಾವಣೆಗೂ ಮುನ್ನ ಘೋಷಿಸುವ ಉಚಿತ ಹಂಚಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಎಲ್ಲಾ ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಉಚಿತ ಘೋಷಣೆ ಸಂಸ್ಕೃತಿಯನ್ನು ಖಂಡಿಸಿದ ಸುಪ್ರೀಂ ಕೋರ್ಟ್, ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ಇಂತಹ ನೀತಿಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಹೇಳಿದೆ.
28
ಎಂಥಾ ಸಂಸ್ಕೃತಿ ಬೆಳೆಸುತ್ತಿದ್ದೀರಿ?
"ದೇಶದಲ್ಲಿ ನಾವು ಎಂತಹ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ? ಕಲ್ಯಾಣ ಯೋಜನೆಯ ಭಾಗವಾಗಿ, ವಿದ್ಯುತ್ ಶುಲ್ಕವನ್ನು ಪಾವತಿಸಲು ಅಶಕ್ತರಾಗಿರುವವರಿಗೆ ಸಹಾಯ ಮಾಡುವುದು ಅರ್ಥವಾಗುವಂತಹ ವಿಚಾರ," ಎಂದು ನ್ಯಾಯಪೀಠ ಹೇಳಿದೆ.
38
ತುಷ್ಟೀಕರಣ ನೀತಿ ಅಲ್ಲವೆ..
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು, "ಶಕ್ತಿ ಇರುವವರು ಮತ್ತು ಇಲ್ಲದವರ ನಡುವೆ ಯಾವುದೇ ವ್ಯತ್ಯಾಸ ಮಾಡದೆ ಉಚಿತ ಘೋಷಣೆಗಳನ್ನು ಹಂಚುವುದು ತುಷ್ಟೀಕರಣದ ನೀತಿಯಾಗುವುದಿಲ್ಲವೇ?" ಎಂದು ರಾಜ್ಯಗಳನ್ನು ಪ್ರಶ್ನಿಸಿತು.
ಗ್ರಾಹಕರ ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ತಮಿಳುನಾಡು ವಿದ್ಯುತ್ ವಿತರಣಾ ನಿಗಮದ ಪ್ರಸ್ತಾವನೆಯನ್ನು ಗಮನಿಸಿದ ನ್ಯಾಯಾಲಯ, "ರಾಜ್ಯಗಳು ಬಡವರಿಗೆ ಆಸರೆಯಾಗುವುದು ಅರ್ಥಪೂರ್ಣ. ಆದರೆ, ಪಾವತಿಸುವ ಸಾಮರ್ಥ್ಯ ಇರುವವರು ಮತ್ತು ಇಲ್ಲದವರ ನಡುವೆ ವ್ಯತ್ಯಾಸವನ್ನೇ ಗುರುತಿಸದೆ ನೀವು ಉಚಿತವಾಗಿ ನೀಡಲು ಹೊರಟಿದ್ದೀರಿ" ಎಂದು ಸಿಜೆಐ ಸೂರ್ಯಕಾಂತ್ ಆಕ್ಷೇಪ ವ್ಯಕ್ತಪಡಿಸಿದರು.
58
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ
ಉಚಿತ ಘೋಷಣೆಗಳು ದೇಶದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸರ್ಕಾರಗಳು ಎಲ್ಲರಿಗೂ ಉಚಿತ ಆಹಾರ, ಸೈಕಲ್, ವಿದ್ಯುತ್ ನೀಡುವ ಬದಲು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ.
68
ರಾಜ್ಯಗಳ ಕಂದಾಯ ಕೊರತೆ ಹೆಚ್ಚಿದೆ
"ದೇಶದ ಹೆಚ್ಚಿನ ರಾಜ್ಯಗಳು ಕಂದಾಯ ಕೊರತೆಯನ್ನು ಎದುರಿಸುತ್ತಿವೆ. ಹೀಗಿದ್ದರೂ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಇಂತಹ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆ," ಎಂದು ಪೀಠವು ಹೇಳಿತು.
78
ಕೆಲಸ ಮಾಡುವವರು ಯಾರು?
"ರಾಜ್ಯಗಳು ಉದ್ಯೋಗದ ಹಾದಿಗಳನ್ನು ತೆರೆಯಲು ಶ್ರಮಿಸಬೇಕು. ನೀವು ಬೆಳಿಗ್ಗೆಯಿಂದ ಸಂಜೆಯವರೆಗೆ ಉಚಿತ ಆಹಾರ, ಉಚಿತ ವಿದ್ಯುತ್, ಉಚಿತ ಗ್ಯಾಸ್ ನೀಡುತ್ತಾ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಿದರೆ, ಮುಂದೆ ಯಾರು ಕೆಲಸ ಮಾಡುತ್ತಾರೆ? ಆಗ ಕೆಲಸದ ಸಂಸ್ಕೃತಿ ಏನಾಗುತ್ತದೆ? ಇದೇನಾ ನೀವುಗಳು ಮಾಡುವ ರಾಷ್ಟ್ರ ನಿರ್ಮಾಣ?" ಎಂದು ಸಿಜೆಐ ಸೂರ್ಯಕಾಂತ್ ಪ್ರಶ್ನೆ ಮಾಡಿದ್ದಾರೆ.
88
ಎಲ್ಲಾ ರಾಜ್ಯಗಳಿಗೂ ಅನ್ವಯಿಸುವ ವಿಚಾರ
ನ್ಯಾಯಮೂರ್ತಿ ಬಾಗ್ಚಿ ಅವರು ಈ ವಿಷಯವಾಗಿ ಮಾತನಾಡಿ, "ಇದು ಕೇವಲ ಒಂದು ರಾಜ್ಯದ ವಿಷಯವಲ್ಲ, ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಇದು ಯೋಜಿತ ವೆಚ್ಚವಾಗಿದ್ದು, ಬಜೆಟ್ ಪ್ರಸ್ತಾಪಗಳಲ್ಲಿ ನಿರುದ್ಯೋಗ ನಿರ್ಮೂಲನೆಗೆ ಎಷ್ಟು ಹಣ ವ್ಯಯಿಸಲಾಗುತ್ತಿದೆ ಎಂಬ ಸಮರ್ಥನೆಯನ್ನು ಸರ್ಕಾರಗಳು ಏಕೆ ನೀಡುವುದಿಲ್ಲ?" ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ